ಬೆಂಗಳೂರು: ಯಲಹಂಕ ತಾಲೂಕಿನ ಮಾವಳ್ಳಿಪುರದಲ್ಲಿ ಬಿಬಿಎಂಪಿಯಿಂದ ಹತ್ತು ವರ್ಷಗಳ ಹಿಂದೆ ಬೆಂಗಳೂರು ನಗರದ ಕಸವನ್ನು ಡಂಪಿಂಗ್ ಮಾಡಲಾಗಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಸಂಪೂರ್ಣ ಕಸ ಹಾಕುವುದನ್ನು ನಿಲ್ಲಿಸಲಾಗಿದ್ರೂ ಮಾವಳ್ಳಿಪುರದ ಸಮಸ್ಯೆ ತಪ್ಪಿರಲಿಲ್ಲ.
ಡಂಪಿಂಗ್ ಮಾಡಿದ್ದ ಕಸದಿಂದ ವಿಷಪೂರಿತ ನೀರು ಹರಿದು ಮಾವಳ್ಳಿಪುರದ ಕೆರೆ ಹಾಗೂ ನೀರಿನ ಮೂಲಗಳನ್ನು ಸೇರುತ್ತಿತ್ತು. ಇದರಿಂದ ಡೆಂಘಿ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆ ಗ್ರಾಮದ ಜನರು ತುತ್ತಾಗಿದ್ದರು. ಇದರ ಕಡೆ ಅಧಿಕಾರಿಗಳು ಗಮನ ಹರಿಸದೇ ಕಣ್ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಇದರ ಕುರಿತು ಈಟಿವಿ ಭಾರತ ವಿಸ್ತೃತ ವರದಿ ಮಾಡಿತ್ತು.
ಈಟಿವಿ ಭಾರತ್ ವರದಿ ಮಾಡಿದ ಬಳಿಕ ಎಚ್ಚೆತ್ತ ಸ್ಥಳೀಯ ಶಾಸಕರು, ತಹಶೀಲ್ದಾರರು ಹಾಗೂ ಹೆಲ್ತ್ ಆಫೀಸರ್ ಅವರ ಗಮನ ಸೆಳೆಯಿತು. ಇದರಿಂದ ಎಚ್ಚೆತ್ತುಕೊಂಡ ಶಾಸಕರು ತಹಶೀಲ್ದಾರರಿಗೆ ಹಾಗೂ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದ್ದರು.
ಶಾಸಕರ ಸೂಚನೆಯಂತೆ ತಹಶೀಲ್ದಾರರು, ಆರೋಗ್ಯಾಧಿಕಾರಿಗಳು ಹಾಗೂ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.