ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಇಂದು ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯಕ್ಕೆ ಮೀಸಲಾದರು. ಒಂದೆಡೆ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೆ ಆಹಾರ ವಿತರಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ನಿನ್ನೆ ತುಮಕೂರಿಗೆ ತೆರಳಿ ಮಹತ್ವದ ಸಭೆ ನಡೆಸಿ ವಾಪಸಾದ ಉಭಯ ನಾಯಕರು ಇಂದು ಜನ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಗಮನಸೆಳೆದರು.
ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ತಮ್ಮ ಸರ್ಕಾರಿ ನಿವಾಸಕ್ಕೆ ಆಗಮಿಸಿದ ಹಳೇ ಮೈಸೂರು ಭಾಗದ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಜೊತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮಾಲೋಚಿಸಿದರು. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಮುಖಂಡರ ಜೊತೆ ಮಾತುಕತೆ ನಡೆಸಿದ ಸಂದರ್ಭ ಅವರ ನೋವು ಆಲಿಸಿದರು.
ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ರಾಜಾಜಿನಗರದ ಶಿವನಗರದಲ್ಲಿ ಪಕ್ಷದ ವಾರ್ಡ್ ಕಚೇರಿ ಉದ್ಘಾಟಿಸಿ, ಬಡವರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ನಾನು ಈಗಾಗಲೇ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದೇನೆ. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಡ್ಡಾಯವಾಗಿ ಕಾಂಗ್ರೆಸ್ ಕಚೇರಿ ಇರಬೇಕು ಎಂದು ಸೂಚಿಸಿದ್ದೇನೆ. ರಾಜ್ಯಮಟ್ಟದಲ್ಲಿ ಮಾಜಿ ಗೃಹ ಸಚಿವ ಕೆ ಜೆ ಜಾರ್ಜ್ ನೇತೃತ್ವದಲ್ಲಿ ಒಂದು ಸಮಿತಿ ಹಾಗೂ ಬೆಂಗಳೂರು ನಗರದಲ್ಲಿ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಇನ್ನೊಂದು ಸಮಿತಿ ರಚಿಸಿದ್ದೇನೆ ಎಂದರು.
ನಮ್ಮ ಪಕ್ಷದ ಕಾರ್ಯಕರ್ತರು ತಮ್ಮ ಕಷ್ಟ-ಸುಖ ಹೇಳಿಕೊಳ್ಳಲು ಹಾಗೂ ಯಾವುದೇ ರೀತಿಯ ಕಾರ್ಯನಿರ್ವಹಣೆಗೆ ಹೋಟೆಲ್ಗಳನ್ನು ಇಲ್ಲ ಬೇರೆ ಯಾವುದೇ ಸ್ಥಳವನ್ನು ಬಳಸಿಕೊಳ್ಳುವುದು ಸರಿಯಲ್ಲ. ಪಕ್ಷದ ಕಚೇರಿಯಲ್ಲಿ ಕುಳಿತು ಚರ್ಚಿಸಲು ಅನುಕೂಲ ಆಗಬೇಕು ಎಂಬ ಕಾರಣಕ್ಕೆ ಕಚೇರಿ ತೆರೆಯಲು ಸೂಚಿಸಿದ್ದೇನೆ. ಇದರ ಭಾಗವಾಗಿಯೇ ರಾಜಾಜಿನಗರದಲ್ಲಿ ಮಾಜಿ ಮೇಯರ್ ಪದ್ಮಾವತಿ ಅವರು ಪಕ್ಷದ ಕಚೇರಿ ಆರಂಭಿಸಿದ್ದು, ಅದರ ಉದ್ಘಾಟನೆಗೆ ಬಂದಿದ್ದೇನೆ ಎಂದು ತಿಳಿಸಿದರು.
ಈ ಭಾಗದ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರು ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಕಚೇರಿಗೆ ಭೇಟಿ ಕೊಡಬೇಕು. ತಾವು ಒಂದು ತಿಂಗಳಲ್ಲಿ ನಡೆಸಿದ ಪಕ್ಷ ಸಂಘಟನೆ, ಕಾರ್ಯನಿರ್ವಹಣೆ ಹಾಗೂ ಕಾರ್ಯಕರ್ತರನ್ನ ಯಾವ ರೀತಿ ವಿಶ್ವಾಸಕ್ಕೆ ಪಡೆದಿದ್ದೇವೆ ಎಂಬ ವಿವರವನ್ನು ನೀಡಬೇಕು ಎಂದು ಸೂಚಿಸಿದರು.
ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಬಂದ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು 1225 ಆ್ಯಂಬುಲೆನ್ಸ್ ವಾಹನಗಳನ್ನು ನೀಡಿದ್ದಾರೆ. 94 ಲಕ್ಷ ಮೆಡಿಕಲ್ ಸೀಟ್ ಗಳನ್ನು ವಿತರಿಸಲಾಗಿದೆ. 97 ಲಕ್ಷ ಆಹಾರದ ಕಿಟ್ಗಳನ್ನ ವಿತರಿಸಲಾಗಿದೆ. ಅಲ್ಲದೆ ಕೆಲವೆಡೆ ಸ್ಯಾನಿಟೈಸರ್ ಮಾಸ್ಕ್ ಹಣ್ಣು-ಹಂಪಲುಗಳನ್ನು ಕಾರ್ಯಕರ್ತರು ನೀಡಿದ್ದಾರೆ. 2.60 ಕೋಟಿ ಮಂದಿಗೆ ವೈಯಕ್ತಿಕವಾಗಿ ಸಹಾಯ ಮಾಡುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಯಾವುದೇ ಜನಪರ ಕೆಲಸ ಮಾಡಿಲ್ಲ. ರಾಜಾಜಿನಗರಕ್ಕೆ ಇದು 6ನೇ ಬಾರಿ ನಾನು ಭೇಟಿ ನೀಡುತ್ತಿದ್ದೇನೆ. ಕ್ಷೇತ್ರದ ಶಾಸಕರು ಆಗಿರುವ ಸಚಿವ ಸುರೇಶ್ ಕುಮಾರ್, ಇಲ್ಲಿನ ಜನರಿಗೋಸ್ಕರ ಯಾವುದೇ ಕಾರ್ಯ ಮಾಡಿಲ್ಲ. ಕೋವಿಡ್ನಿಂದ ಮೃತಪಟ್ಟವರ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಆದರೆ ಪದ್ಮಾವತಿ ಅವರು ಈ ಕ್ಷೇತ್ರದಲ್ಲಿ ಪ್ರತಿಯೊಬ್ಬರ ಮನೆಗೆ ಭೇಟಿ ಕೊಟ್ಟು ಸಮಾಲೋಚಿಸಿದ್ದಾರೆ. ಸಂಕಷ್ಟದಲ್ಲಿರುವ ಸಹಕಾರಕ್ಕೆ ಸರ್ಕಾರ ಮುಂದಾಗಬೇಕಿತ್ತು. ಆದರೆ ಆ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.
ಓದಿ: ನಾಳೆ ರಾಜ್ಯಪಾಲರ ಭೇಟಿ ಮಾಡಲಿರುವ ಸಿಎಂ: ಹೈಕಮಾಂಡ್ನಿಂದ ಬಂತಾ ಸೂಚನೆ?