ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ಅಂತಿಮ ವರದಿಯನ್ನು ತಜ್ಞರ ಕಾರ್ಯಪಡೆ ಇಂದು ಸರ್ಕಾರಕ್ಕೆ ಸಲ್ಲಿಕೆ ಮಾಡಿತು.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಜ್ಞರ ಸಮಿತಿ ಅಧ್ಯಕ್ಷ ಎಸ್.ವಿ.ರಂಗನಾಥ್ ಅವರು ಅಂತಿಮ ವರದಿಯನ್ನು ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಶಿಕ್ಷಣ ಸಚಿವ ಆರ್. ಸುರೇಶ್ ಕುಮಾರ್ ಅವರಿಗೆ ಸಲ್ಲಿಸಿತು. ಇದೇ ವೇಳೆ ಮಾತನಾಡಿದ ಡಿಸಿಎಂ, ಕಾರ್ಯಪಡೆ ನೀಡಿರುವ ವರದಿಯನ್ನು ಆದಷ್ಟು ಬೇಗ ಗಮನಕ್ಕೆ ತಂದು, ಸಚಿವ ಸಂಪುಟದ ಮುಂದಿಡಲಾಗುತ್ತದೆ ಎಂದು ತಿಳಿಸಿದರು.
ಈ ವರದಿಯನ್ನು ಶಿಕ್ಷಣ ಪಾಲುದಾರರ ಮುಂದೆಯೂ ಇಡಲಿದ್ದೇವೆ. ಅವರಿಂದ ಸಲಹೆ, ಸೂಚನೆಯನ್ನು ಪಡೆಯುತ್ತೇವೆ. ಕಾರ್ಯಪಡೆ ಹಲವು ಶಿಫಾರಸುಗಳನ್ನು ಮಾಡಿದೆ. ಅದರ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ವಹಿಸುತ್ತೇವೆ. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಂಬಂಧ ವರದಿ ಸಲ್ಲಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ವರದಿಯಂತೆ ಹಂತ ಹಂತವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಿದ್ದೇವೆ ಎಂದರು.
ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣ ಒಳಗೊಂಡ ಕರ್ನಾಟಕ ಶಿಕ್ಷಣ ಆಯೋಗ ರಚನೆಗೆ ಶಿಫಾರಸು ಮಾಡಿದ್ದು, ಇದರ ಅಧ್ಯಕ್ಷರು ಮುಖ್ಯಮಂತ್ರಿಯವರಾಗಿರುತ್ತಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಮತ್ತು ಉನ್ನತ ಶಿಕ್ಷಣ ಸಚಿವರು ಆಯೋಗದ ಉಪಾಧ್ಯಕ್ಷರಾಗಿರುತ್ತಾರೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಎಸ್. ವಿ.ರಂಗನಾಥ್ ಅವರ ನೇತೃತ್ವದಲ್ಲಿ ಮಾರ್ಚ್ ತಿಂಗಳಲ್ಲಿ ಕಾರ್ಯಪಡೆ ರಚನೆ ಮಾಡಿದ್ದೆವು. ರಾಷ್ಟ್ರೀಯ ಶಿಕ್ಷಣ ನೀತಿ ಹೇಗೆ ಅನುಷ್ಠಾನ ಮಾಡಬೇಕು ಎಂಬುದರ ವರದಿ ಸಿದ್ಧಪಡಿಸಿ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಪ್ರೊ.ತಿಮ್ಮೇಗೌಡ, ಡಾ. ಯಶವಂತ ಡೋಂಘ್ರೇ ಹಾಗೂ ಅರುಣ ಶಹಾಪುರ ಅವರ ನೇತೃತದಲ್ಲಿ ಮೂರು ಉಪಸಮಿತಿ ರಚನೆ ಮಾಡಿದ್ದೇವೆ. ಎಲ್ಲರೂ ಸಮಗ್ರವಾಗಿ ಚರ್ಚಿಸಿ ವರದಿ ನೀಡಿದ್ದಾರೆ ಎಂದು ತಿಳಿಸಿದರು.
ಶಿಕ್ಷಣದಲ್ಲಿ ಸುಧಾರಣೆ, ಕಾರ್ಯಕ್ರಮ ಅನುಷ್ಠಾನ, ಪಠ್ಯಕ್ರಮ, ಶಿಕ್ಷಕರ ತರಬೇತಿ ಹೀಗೆ ಶಿಕ್ಷಣ ಹೊಸ ಆಯಾಮಕ್ಕೆ ಬೇಕಾದ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಬೇರೆ ರಾಜ್ಯದಲ್ಲಿ ಸಮಿತಿಯೇ ಆಗಿಲ್ಲ ಮತ್ತು ವರದಿ ಹೊರ ಬಂದಿಲ್ಲ. ಕರ್ನಾಟಕ ವೇಗವಾಗಿ ಸವಿಸ್ತಾರವಾಗಿ, ಎಲ್ಲ ವಿಷಯ ಗಮನಿಸಿ ವರದಿ ನೀಡಿದ್ದಾರೆ ಎಂದು ತಿಳಿಸಿದರು.