ಬೆಂಗಳೂರು: ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ವಿಶೇಷವಾಗಿ ಗುರುಪೂರ್ಣಿಮೆ ಆಚರಿಸಲಾಯಿತು. ಶಿರಡಿ ಸಾಯಿ ಬಾಬಾರಿಗೆ ವಿಶೇಷ ಅಲಂಕಾರ, ವೈಭವದ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಜರುಗಿದವು. ಶಿರಡಿ ಬಾಬಾರನ್ನು 20 ಸಾವಿರ ತೆಂಗಿನಕಾಯಿ, 2,500 ಪರಂಗಿ, ಹಲಸಿನ ಹಣ್ಣು, 5,000 ಬೆಲ್ಲದ ಅಚ್ಚುಗಳು, 25, 000ಕ್ಕೂ ಕ್ಕೂ ಹೆಚ್ಚು ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಹಣ್ಣುಗಳು, ಅಸಂಖ್ಯಾತ ನವಧಾನ್ಯಗಳ ಮೂಲಕ ವಿಶೇಷ ಅಲಂಕಾರ ಮಾಡಲಾಗಿತ್ತು.
![Gurupurnima in Sri Sathya Ganapati Shirdi Sai Trust and Ramakrishna Math](https://etvbharatimages.akamaized.net/etvbharat/prod-images/03-07-2023/kn-bng-02-guru-poornima-from-shiradi-sai-trust-7210969_03072023150824_0307f_1688377104_782.jpg)
ಗುರುಪೂರ್ಣಿಗೆ ಬಾಬಾ ಹಿಂದೆಂದಿಗಿಂತಲೂ ಈ ಬಾರಿ ವಿಶೇಷವಾಗಿ ಕಂಗೊಳಿಸಿದರು. ಕಂದು ಬಣ್ಣದ ಎಳನೀರಿನಿಂದಲೂ ವಿಶೇಷ ಅಲಂಕಾರ ಮಾಡಲಾಗಿದೆ ಎಂದು ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನ ಟ್ರಸ್ಟಿ ರಾಮಮೋಹನ್ ರಾಜ್ ತಿಳಿಸಿದರು. ಸಾಯಿ ಬಾಬಾರಿಗೆ ಅಲಂಕಾರ ಮಾಡಿದ ಎಲ್ಲ ವಸ್ತುಗಳನ್ನು ಮರಳಿ ಭಕ್ತರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಹಣ್ಣಾದ ಪರಂಗಿ, ಹಲಸು ಮತ್ತಿತರ ಆಹಾರ ವಸ್ತುಗಳನ್ನು ಸ್ಥಳದಲ್ಲಿಯೇ ಭಕ್ತಾದಿಗಳಿಗೆ ಸಮರ್ಪಿಸಲಾಗುತ್ತಿದೆ. ಕಳೆದ ವರ್ಷ ಕ್ರೀಡಾ ಪರಿಕರಗಳಿಂದ ಬಾಬಾ ರನ್ನು ಸಿಂಗರಿಸಲಾಗಿತ್ತು. ನಂತರ 500 ಶಾಲೆಗಳಿಗೆ ಈ ವಸ್ತುಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದರು.
![Gurupurnima in Sri Sathya Ganapati Shirdi Sai Trust and Ramakrishna Math](https://etvbharatimages.akamaized.net/etvbharat/prod-images/03-07-2023/kn-bng-03-guru-poornima-at-ramakrishna-mutt-7210969_03072023173834_0307f_1688386114_770.jpg)
ನಿರಂತರ ಪ್ರಸಾದ ವಿತರಣೆ: ಗುರು ಪೂರ್ಣಿಮೆ ನಿಮಿತ್ತ ಗುರು ಶಿರಡಿ ಬಾಬಾರಿಗೆ ಅಭಿಷೇಕ, ಹೋಮ, ಪ್ರಸಾದ ಸೇವೆ, ಅಲಂಕಾರ ಸೇವೆ, ಸರ್ವ ಸೇವೆ ಒಳಗೊಂಡಂತೆ ಎಲ್ಲಾ ರೀತಿಯ ಪೂಜಾ ವಿಧಿ ವಿಧಾನಗಳನ್ನು ಏರ್ಪಡಿಸಲಾಗಿದೆ. ಇಂದು ಬೆಳಗ್ಗೆಯಿಂದ ರಾತ್ರಿವರೆಗೆ ಭಕ್ತರಿಗೆ ನಿರಂತರವಾಗಿ ಪ್ರಸಾದ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
