ಬೆಂಗಳೂರು: ಸರ್ಕಾರ ಕೆಡವಲು ಸಿಂಗಪುರ್ನಲ್ಲಿ ಕುಳಿತು ತಂತ್ರ ಹೆಣೆಯಲಾಗುತ್ತಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಫೋಟೋಗಳ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಡಕ್ ಉತ್ತರ ನೀಡಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಕುಟುಂಬ ಸಮೇತರಾಗಿ ಯೂರೋಪ್ ಪ್ರವಾಸದಲ್ಲಿರುವ ಫೋಟೋಗಳನ್ನು ಜೆಡಿಎಸ್ ನಾಯಕರು ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಯುರೋಪ್ನ ಫಿನ್ಲ್ಯಾಂಡ್ನಲ್ಲಿ ಹೆಚ್ಡಿಕೆ ಹಾಗೂ ಕುಟುಂಬ ಸದಸ್ಯರು ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.
ವಿಧಾನಸಭಾ ಅಧಿವೇಶನ ಮುಗಿದ ಬೆನ್ನಲ್ಲೇ ಹೆಚ್.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಸಹೋದರ ಬಾಲಕೃಷ್ಣ ಗೌಡ, ಸಹೋದರಿ ಸೇರಿದಂತೆ ಅವರ ಕುಟುಂಬದ 24 ಸದಸ್ಯರು ವಿದೇಶ ಪ್ರವಾಸಕ್ಕೆ ತೆರಳಿದ್ದರು. ಮತ್ತೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಸಿಂಗಾಪುರ್ನಲ್ಲಿ ಕುಳಿತು ಕಾಂಗ್ರೆಸ್ ಸರ್ಕಾರ ಬೀಳಿಸುವ ಕಾರ್ಯ ತಂತ್ರ ಮಾಡುತ್ತಿರುವ ಬಗ್ಗೆ ನಮಗೂ ಮಾಹಿತಿ ಇದೆ ಎಂಬ ಹೇಳಿಕೆ ನೀಡಿದ್ದರು.
![HD Kumaraswamy shared a photo from his foreign trip](https://etvbharatimages.akamaized.net/etvbharat/prod-images/28-07-2023/kn-bng-02-hdk-gave-twist-to-foreign-politics-script-7208083_28072023113728_2807f_1690524448_285.jpg)
ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಸಿಎಂ ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ವಿದೇಶದಲ್ಲಿ ತಂತ್ರಗಾರಿಕೆ ಆಗುತ್ತಿದೆಯೇ? ಎಂಬ ಚರ್ಚೆಗಳು ನಡೆದಿದ್ದವು. ಡಿ.ಕೆ.ಶಿವಕುಮಾರ್ ಅವರು ಸಿಂಗಾಪುರ್ ಬಗ್ಗೆ ನೀಡಿದ ಹೇಳಿಕೆಯ ನಾಲ್ಕು ದಿನಗಳ ನಂತರ ವಿದೇಶಿ ರಾಜಕೀಯಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಸಚಿವರ ಸಭೆ: 371ಜೆ ಅಡಿ ಅನುದಾನ ದುರ್ಬಳಕೆ ಆರೋಪ - ತನಿಖೆಗೆ ನಿರ್ಧಾರ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬ ಸದಸ್ಯರ ಫೋಟೋ ಹಂಚಿಕೊಳ್ಳಲಾಗಿದೆ. ಯುರೋಪ್ನಲ್ಲಿ ಸುತ್ತಾಡುತ್ತಿರುವ ಹೆಚ್ಡಿಕೆ ಕುಟುಂಬ ಸದ್ಯ ಫಿನ್ಲ್ಯಾಂಡ್ನಲ್ಲಿದೆ. ದಳಪತಿ ಕುಟುಂಬದ ಸದಸ್ಯರು ಫಿನ್ಲ್ಯಾಂಡ್ನಲ್ಲಿ ಜಾಲಿ ಟ್ರಿಪ್ ಮಾಡುತ್ತಿದ್ದು, ನಾವು ಸಿಂಗಾಪುರದಲ್ಲಿ ಇಲ್ಲ ಅನ್ನೋ ಸಂದೇಶ ರವಾನಿಸಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಹೋರಾಟಕ್ಕೆ ಜೆಡಿಎಸ್ ಬೆಂಬಲ ಸೂಚಿಸಿದ ನಂತರ ಮಾಜಿ ಸಿಎಂ ಕುಮಾರಸ್ವಾಮಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದರು.
![HD Kumaraswamy shared a photo from his foreign trip](https://etvbharatimages.akamaized.net/etvbharat/prod-images/28-07-2023/kn-bng-02-hdk-gave-twist-to-foreign-politics-script-7208083_28072023113728_2807f_1690524448_924.jpg)
ಕುಟುಂಬ ಸದಸ್ಯರು, ಆಪ್ತರೊಂದಿಗೆ ಕುಮಾರಸ್ವಾಮಿ ವಿದೇಶ ಪ್ರವಾಸದಲ್ಲಿರುವ ಫೋಟೋಗಳು ಬಹಿರಂಗಗೊಂಡ ಬಳಿಕ ಊಹಾಪೋಹಗಳಿಗೆ ಕಡಿವಾಣ ಬಿದ್ದಿದೆ. ಕಳೆದ ಭಾನುವಾರ ಹೆಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸದಸ್ಯರೊಂದಿಗೆ ಯೂರೋಪ್ ಪ್ರವಾಸ ಕೈಗೊಂಡಿದ್ದು, ಆಗಸ್ಟ್ 2 ರಂದು ನಗರಕ್ಕೆ ವಾಪಸಾಗಲಿದ್ದಾರೆ.
ವಿದೇಶ ಪ್ರವಾಸಲ್ಲಿ ಬಿಎಸ್ವೈ: ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪುತ್ರ, ಶಾಸಕ ಬಿ.ವೈ.ವಿಜಯೇಂದ್ರ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಗುರುವಾರ ಬೆಳಗಿನ ಜಾವ ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಿಬ್ಬರು ಏಕಕಾಲಕ್ಕೆ ವಿದೇಶ ಪ್ರವಾಸದಲ್ಲಿರುವುದು ಸಹಜವಾಗಿಯೇ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: CM Siddaramaiah: ಬೇಕೆಂದೇ ದಾರಿ ತಪ್ಪಿಸುವ ಕೆಲಸ ಮಾಡ್ತಾರೆ, ಹುಷಾರಾಗಿರಿ: ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು