ಬೆಂಗಳೂರು: ಕೊರೊನಾ ಭೀತಿಯ ನಡೆವೆಯೂ ನಗರದಲ್ಲಿ ಗಣೇಶ ಹಬ್ಬಕ್ಕೆ ಸಿದ್ಧತೆ ಜೋರಾಗಿ ನಡೆದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಆಗಮಿಸಿದೆ.
ವಿಶೇಷ ಅಂದ್ರೆ, ಈ ವರ್ಷ ಡಾಕ್ಟರ್ ಅವತಾರದಲ್ಲಿ ಗಣೇಶ ಮೂರ್ತಿ ಮಾರುಕಟ್ಟೆಗೆ ಎಂಟ್ರಿಕೊಟಿದ್ದು, ಡಾ.ಗಣೇಶ ಜನರನ್ನು ಆಕರ್ಷಿಸುತ್ತಿದ್ದಾನೆ.
ವಿಶೇಷವಾದ ಗಣೇಶ ಮೂರ್ತಿಗಳ ಮಾರುಕಟ್ಟೆಗೆ ಪರಿಚಯಿಸಿರುವ ಗಣೇಶ ವ್ಯಾಪಾರಿ ಶ್ರೀಧರ್, ಈ ವರ್ಷ ಕೊರೊನಾಗೆ ಚಿಕಿತ್ಸೆ ಕೊಡ್ತಿರೋ ವೈದ್ಯ ಗಣೇಶ ಮೂರ್ತಿಯನ್ನು ರೆಡಿ ಮಾಡಿಸಿದ್ದಾರೆ.
ಸದ್ಯ ಕೊರೊನಾ ಜನರಲ್ಲಿ ಆತಂಕ ಸೃಷ್ಟಿ ಮಾಡಿದ್ದು, ಜನರಲ್ಲಿ ಕೊರೊನಾ ಅರಿವು ಮೂಡಿಸುವ ಸಲುವಾಗಿ ಡಾಕ್ಟರ್ ಗಣೇಶನನ್ನು ಮಾಡಲಾಗಿದೆ. 6 ಜನ ಕಾರ್ಮಿಕರು ಎರಡು ತಿಂಗಳು ಕೆಲಸ ಮಾಡಿ, ಕೊರೊನಾಗೆ ಚಿಕಿತ್ಸೆ ಕೊಡ್ತಿರುವ ಡಾ.ಗಣೇಶ ಮೂರ್ತಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ನಮ್ಮ ಕುಟುಂಬ ಸುಮಾರು 75 ವರ್ಷಗಳಿಂದ ಗಣೇಶ ಮೂರ್ತಿ ವ್ಯಾಪಾರ ಮಾಡಿಕೊಂಡು ಬಂದಿದೆ. ಯಾವ ವರ್ಷವೂ ಈ ರೀತಿ ಸಮಸ್ಯೆ ಆಗಿರಲಿಲ್ಲ. ಜನರು ಸಂತೋಷದಿಂದ ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡ್ತಿದ್ರು. ಈ ಸಲ ಕೊರೊನಾದಿಂದ ತುಂಬಾ ತೊಂದರೆಯಾಗಿದ್ದು, ಹಬ್ಬ ಮಾಡುವುದಕ್ಕೆ ಜನರಲ್ಲಿ ಉತ್ಸಾಹವಿಲ್ಲ ಎಂದು ಅವರು ತಿಳಿಸಿದರು.
ಗಣೇಶ ಬಂದು ಎಲ್ಲಾ ಸಮಸ್ಯೆಗಳನ್ನು ನಿವಾರಿಸಲಿ ಎಂಬ ನಿಟ್ಟಿನಲ್ಲಿ ಈ ಗಣೇಶನನ್ನು ಮಾಡಿದ್ದೇವೆ. ಕೊರೊನಾದಿಂದ ನಮಗೆ ತುಂಬಾ ಸಮಸ್ಯೆಯಾಗಿದ್ದು, ಬಿಬಿಎಂಪಿ ಕೂಡ ಗಣೇಶ ಆಚರಣೆ ಮಾಡಲು ಅವಕಾಶ ನೀಡುವುದಿಲ್ಲ ಅಂತಿದ್ದಾರೆ ಎಂದರು.
ಇದರಿಂದ ನಮಗೆ ತುಂಬಾ ಕಷ್ಟ ಆಗಿದೆ. ಇದನ್ನೇ ನಂಬಿಕೊಂಡು ಸಾಕಷ್ಟು ಕುಟುಂಬಗಳಿದ್ದು, ಬಿಬಿಎಂಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಮಾಡಿ ಕೊಡಬೇಕು ಎಂದು ಮನವಿ ಮಾಡಿಕೊಂಡರು.