![Gurupurnima in Sri Sathya Ganapati Shirdi Sai Trust and Ramakrishna Math](https://etvbharatimages.akamaized.net/etvbharat/prod-images/03-07-2023/kn-bng-03-guru-poornima-at-ramakrishna-mutt-7210969_03072023173834_0307f_1688386114_336.jpg)
ಬೇಧ-ಭಾವವಿಲ್ಲದೆ ದರ್ಶನ ವ್ಯವಸ್ಥೆ: ಪ್ರತಿವರ್ಷ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸಲಾಗುತ್ತದೆ. ಈ ಬಾರಿ ಮತ್ತಷ್ಟು ಸಂಭ್ರಮ ಮತ್ತು ವಿಶೇಷತೆಗಳೊಂದಿಗೆ ಸಾಯಿ ಬಾಬಾರ ಸ್ಮರಣೆಗೆ ವ್ಯವಸ್ಥೆ ಮಾಡಲಾಗಿದೆ. ಬಾಬಾರ ಸಬ್ ಕಾ ಮಾಲೀಕ್ ಏಕ್ ಹೇ ಎಂಬ ಪರಿಕಲ್ಪನೆಯಡಿ ಬಡವ, ಬಲ್ಲಿದ ಎನ್ನುವ ಬೇಧ - ಭಾವವಿಲ್ಲದೇ ಎಲ್ಲ ಸಮುದಾಯದವರಿಗೆ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಗುರುವಿನ ಶ್ರೇಷ್ಠತೆಯನ್ನು ತಿಳಿಸುವುದು ಗುರುಪೂರ್ಣಿಮೆಯ ಮೂಲ ಉದ್ದೇಶವಾಗಿದೆ: ನಮ್ಮ ಗುರು ಪರಂಪರೆಯಲ್ಲಿ ಭೋಧಕರನ್ನು ಮೂರು ವಿಭಾಗಗಳಲ್ಲಿ ವಿಭಾಗಿಸಿ ನೋಡಬಹುದಾಗಿದೆ. ಉಪಾದ್ಯಾಯ, ಆಚಾರ್ಯ, ಗುರು. ಬುದುಕಿನ ಬಗೆಗೆ ಸಾಮಾನ್ಯ ಜ್ಞಾನವನ್ನು ನೀಡುವವನು ಉಪಾದ್ಯಾಯನಾದರೆ, ಜೀವನದ ನಡೆ ನುಡಿಯ ಬಗ್ಗೆ ತಿಳಿಸುವವ ಆಚಾರ್ಯ. ಆಧ್ಯಾತ್ಮಿಕ ಜ್ಞಾನವನ್ನು ಜಾಗೃತ ಗೊಳಿಸುವವ ಗುರುವಾಗಿದ್ದಾನೆ. ಆದ್ದರಿಂದ ಗುರುವಿನ ಶ್ರೇಷ್ಠತೆಯನ್ನು ತಿಳಿಸುವುದು ಗುರುಪೂರ್ಣಿಮೆಯ ಮೂಲ ಉದ್ದೇಶವಾಗಿದೆ ಎಂದು ಬಸವನಗುಡಿಯ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್ ತಿಳಿಸಿದರು.
ಸೋಮವಾರ ನಗರದ ಬಸವನಗುಡಿಯ ರಾಮಕೃಷ್ಣ ಮಠದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಈ ವೇಳೆ ಸ್ವಾಮಿ ನಿತ್ಯಾನಂದಜೀ ಮಹಾರಾಜ್ ಉಪನ್ಯಾಸ ನೀಡಿ ಒಬ್ಬ ಮನುಷ್ಯ ಸಹಜವಾಗಿ ಉಸಿರಾಡುವ ರೀತಿಯಲ್ಲಿ ಅಧ್ಯಾತ್ಮದ ದಾರಿ ತೋರಿ ನೆಡೆಸುವವನು, ಪರಿವರ್ತನೆ ತರುವವನು ಗುರುವಾಗಿದ್ದಾನೆ. ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕವಾಗಿ ಹೊಸ ಜೀವನವನ್ನು ನೀಡುವ ಗುರು ಒಬ್ಬರೆ, ಅವನ ಮೂಲಕ ಶಕ್ತಿ ಪ್ರವಹಿಸುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ ಎಂದು ಹೇಳಿದರು.
ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯ: ರಾಮಕೃಷ್ಣ ಮಠದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಬೆಳಗ್ಗೆ 5 ರಿಂದಲೇ ಪೂಜಾ ಕಾರ್ಯಕ್ರಮಗಳು ನಡೆದವು. ಉಷಃಕೀರ್ತನೆ, ಶ್ರೀವಿಷ್ಣು ಸಹಸ್ರನಾಮ ಪಾರಾಯಣ, ಶ್ರೀರಾಮಕೃಷ್ಣರಿಗೆ ಅಷ್ಟೋತ್ತರ ಅರ್ಚನೆ, ಆರಾತ್ರಿಕ ಜೈಕಾರ ಮತ್ತು ಪ್ರಸಾದ ವಿತರಣೆ ನಡೆದವು. ಸಂಜೆಯ ವೇಳೆ ಡಾ. ರವೀಂದ್ರ ಕಾಟೋಟಿಯಿಂದ "ಭಕ್ತಿ ಸಂವಾದಿನಿ" ಹಾರ್ಮೋನಿಯಂ ವಾದನ, ಸಂಧ್ಯಾ ಆರತಿ ಮತ್ತು ಭಜನೆ ನಡೆಯಿತು.
ಇದನ್ನೂ ಓದಿ: Watch... ಬೇರೆಡೆ ವರ್ಗಾವಣೆಗೊಂಡ ಶಿಕ್ಷಕನಿಗೆ ಕಣ್ಣೀರ ವಿದಾಯ ಹೇಳಿದ ವಿದ್ಯಾರ್ಥಿಗಳು