ಬೆಂಗಳೂರು: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಇಂದು "ವಿಭಜನೆಯ ಭಯಾನಕದ ನೆನಪಿನ ದಿನ"ವನ್ನು ಆಚರಿಸಿತು. ವಿಭಜನೆಯ ವೇಳೆಯ ಸಂತ್ರಸ್ತರ ಸಂಕಟ ಮತ್ತು ನೋವನ್ನು ಬಿಂಬಿಸುವ ಫೋಟೋಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿತ್ತು. ಪ್ರದರ್ಶನಕ್ಕೆ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ನಿರ್ವಹಣೆ) ಕುಸುಮಾ ಹರಿಪ್ರಸಾದ್, ಕೆ. ಎಸ್.ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು.
![photos of victims during division of nation](https://etvbharatimages.akamaized.net/etvbharat/prod-images/kn-bng-03-south-western-railway-bengaluru-division-partition-horrors-rememberence-7210969_14082022182609_1408f_1660481769_987.jpg)
2021ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿ ಸಂತ್ರಸ್ತರ ನೋವನ್ನು ಸ್ಮರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 14ನ್ನು ರಾಷ್ಟ್ರೀಯ ಸ್ಮಾರಕ ದಿನವೆಂದು ಘೋಷಿಸಿದ್ದಾರೆ. ಸಾಮಾಜಿಕ ವಿಭಜನೆ, ಅಸಂಗತತೆಯನ್ನು ತೊಡೆದು ಹಾಕಲು ಮತ್ತು ಏಕತೆ, ಸಾಮಾಜಿಕ ಸಾಮರಸ್ಯ ಹಾಗೂ ಮಾನವ ಸಬಲೀಕರಣದ ಮನೋಭಾವವನ್ನು ಮತ್ತಷ್ಟು ಬಲಪಡಿಸಬೇಕಿದೆ. ಈ ಅಗತ್ಯವನ್ನು ಭಾರತೀಯರಿಗೆ ನೆನಪಿಸುವ ಗುರಿಯನ್ನು ಇದು ಹೊಂದಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ತಿಳಿಸಿದರು.
![photos of victims during division of nation](https://etvbharatimages.akamaized.net/etvbharat/prod-images/kn-bng-03-south-western-railway-bengaluru-division-partition-horrors-rememberence-7210969_14082022182609_1408f_1660481769_124.jpg)
14 ಪ್ರಮುಖ ರೈಲು ನಿಲ್ದಾಣಗಳಲ್ಲಿ ಪ್ರದರ್ಶನ: ಈ ಕಾರ್ಯಕ್ರಮದ ಅಂಗವಾಗಿ ವಿಭಾಗವು 14 ಪ್ರಮುಖ ರೈಲು ನಿಲ್ದಾಣಗಳಲ್ಲಿ ಭೌತಿಕ ಮತ್ತು ಡಿಜಿಟಲ್ ಮೋಡ್ನಲ್ಲಿ ಇದೇ ರೀತಿಯ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಕೆಎಸ್ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಯಶವಂತಪುರ, ಮಂಡ್ಯ, ಬಂಗಾರಪೇಟೆ, ತುಮಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಮದ್ದೂರು, ಚನ್ನಪಟ್ಟಣ, ಧರ್ಮಪುರಿ, ಹಿಂದೂಪುರ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಬೈಯ್ಯಪ್ಪನಹಳ್ಳಿ ರೈಲು ನಿಲ್ದಾಣಗಳಲ್ಲಿ ನಡೆಸಲಾಗುತ್ತಿದೆ ಎಂದರು.
![photos of victims during division of nation](https://etvbharatimages.akamaized.net/etvbharat/prod-images/kn-bng-03-south-western-railway-bengaluru-division-partition-horrors-rememberence-7210969_14082022182609_1408f_1660481769_1084.jpg)
ಇದನ್ನೂ ಓದಿ: ನೆಲದ ಋಣ ಮರೆಯದ ಟಿಬೆಟಿಯನ್ನರು: ತಿರಂಗ ಹಾರಿಸಿ, ಭಾರತಾಂಬೆಗೆ ಜೈಕಾರ
ಅಂಧ ಕಲಾವಿದರಿಂದ ಗೀತ ಗಾಯನ: ಈ ಸಂದರ್ಭದಲ್ಲಿ ಹೊಸಕೋಟೆಯ ಜೀವನ ಜ್ಯೋತಿ ಅಂಧ ಕಲಾವಿದರ ತಂಡದ ಸದಸ್ಯರಾದ ಅನಿಲ್, ಗಿರೀಶ್ ಮತ್ತು ಶ್ರೀನಾಥ್ ದೇಶಭಕ್ತಿ ಗೀತೆಗಳನ್ನು ಹಾಡಿದರು. ಸೀನಿಯರ್ ವಿಭಾಗೀಯ ಸಿಬ್ಬಂದಿ ಅಧಿಕಾರಿ ಉಮಾ ಶರ್ಮಾ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.