ಬೆಂಗಳೂರು: ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಾಂಪ್ರದಾಯಿಕ ಚಿತಾಗಾರಗಳಲ್ಲಿ ಅಂತ್ಯ ಸಂಸ್ಕಾರ ನಡೆಸಲು ಸಿಬ್ಬಂದಿ ಅಸಡ್ಡೆ ತೋರುತ್ತಿದ್ದಾರೆ ಎಂಬ ಗುಮಾನಿ ವ್ಯಕ್ತವಾಗಿದೆ.
ಚಿತಾಗಾರಗಳ ಮೇಲಿನ ಒತ್ತಡ ಕಡಿಮೆ ಮಾಡಲು ತಾವರೆಕೆರೆಯ ಬಳಿ ಸರ್ಕಾರ ತೆರೆದ ಸ್ಥಳದಲ್ಲಿ ತಾತ್ಕಾಲಿಕ ಚಿತಾಗಾರ ನಿರ್ಮಿಸಿ ಕೊರೊನಾದಿಂದ ಮೃತಪಟ್ಟವರ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಲು ವ್ಯವಸ್ಥೆ ಮಾಡಿದೆ. ಅದರಂತೆ ನಿತ್ಯ ಹತ್ತಾರು ಶವಗಳ ಸಾಮೂಹಿಕ ದಹನ ಕಾರ್ಯ ನಡೆಯುತ್ತಿದೆ. ಆದರೆ, ಸಂಪೂರ್ಣವಾಗಿ ಮೃತದೇಹ ಉರಿದು ಬೂದಿಯಾಗುವ ಮೊದಲೇ ನಾಯಿಗಳಿಗೆ ಆಹಾರವಾಗುತ್ತಿರುವುದು ಮೃತರ ಕುಟುಂಬಸ್ಥರ ನೋವಿಗೆ ಕಾರಣವಾಗುತ್ತಿದೆ.
ಸಂಬಂಧಿಕರು ಇರುವವರೆಗೂ ಮಾತ್ರ ಕಟ್ಟಿಗೆಗೆ ಬೆಂಕಿ ಇಟ್ಟು ಶವ ಸುಡುವ ಕೆಲಸವಾಗುತ್ತಿದ್ದು, ಸಂಬಂಧಿಕರು ಕಣ್ಮರೆಯಾಗುತ್ತಿದ್ದಂತೆ ಚಿತೆ ಉರಿಸಲು ಸಿಬ್ಬಂದಿ ಅಸಡ್ಡೆ ತೋರುತ್ತಿದ್ದಾರಾ? ಎಂಬ ಅನುಮಾನ ವ್ಯಕ್ತವಾಗಿದೆ. ತಾವರೆಕೆರೆ ಸೇರಿದಂತೆ ಚಿತಾಗಾರಗಳಲ್ಲಿ ಅರೆಬೆಂದ ಸ್ಥಿತಿಯ ಮೃತದೇಹದ ಅವಶೇಷಗಳು ನಾಯಿಗಳಿಗೆ ಆಹಾರವಾಗುತ್ತಿವೆ. ಮೃತದೇಹದ ಅವಶೇಷವನ್ನು ತಾವರಕೆರೆಯ ಚಿತಾಗಾರ ಬಳಿಯ ನಾಯಿಗಳು ತಿಂದು ಹಾಕುತ್ತಿರುವುದು ಕಂಡು ಬಂದಿದೆ. ಅದೇ ರೀತಿ ಚಾಮರಾಜಪೇಟೆ ಚಿತಾಗಾರದಲ್ಲೂ ಸರಿಯಾಗಿ ಸುಡದೆ ಬೂದಿಯಾಗದ ಮೃತದೇಹಗಳ ಅವಶೇಷಗಳು ಕಂಡು ಬರುತ್ತಿವೆ.
ಓದಿ: ಸೋಂಕಿತ ತಾಯಿ ಜೊತೆ ಆರೋಗ್ಯವಂತ ಮಗಳನ್ನು ಆ್ಯಂಬುಲೆನ್ಸ್ನಲ್ಲೇ ಕೂರಿಸಿದ ಬಿಮ್ಸ್ ಸಿಬ್ಬಂದಿ!