ಬೆಂಗಳೂರು: ನಿಯೋಜಿತ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಸಂಸದ ಡಿ.ಕೆ. ಸುರೇಶ್ ಅವರ ಜತೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಗ್ಲೋಬಲ್ ಕಾಲೇಜು ಆವರಣದಲ್ಲಿ "ಪ್ರತಿಜ್ಞಾ ದಿನ" ಕಾರ್ಯಕ್ರಮದ ಪೂರ್ವಭಾವಿ ತಯಾರಿ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ನಾಯಕರು ಹಾಗೂ ಉಸ್ತುವಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅಗತ್ಯ ಮಾರ್ಗದರ್ಶನ ನೀಡಿದರು.
ಈ ಹಿಂದೆ ನಿಗದಿಯಾದಂತೆ ಕಾರ್ಯಕ್ರಮ ನಾಳೆ ನಡೆಯಬೇಕಿತ್ತು. ಆದರೆ ಕಡೆಯ ಕ್ಷಣಗಳಲ್ಲಿ ಸರ್ಕಾರ ಪರವಾನಗಿ ನೀಡಿದ ಹಿನ್ನೆಲೆ ಕಾರ್ಯಕ್ರಮ ಮುಂದೂಡಲಾಗಿದೆ. ಜೂನ್ 29ಕ್ಕೆ ನಡೆಯುವ ವಿಧಾನಪರಿಷತ್ ಚುನಾವಣೆಯ ನಂತರವೇ ಸಮಾರಂಭ ಹಮ್ಮಿಕೊಳ್ಳಲು ಡಿಕೆಶಿ ತೀರ್ಮಾನಿಸಿದ್ದಾರೆ.
ತಮ್ಮ ಪದಗ್ರಹಣ ಸಮಾರಂಭಕ್ಕೆ ರಾಜ್ಯಾದ್ಯಂತ ಸಿದ್ಧತೆ ನಡೆಸಿಕೊಳ್ಳಲು ಸೂಚಿಸಿರುವ ಅವರು ಪ್ರತಿಜ್ಞಾ ದಿನ ಕಾರ್ಯಕ್ರಮದ ಅಂಗವಾಗಿ ತಮ್ಮ ಮಾಲೀಕತ್ವದಲ್ಲಿ ನಡೆಯುತ್ತಿರುವ ರಾಜರಾಜೇಶ್ವರಿನಗರ ಗ್ಲೋಬಲ್ ಕಾಲೇಜು ಆವರಣದಲ್ಲಿ ಸೋದರನ ಜೊತೆ ತೆರಳಿ ಸಿದ್ಧತೆ ವೀಕ್ಷಿಸಿದರು.
ಆಟೋ ಚಾಲಕರ ಸಂಘದ ಅಹವಾಲು: ಬೆಂಗಳೂರಿನ ಮಹಾಲಕ್ಷ್ಮಿಪುರ ಆಟೋಚಾಲಕರ ಸಂಘದ ಸದಸ್ಯರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಶನಿವಾರ ಭೇಟಿ ಮಾಡಿ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ತಮಗೆ ಸೂಕ್ತ ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರದ ಮೇಲೆ ಮತ್ತೆ ಒತ್ತಡ ತರಲು ಮನವಿ ಮಾಡಿದರು.
ಇಂದು ಬೆಳಿಗ್ಗೆ ಮಹಾಲಕ್ಷ್ಮಿಲೇಔಟ್ಗೆ ತೆರಳಿದ್ದ ಸಂದರ್ಭ ಸಂಘದ ಸದಸ್ಯರು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿರುವ ಡಿಕೆ ಶಿವಕುಮಾರ್, ಸರ್ಕಾರದಿಂದ ಅಗತ್ಯ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುವುದಾಗಿ ಭರವಸೆ ಇತ್ತರು.