ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆಯಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ನಿಂದಾಗಿ ವಾಹನ ದಟ್ಟಣೆ ಉಂಟಾಗುತ್ತಿದೆ. ಪರಿಣಾಮ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಪ್ರಯಾಣಿಕರು ಹರಸಾಹಸವನ್ನೇ ಮಾಡುವಂತಾಗಿದೆ.
ಈ ಮಾರ್ಗವಾಗಿ ಚಿಕ್ಕಬಳ್ಳಾಪುರ, ಬಳ್ಳಾರಿ, ಅನಂತಪುರಂ, ಹೈದರಾಬಾದ್ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ. ಏರ್ಪೋರ್ಟ್ಗೆ ಹೋಗುವ ಮತ್ತು ಹೊರಬರುವ ಪ್ರಯಾಣಿಕರಿಗೆ ಸಮಸ್ಯೆ ಆಗಬಾರದೆಂದು 29 ಕಿಮೀ.ರಸ್ತೆಯನ್ನು ಸಿಗ್ನಲ್ ಫ್ರೀ ಮಾಡಲಾಗಿದೆ. ಆದರೂ ಟ್ರಾಫಿಕ್ ಜಾಮ್ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ. ಬೆಂಗಳೂರು ನಗರ ಸಂಚಾರಿ ಪೊಲೀಸರು ಕಳೆದ ನಾಲ್ಕು ವರ್ಷಗಳಿಂದ ಅಧ್ಯಯನ ನಡೆಸಿ, ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್ನಲ್ಲಿ ಟ್ರಾಫಿಕ್ ಜಾಮ್ ನಿವಾರಣೆ ಹಾಗೂ ವಾಹನಗಳ ಓಡಾಟದಲ್ಲಿ ಬದಲಾವಣೆ ತರಲು ಮುಂದಾಗಿದ್ದಾರೆ.
ಮುಖ್ಯರಸ್ತೆಗಳ ಬದಲು ಸರ್ವೀಸ್ ರಸ್ತೆ ಬಳಸಿ: ಯಲಹಂಕ, ಕೊಡಿಗೇಹಳ್ಳಿ, ಕೆಂಪಾಪುರ, ಜಕ್ಕೂರು ಕಡೆಗಳಿಂದ ಬರುವ ಜನರು ನೇರವಾಗಿ ಫ್ಲೈಓವರ್ ಹತ್ತುವ ಬದಲು ಲೂಪ್ರ್ಯಾಂಪ್ ಬಳಸಿ ನಗರಕ್ಕೆ ಬರುವಂತೆ ಸೂಚಿಸಲಾಗಿದೆ. ಬರುವ ಶುಕ್ರವಾರದಿಂದ ಈ ಆದೇಶ ಜಾರಿಯಾಗಲಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ತಿಳಿಸಿದರು.
ನೇರವಾಗಿ ಎಕ್ಸ್ಪ್ರೆಸ್ವೇಯಲ್ಲಿ ಬರುವ ವಾಹನಗಳು ಮಾತ್ರ ಹೆಬ್ಬಾಳ ಮೂಲಕ ನಗರ ತಲುಪಬಹುದು. ಏರ್ಪೋರ್ಟ್ ಎಲೆವೇಟೆಡ್ ಕಾರಿಡರ್ನಿಂದ ಬರುವ ಬಸ್ಗಳು ಹೆಬ್ಬಾಳ ಸರ್ಕಲ್ ಬಳಿ ನಿಗದಿತ ಸ್ಥಳದಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು. ಕೆ.ಆರ್.ಪುರ ಕಡೆಗೆ ಹೋಗುವವರು ಸರ್ವೀಸ್ ರಸ್ತೆ ಬಳಸಿಕೊಳ್ಳಬೇಕು.
ಏರ್ಪೋರ್ಟ್ ಹೆದ್ದಾರಿ ಮೂಲಕ ಕೆಂಪಾಪುರ ತಲುಪುವವರು ಯಲಹಂಕ ವಿದ್ಯಾಶಿಲ್ಪ, ಯಲಹಂಕ ಬೈಪಾಸ್ ಬಳಸಿಕೊಳ್ಳಬೇಕು. ಹೆಬ್ಬಾಳ ಬಸ್ ನಿಲ್ದಾಣದಲ್ಲಿ ಬಸ್ಗಳ ನಿಲುಗಡೆ ಸ್ಥಳ ಬದಲು, ಪಾದಚಾರಿ ರಸ್ತೆ ದಾಟಲು ವ್ಯವಸ್ಥೆ, ಅಡ್ಡಾದಿಡ್ಡಿ ವಾಹನ ನಿಲುಗಡೆ ನಿಷೇಧದ ಕ್ರಮಗಳು ಜುಲೈ 8ರಿಂದ ಹಂತಹಂತವಾಗಿ ಏರ್ಪೋರ್ಟ್ ರಸ್ತೆಯಲ್ಲಿ ಚಾಲ್ತಿಗೆ ಬರಲಿವೆ.
ಹೆಬ್ಬಾಳ ಜಂಕ್ಷನ್ನಲ್ಲಿ ಟ್ರಾಫಿಕ್ ಜಾಮ್ ನಿವಾರಣೆಗೆ ಸುದೀರ್ಘ ಅಧ್ಯಯನ ನಡೆದಿದೆ. ಮೇಲ್ಸೇತುವೆ ಅಗಲೀಕರಣವನ್ನು ಸರ್ಕಾರ ಮಾಡಲಿದೆ. ಸದ್ಯ ಸಂಚಾರಿ ಪೊಲೀಸರು, ಬಿಬಿಎಂಪಿ, ಬಿಎಮ್ಆರ್ಸಿಎಲ್, ಎನ್ಹೆಚ್ಗಳ ಜಂಟಿ ಸಮಾಲೋಚನೆ ನಡೆಸಿ ರಸ್ತೆ ಸಂಚಾರದಲ್ಲಿ ಕೆಲವು ಬದಲಾವಣೆ ಜಾರಿಗೆ ತಂದಿರುವುದಾಗಿ ಜಂಟಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: ಕನ್ಹಯ್ಯಾ ಲಾಲ್ ಹತ್ಯೆ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ ಬಾಲಕಿಗೆ ಜೀವ ಬೆದರಿಕೆ