ಆನೇಕಲ್: ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ದೀಪಾವಳಿ ಹಬ್ಬದ ದಿನ ಹೊಂಚು ಹಾಕಿ ಪಟಾಕಿ ಅಂಗಡಿ ಮಾಲೀಕನನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದರು. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಜಯ್, ಯಮನೂರು ನಾಯ್ಕ, ನವೀನ್, ಜೊಬಿನ್, ಗೌತನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 7 ಲಕ್ಷದ 16 ಸಾವಿರ ನಗದು, ಒಂದು ಲಾಂಗ್, ಎರಡು ದ್ವಿಚಕ್ರ ವಾಹನ, ಐದು ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ. ಅಂದಹಾಗೆ ದೀಪಾವಳಿ ಹಬ್ಬದ ದಿನ ಅಂಗಡಿ ಮಾಲೀಕ ಚಂದ್ರಶೇಖರ್ ಚಲನವಲನ ಗಮನಿಸಿ ಈ ಗ್ಯಾಂಗ್ ಅಡ್ಡಗಟ್ಟಿ ಸುಲಿಗೆ ಮಾಡಿದ್ದರು.
ಕಾರಿನಲ್ಲಿ ತಮಿಳುನಾಡಿನ ಹೊಸೂರು ಕಡೆ ಹೊರಟಿದ್ದ ಚಂದ್ರಶೇಖರ್ ಅವರನ್ನು ಅಡ್ಡಗಟ್ಟಿ ರಾಬರಿ ಮಾಡಿದ್ದರು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 20 ಲಕ್ಷ ಹಣ ದೋಚಿ ಪರಾರಿಯಾಗಿದ್ದರು. ಜತೆಗೆ ಈ ಹಣವನ್ನು ಐಷಾರಾಮಿ ಜೀವನ ನಡೆಸಲು ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕ್ಕಿಬಿದ್ದಿರೋ ಆರೋಪಿ ಅಜಯ್ ಎಂಬಾತ ಈ ಹಿಂದೆ ಇಂತಹ ಕೃತ್ಯಗಳನ್ನು ಎಸಗಿ ಜೈಲಿಗೆ ಹೋಗಿ ಬಂದಿದ್ದ. ಇದೀಗ ಮತ್ತದೆ ಕೃತ್ಯಗಳನ್ನ ಮಾಡಿ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ:ಪ್ರೇಮಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ.. ಅನುಮಾನಪಟ್ಟು ಪ್ರೀತಿಸಿದವಳನ್ನೇ ಕೊಂದ ಲವರ್