ಬೆಂಗಳೂರು: ಬಿಜೆಪಿ ಶಾಸಕರು ನನ್ನ ಜೊತೆ ಮಾತನಾಡಿ ಅಣ್ಣಾ ಚುನಾವಣೆಗೆ ಹೋಗದ ಹಾಗೆ ನೋಡ್ಕೊಳ್ಳಿ ಅಂತಾ ಹೇಳಿದ್ದಾರೆ ಎಂದು ಸಚಿವ ಡಿ ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೂವರೆ ವರ್ಷದಿಂದ ನಾವು ಸಭೆ ನಡೆಸುತ್ತಲೇ ಇದ್ದೇವೆ. ಸಮಸ್ಯೆಗೆ ಪರಿಹಾರ ಯಾವ ರೀತಿ ಮಾಡ್ತೀವಿ ಅಂತಾ ಹೇಳೋಕೆ ಆಗುತ್ತಾ? ಔಷಧಿ, ಪರಿಹಾರ ಎಲ್ಲಾ ಕಂಡುಹಿಡಿಯುತ್ತೇವೆ. ಪಕ್ಷಕ್ಕಾಗಿ, ಸರ್ಕಾರಕ್ಕಾಗಿ ನನ್ನ ಸ್ಥಾನ ತ್ಯಾಗ ಮಾಡೋಕೆ ತಯಾರಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿಯವರು ಈ ಹಿಂದೆ ಸರ್ಕಾರ ರಚನೆ ಮಾಡೋಕೆ ಆಗದೇ ಇರುವವರು ಈಗ ಮಾಡ್ತಾರಾ? ಈ ಆಟಗಳೆಲ್ಲಾ ಗೊತ್ತಿದೆ. ನಾನು ಕುಮಾರಸ್ವಾಮಿ ಅವರಿಗೆ ಹಿಂದಿನಿಂದ ಚೂರಿ ಹಾಕುವ ಕೆಲಸ ಮಾಡಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಚುನಾವಣೆಗೆ ಹೋಗಬೇಕು ಅಂತಾ ಇದೆ. ಬಿಜೆಪಿಯವರು ಎಲ್ಲರಿಗೂ ಸಚಿವ ಸ್ಥಾನದ ಆಫರ್ ಮಾಡಿದ್ದಾರೆ. ನಾವಂತೂ ಚುನಾವಣೆಗೆ ರೆಡಿ ಇದ್ದೇವೆ, ಹೆದರುವ ಪ್ರಶ್ನೆ ಇಲ್ಲವೆಂದು ಸಚಿವ ಡಿ ಕೆ ಶಿವಕುಮಾರ್ ಗುಡುಗಿದರು.