ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ಸಹಿ ಮಾಡಿ ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದ ಆರೋಪಿಯ ಬಂಧನ ಮಾಡುವಲ್ಲಿ ಕೇಂದ್ರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಸವಲಿಂಗಯ್ಯ ಎಂಬಾತನೆ ಬಂಧಿತ ಆರೋಪಿ. ಈತ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ಯಲಹಂಕ ಕ್ಷೇತ್ರದ ಶಾಸಕ ವಿಶ್ವನಾಥ್ ಅವರ ಸಹಿ ಇರುವ ಲೆಟರ್ ಹೆಡ್ ತಯಾರಿಸಿ ಅದರಲ್ಲಿ ವರ್ಗಾವಣೆಗಾಗಿ ಶಿಫಾರಸ್ಸು ಪತ್ರ ಬರೆದಿದ್ದರು. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದಾಗ ಬೆಂಗಳೂರು ವಸಂತಪುರ ನಿವಾಸಿಯಾದ ಆರೋಪಿ ಬಸವಲಿಂಗಯ್ಯ ಈ ಕೃತ್ಯ ಮಾಡಿರುವುದು ಬಯಲಾಗಿದೆ.
ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಇಂತ ಕೆಲಸ ಮಾಡುತ್ತಿದ್ದ. ಸರ್ಕಾರಿ ನೌಕರರ ವರ್ಗಾವಣೆ ಮತ್ತು ಇತರೆ ಕೆಲಸಗಳನ್ನು ಮಾಡಿ ಹಣ ಸಂಪಾದನೆ ಮಾಡಬಹುದೆಂಬ ದುರುದ್ದೇಶದಿಂದ ಈ ಮಾರ್ಗ ಆಯ್ದುಕೊಂಡಿದ್ದಾನೆ ಎಂಬುದು ತಿಳಿದುಬಂದಿದೆ. ಸದ್ಯ ಪೊಲೀಸರು ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಹಾಗೆಯೆ ಇದರ ಹಿಂದೆ ಇನ್ನೂ ಯಾರದ್ದಾದರೂ ಕೈವಾಡ ಇದೆಯೇ ಎಂಬುದು ತನಿಖೆ ನಂತರವೇ ತಿಳಿಯಲಿದೆ.