ಬೆಂಗಳೂರು: ಪೊಲೀಸ್ ಇಲಾಖೆ ತುರ್ತು ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ಹೆಲ್ಪ್ಲೈನ್ಗಳನ್ನು ತೆರೆದಿದೆ. ಆದರೆ ಕುಡುಕರಿಗೇ ಇದೇ ಒಂದು ನೆಪವಾಗಿದ್ದು, ಫೋನ್ ಮಾಡಿ ತಮ್ಮ ಸಂಕಷ್ಟವನ್ನು ಹೇಳಿಕೊಳ್ತಿದ್ದಾರೆ. ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ.
ಈ ಕುರಿತಂತೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ನಗರ ಕಂಟ್ರೋಲ್ ರೂಮ್ ವಿಭಾಗದ ಡಿಸಿಪಿ ಇಶಾ ಪಂತ್, ಮೊದಲೆಲ್ಲ ಪೊಲೀಸ್ ಕಂಟ್ರೋಲ್ ರೂಮ್ಗೆ ಹೆಚ್ಚಾಗಿ ಗಲಾಟೆ, ಗದ್ದಲ, ಜಗಳ, ಕೊಲೆ ಮೊದಲಾದ ಕೃತ್ಯಗಳ ಕುರಿತು ದೂರುಗಳು ಬರುತ್ತಿದ್ದವು. ಆದರೆ ಕೊರೊನಾದಿಂದ ಸಂಪೂರ್ಣ ಲಾಕ್ಡೌನ್ ಆಗಿದ್ದು, ಇರದಿಂದ ಉಂಟಾಗುತ್ತಿರುವ ತೊಂದರೆಗಳ ಕುರಿತಾದ ಕರೆಗಳೇ ಅಧಿಕ ಸಂಖ್ಯೆಯಲ್ಲಿ ಬರುತ್ತಿವೆ ಎಂದು ತಿಳಿಸಿದ್ದಾರೆ.
ಹೆಚ್ಚಿದ ಕುಡುಕರ ಕಾಟ:
ಲಾಕ್ಡೌನ್ನಿಂದಾಗಿ ಮದ್ಯ ಮಾರಾಟವೂ ಸಂಪೂರ್ಣ ಸ್ಥಗಿತಗೊಂಡಿದ್ದು, ಕುಡುಕರು ಎಣ್ಣೆ ಸಿಗದೆ ಖಿನ್ನತೆಗೊಳಗಾಗಿದ್ದಾರೆ. ಈ ನಡುವೆ ಹೆಲ್ಪ್ಲೈನ್ಗೆ ಅನಗತ್ಯವಾಗಿ ಕರೆ ಮಾಡಿ ಬಾರ್ಗಳು ಯಾವಾಗ ತೆರೆಯುತ್ತವೆ. ತಮಗೆ ಎಣ್ಣೆ ಬೇಕು ಎಂಬಂತಹ ಪ್ರಶ್ನೆಗಳನ್ನು ಕೇಳಿ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಇನ್ನು ಕೊರೊನಾ ಸಂಬಂಧಿ ಕರೆಗಳ ಜೊತೆ ಅಪರಾಧಕ್ಕೂ ಸಂಬಂಧಿಸಿದ ಕರೆಗಳು ಬರುತ್ತಿದ್ದು, ದಿನಕ್ಕೆ ಸುಮಾರು 4 ಸಾವಿರ ಕರೆಗಳು ಬರುತ್ತಿವೆ. ಕಳೆದ ಮಾರ್ಚ್ 24ರಿಂದ ಏ.15 ರವರೆಗೆ 1,03,986 ಕರೆಗಳು ಬಂದಿವೆ. ಈ ಪೈಕಿ 22,007 ಕರೆಗಳಿಗೆ ಸ್ಪಂದಿಸಲಾಗಿದೆ. ಸೈಬರ್ ಕ್ರೈಂ ಅಪರಾಧ, ಹಿರಿಯ ನಾಗರಿಕರಿಗೆ ಶೋಷಣೆ, ಪೆನ್ಷನ್ ತೊಂದರೆ ಸೇರಿದಂತೆ ಹೀಗೆ ಎಲ್ಲಾ ರೀತಿಯ ಕರೆಗಳು ಬರಲಿವೆ. ತ್ವರಿತವಾಗಿ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ನೀಡಿ ಸ್ಥಳಕ್ಕೆ ಹೋಗಿ ಸಮಸ್ಯೆ ಪರಿಹರಿಸಲು ನಮ್ಮ ತಂಡ ಪ್ರಯತ್ನಿಸುತ್ತಿದೆ ಎಂದು ಇಶಾ ಪಂತ್ ತಿಳಿಸಿದ್ದಾರೆ.