ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಸಂಬಂಧ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಸೋಷಿಯಲ್ ಡೆಮ್ರಾಕಟಿಕ್ ಪಕ್ಷ (ಎಸ್ಡಿಪಿಐ) ಬೆಂಗಳೂರು ನಗರ ಘಟಕದ ಅಧ್ಯಕ್ಷ ಸೇರಿ 17 ಮಂದಿ ಆರೋಪಿಗಳನ್ನು ಬಂಧಿಸಿದೆ.
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ನವೀನ್ ಎಂಬುವವರು ಫೇಸ್ಬುಕ್ನಲ್ಲಿ ವಿವಾದಾತ್ಮತಕ ಪೋಸ್ಟ್ ಹಾಕಿರುವುದನ್ನು ವಿರೋಧಿಸಿ ಶಾಸಕರ ಮನೆ, ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣೆಗಳನ್ನು ಗಲಭೆಕೋರರು ಧ್ವಂಸಗೊಳಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು 17 ಮಂದಿ ಆರೋಪಿಗಳು ಸೇರಿದಂತೆ ಇದುವರೆಗೆ ಒಟ್ಟು 187 ಗಲಭೆಕೋರರನ್ನು ಎನ್ಐಎ ಬಂಧಿಸಿದೆ.
ಎಸ್ಡಿಪಿಐ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೊಹಮ್ಮದ್ ಶರೀಫ್, ಕೆಜಿ ಹಳ್ಳಿ ವಾರ್ಡ್ ಅಧ್ಯಕ್ಷ ಇಮ್ರಾನ್ ಅಹಮದ್, ಹಿರಿಯ ಸದ್ಯಸರಾದ ರೂಬಾ ವಕಾಸ್, ಶಬೀರ್ ಖಾನ್, ಸಯ್ಯದ್ ಅಹಮದ್ ಎಂಬುವರು ಕೆಜೆ ವಾರ್ಡ್ ಥಣಿಸಂದ್ರದಲ್ಲಿರುವ ಎಸ್ಡಿಪಿಐ ಕಚೇರಿಯಲ್ಲಿ ಗಲಭೆ ನಡೆಸಲು ಸಭೆ ಸೇರಿದ್ದರಂತೆ. ಗಲಭೆ ನಡೆಸಲು ಜನ ಸೇರಿಸುವಂತೆ ಸಭೆಯಲ್ಲಿ ನಿರ್ಣಯವಾಗಿತ್ತು ಎನ್ನಲಾಗಿದೆ. ಸೂಚನೆ ಮೇರೆಗೆ ನಗರದ ವಿವಿಧ ಭಾಗಗಳಿಂದ ಪೊಲೀಸ್ ಠಾಣೆಗಳ ಮುಂದೆ ಜನ ಸೇರಿಸಿ ಗಲಭೆ ಎಬ್ಬಿಸಿದ್ದರು.
ಇನ್ಸ್ಟಾಗ್ರಾಂ, ಫೇಸ್ಬುಕ್ ಹಾಗೂ ವಾಟ್ಸಪ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಆರೋಪಿಗಳಾದ ಎಸ್ಡಿಪಿಐ ಅಧ್ಯಕ್ಷ ಶರೀಪ್ ಸಹಚರರಾದ ಸದ್ದಾಂ ಸೊಹೇಲ್, ಕರೀಮುಲ್ಲಾ ಆ. 11ರಂದು ಕೆಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಗುಂಪುಗೂಡುವಂತೆ ಆಹ್ವಾನಿಸಿದ್ದರು ಎಂದು ಎನ್ಐಎ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ತನಿಖೆ ಮುಂದುವರೆಸಲಾಗಿದೆ.