ಬೆಂಗಳೂರು : ಮೈಸೂರಿನ ಅಜ್ಜಯ್ಯನಹುಂಡಿ ಕೆರೆಯನ್ನು ಮುಚ್ಚಿ ಅದರಲ್ಲಿ ನಿವೇಶನಗಳನ್ನು ನಿರ್ಮಿಸುತ್ತಿದ್ದರೂ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿರುವ ಹಿನ್ನೆಲೆ ಕೆರೆಯ ಸಂರಕ್ಷಣೆಗೆ ಸಂಬಂಧಿಸಿದಂತೆ ಯಾವ ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸುವಂತೆ ಪ್ರಾಧಿಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ.
ಮೈಸೂರಿನ ಹೊರವಲಯದಲ್ಲಿರುವ ಕೇರಗಳ್ಳಿ ಕೆರೆ ಹಾಗೂ ಅಯ್ಯಜ್ಜಯನ ಹುಂಡಿ ಕೆರೆಯನ್ನು ತ್ಯಾಜ್ಯ ಸುರಿದು ಮುಚ್ಚಲಾಗುತ್ತಿದೆ. ಜತೆಗೆ ಈ ಜಾಗದಲ್ಲಿ ಅಕ್ರಮವಾಗಿ ನಿವೇಶನಗಳನ್ನು ನಿರ್ಮಿಸಲಾಗುತ್ತಿದೆ ಎಂದು ಆಕ್ಷೇಪಿಸಿ ಸ್ಥಳೀಯ ನಿವಾಸಿ ಶಿವಕುಮಾರ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಮೈಸೂರು ಮಹಾನಗರ ಪಾಲಿಕೆ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಕೆರೆ ನೀರಿಲ್ಲದೆ ಬತ್ತಿದೆ ಎಂಬ ಹಿನ್ನೆಲೆ ಸರ್ಕಾರವೇ ಜಾಗವನ್ನು 2002ರಲ್ಲಿ ಪಾಲಿಕೆಗೆ ಹಸ್ತಾಂತರಿಸಿತ್ತು. ಅಜ್ಜಯ್ಯನಹುಂಡಿ ಕೆರೆ ಜಾಗವಾದ ಸರ್ವೆ ನಂಬರ್ 17ರಲ್ಲಿನ 10.32 ಎಕರೆ ಜಾಗವನ್ನು ಆಶ್ರಯ ಯೋಜನೆ ಅಡಿ ನಿವೇಶನ ನೀಡಲೆಂದು ಪಾಲಿಕೆಗೆ ಕೊಟ್ಟಿತ್ತು. ಈ ಸಂಬಂಧ ಸದ್ಯದಲ್ಲೇ ದಾಖಲೆಗಳನ್ನು ಪೀಠಕ್ಕೆ ಸಲ್ಲಿಸಲಾಗುವುದು ಎಂದರು.
ಹೇಳಿಕೆ ದಾಖಲಿಸಿಕೊಂಡ ಪೀಠ ಸರ್ಕಾರ ಹಾಗೂ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು, ಕೆರೆ ಜಾಗವನ್ನು ಕೆರೆಯಾಗಿಯೇ ಉಳಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೆ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬಾರದು. ಸರ್ಕಾರ ಪಾಲಿಕೆಗೆ ಹಸ್ತಾಂತರಿಸಿರುವ ಆದೇಶವನ್ನು ರದ್ದುಗೊಳಿಸುತ್ತೇವೆ ಎಂದು ಮೌಖಿಕವಾಗಿ ಆಕ್ರೋಶ ವ್ಯಕ್ತಪಡಿಸಿತು.
ಅಲ್ಲದೇ, ಎರಡು ಕೆರೆಗಳನ್ನು ಸರ್ವೆ ಮಾಡಿ ವರದಿ ನೀಡಬೇಕು. ಅಯ್ಯಜಯ್ಯನ ಹುಂಡಿ ಕೆರೆಯ ಒಟ್ಟು ವಿಸ್ತೀರ್ಣ, ಎಷ್ಟು ಎಕರೆ ಜಮೀನನ್ನು ಒತ್ತುವರಿ ಮಾಡಲಾಗಿದೆ. ನಿವೇಶನಗಳಿಗೆ ನಿಗದಿ ಪಡಿಸಿರುವ ವಿಸ್ತೀರ್ಣವೆಷ್ಟು ಎಂಬುದರ ಕುರಿತು ವಿವರವಾದ ವರದಿ ಸಲ್ಲಿಸಬೇಕು. ಜತೆಗೆ ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಕ್ರಮಕೈಗೊಂಡ ವರದಿಯನ್ನು ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಏ.22ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ : ಮೈಸೂರಿನ ಹೊರವರ್ತುಲ ರಸ್ತೆಯ ಸಮೀಪದಲ್ಲಿ ಅಯ್ಯಜ್ಜಯ್ಯನಹುಂಡಿ ಗ್ರಾಮದ ಸರ್ವೇ ನಂಬರ್ 17ರಲ್ಲಿ 10 ಎಕರೆ 32 ಗುಂಟೆಯಲ್ಲಿ ಅಜ್ಜಯ್ಯನಹುಂಡಿ ಕೆರೆ ಇದೆ. ಹಾಗೆಯೇ ಕೇರಗಳ್ಳಿ ಗ್ರಾಮದ ಸರ್ವೇ ನಂಬರ್ 58ರಲ್ಲಿ 9 ಎಕರೆ 9 ಗುಂಟೆ ಜಾಗದಲ್ಲಿ ಕೇರಗಳ್ಳಿ ಕೆರೆ ಇದೆ.
ಈ ಎರಡೂ ಕೆರೆಗಳನ್ನು ಕಟ್ಟಡ ತ್ಯಾಜ್ಯ ಸುರಿದು ಮುಚ್ಚಿ ಲೇಔಟ್ ನಿರ್ಮಿಸಲಾಗುತ್ತಿದೆ. ಆದ್ದರಿಂದ, ಒತ್ತುವರಿ ತೆರವುಗೊಳಿಸಿ ಹಾಗೂ ತ್ಯಾಜ್ಯ ವಿಲೇವಾರಿ ತಡೆಗಟ್ಟಿ ಕೆರೆಗಳನ್ನು ಸಂರಕ್ಷಿಸಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.