ಬೆಂಗಳೂರು: ಕೂಲಿ ಕಾರ್ಮಿಕರ ನೆರವಿಗೆ ಸರ್ಕಾರ ಬರಲಿ. ಅವರವರ ಊರುಗಳಿಗೆ ಕಳುಹಿಸುವ ಕೆಲಸ ಸರ್ಕಾರ ಮಾಡಲಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂಬಂಧ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಸರ್ಕಾರದ ಖರ್ಚಿನಲ್ಲಿ ಇವರನ್ನೆಲ್ಲ ಊರಿಗೆ ಕಳುಹಿಸಿ ಕೊಡಲಿ. ಮೊನ್ನೆ ಅಹಮದ್ ಬಾದ್ ಕಡೆ ಹೊರಟಿದ್ದ ಕಾರ್ಮಿಕರು ರೈಲು ಅಪಘಾತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಹೀಗಾಗಿ ರಾಜ್ಯದಿಂದ ಹೊರ ರಾಜ್ಯಕ್ಕೆ ಹೋಗಬೇಕು ಎನ್ನುವವರನ್ನು ಕಳುಹಿಸಿಕೊಡಲು ವ್ಯವಸ್ಥೆ ಮಾಡಿ ಎಂದರು.
ಅಲ್ಲದೇ ಹೊರರಾಜ್ಯದಲ್ಲಿರುವ ಕನ್ನಡಿಗ ಕೂಲಿ ಕಾರ್ಮಿಕರನ್ನ ರಾಜ್ಯಕ್ಕೆ ಕರೆಸಿಕೊಳ್ಳುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಈ ವಿಚಾರವಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬಿ.ಎಸ್. ಯಡಿಯೂರಪ್ಪಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.