ಬೆಂಗಳೂರು: ಶಾಸಕರೊಬ್ಬರ ಲೆಟರ್ಹೆಡ್ ನಕಲು ಮಾಡಿ ಅಂಬೇಡ್ಕರ್ ನಿಗಮದಲ್ಲಿ ಸಾಲ ಮಂಜೂರು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ತಿಪ್ಪೇಸ್ವಾಮಿ ಮತ್ತು ತಿರುಮಲೇಶ್ ಬಂಧಿತ ಆರೋಪಿಗಳು.
ಈ ಆರೋಪಿಗಳು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ನಿಂಗಣ್ಣ ಅವರ ಲೆಟರ್ಹೆಡ್ ನಕಲು ಮಾಡಿದ್ದಾರೆ. ಶಾಸಕರು ಒಮ್ಮೆ ಕೊಟ್ಟ ಲೆಟರ್ಹೆಡ್ ನಕಲು ಮಾಡುತ್ತಿದ್ದ ಖದೀಮರು ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಂಜಾರ ಅಭಿವೃದ್ಧಿ ನಿಗಮಗಳಿಂದ ಸಾಲ ಪಡೆಯುವ ಫಲಾನುಭವಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಶಾಸಕರ ಪತ್ರ ನೋಡಿದ ಕೂಡಲೇ ಅಂಬೇಡ್ಕರ್ ನಿಗಮದಿಂದ ಹಣ ಮಂಜೂರು ಮಾಡಲಾಗುತ್ತಿತ್ತು. ಇದನ್ನೇ ವಂಚಕರು ಬಂಡವಾಳ ಮಾಡಿಕೊಂಡಿದ್ದರಂತೆ. ಲೆಟರ್ಹೆಡ್ ನಕಲಿ ಅರಿತ ಶಾಸಕರು ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.