ಬೆಂಗಳೂರು: ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿದ್ದರೆ ಈಗೇಕೆ ಸೀರೆ, ಹಣ ಹಂಚುವ ಪ್ರಮೇಯ ಬರುತ್ತಿತ್ತು. ಗೊತ್ತಿದ್ದು, ಗೊತ್ತಿದ್ದು ಕಾಂಗ್ರೆಸ್ನವರು ತಪ್ಪು ಮಾಡಿದ್ದಾರೆ. ಒಬ್ಬ ಪ್ರಾಮಾಣಿಕ ರಾಜಕಾರಣಿ ಸೃಷ್ಟಿ ಆಗಬೇಕು ಎಂದರೆ ಅದು ಜನರ ಕೈಯಲ್ಲಿದೆ. ರಾಷ್ಟ್ರೀಯ ಪಕ್ಷಗಳ ವ್ಯಾಮೋಹದಿಂದ ಹೊರಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಜರಾಜೇಶ್ವರಿನಗರ ಕ್ಷೇತ್ರದ ವಿವಿಧ ಕಡೆ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಇಂದು ಸಂಜೆ ರೋಡ್ ಶೋ ನಡೆಸಿ ಮತಯಾಚಿಸಿದ ಅವರು, ಲೂಟಿ ಹೊಡೆಯುವವರಿಗೆ ಮತ ಹಾಕಬೇಡಿ ಎಂದು ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಅವರ ಮಾತಿಗೆ ಗೌರವ ಕೊಡುತ್ತೀರಾ..? ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೀರಾ..? ಯೋಚಿಸಿ ಮತಚಲಾಯಿಸಿ, ಯುವಕರಿಗೆ, ಪ್ರಾಮಾಣಿಕರಿಗೆ ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಸಾವಿರಾರು ಮನೆಗಳು ಕುಸಿದಿವೆ, ಸಂಪೂರ್ಣ ಬೆಳೆ ನಾಶ ಆಗಿದೆ. ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ನೀಡುವ ಕಾರ್ಯವಲ್ಲ, ಸಾಂತ್ವನ ಹೇಳುವ ಕಾರ್ಯ ಕೂಡ ಈ ಸರ್ಕಾರ ಮಾಡಿಲ್ಲ. ಎಲ್ಲ ಸಚಿವರು ಉಪಚುನಾವಣೆ ಎಂದು ಬ್ಯುಸಿ ಆಗಿದ್ದಾರೆ. ಸರ್ಕಾರಕ್ಕೆ ಜನರ ಸಂಕಷ್ಟಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಕ್ಷೇತ್ರಗಳಿಗೆ ಕುಮಾರಸ್ವಾಮಿ ಅವರು ಅನುದಾನ ನೀಡಿಲ್ಲ ಎಂದು ಕಾಂಗ್ರೆಸ್ ಶಾಸಕರು ಆರೋಪಿಸುತ್ತಾರೆ. ಆದರೆ, ಅವರ ಕ್ಷೇತ್ರಗಳಿಗೆ ಒಟ್ಟು 16 ಸಾವಿರ ಕೋಟಿ ರೂ. ಅನುದಾನ ನೀಡಿದ್ದೆ. ನಾನು ನೀಡಿದ ಅನುದಾನವನ್ನು ಬಿ.ಎಸ್.ಯಡಿಯೂರಪ್ಪ ಅವರು ವಾಪಸ್ ಪಡೆದಿದ್ದಾರೆ ಎಂದು ಬಿಜೆಪಿ ಶಾಸಕರೇ ಬಸನಗೌಡ ಪಾಟೀಲ್ ಅವರೇ ಬಹಿರಂಗವಾಗಿ ಹೇಳುತ್ತಾರೆ. ಇಂತಹ ರಾಷ್ಟ್ರೀಯ ಪಕ್ಷಗಳನ್ನು ನೀವು ನಂಬುತ್ತೀರಾ ಎಂದು ಜನರನ್ನು ಪ್ರಶ್ನಿಸಿದರು.
ಮಾಜಿ ಪ್ರಧಾನಿ ದೇವೇಗೌಡರ ಪ್ರಯತ್ನದಿಂದ ಬೆಂಗಳೂರಿಗೆ ಕಾವೇರಿ ನೀರು ಬಂದಿದೆ. ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಗಳ ಮೇಲ್ದರ್ಜೆಗೆ 60 ಕೋಟಿ ರೂ. ಅನುದಾನ ನೀಡಿದ್ದೆ, ಜಯದೇವದಲ್ಲಿ ಬಡವರಿಗೆ ಉಚಿತ ಡಯಾಲಿಸಿಸ್ ವ್ಯವಸ್ಥೆ ಮಾಡಿದೆ. ಸಾರಾಯಿ, ಲಾಟರಿ ಟಿಕೆಟ್ ಸಂಪೂರ್ಣ ನಿಷೇಧ, ಸಾಲ ಮನ್ನಾ, ವೃದ್ಧಾಪ್ಯ ವೇತನ, ವಿಧವಾ ಮಾಸಾಶನಗಳ ಸಹಾಯಧನ ಹೆಚ್ಚಿಸುವ ಅಭಿವೃದ್ಧಿ ಕಾರ್ಯಗಳನ್ನು ಸಿಕ್ಕ ಅಲ್ಪಾವಧಿಯಲ್ಲಿಯೇ ಮಾಡಿದ್ದೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪರಿಷತ್ ಸದಸ್ಯ ಟಿ.ಎ.ಶರವಣ, ಕಾಂಗ್ರೆಸ್ ನಾಯಕರು ಜಾತಿ ಆಧಾರದ ಮೇಲೆ ರಾಜಕೀಯ ಮಾಡುವುದಕ್ಕೆ ಹೊರಟಿದ್ದರೆ, ಬಿಜೆಪಿ ಅಭ್ಯರ್ಥಿ ಕ್ರಮ ಸಂಖ್ಯೆ ಮೂರು ಎಂದು ಹೇಳುತ್ತಾ ಮೂರನೇ ಬಾರಿ ನಾಮ ಹಾಕುವುದಕ್ಕೆ ತಯಾರಾಗಿದ್ದಾರೆ. ಹಣ, ಸೀರೆ ಹಂಚಿದ್ದಾಗಿದೆ. ಈಗ ಸೆಟ್ ಟಾಪ್ ಬಾಕ್ಸ್ ನೀಡುತ್ತಿದ್ದಾರೆ. ಯಾವುದೇ ರೀಲ್ ಸ್ಟಾರ್ ಬಂದರೂ ನಮ್ಮ ರಿಯಲ್ ಸ್ಟಾರ್ ಕುಮಾರಣ್ಣನಿಗೆ ಏನು ಆಗಲ್ಲ ಎಂದರು.