ಬೆಂಗಳೂರು : ಕಂದಾಯ ಸಚಿವ ಆರ್. ಅಶೋಕ್ ಆಯೋಜಿಸಿದ್ದ ಭೋಜನ ಕೂಟಕ್ಕೆ ಕಾಂಗ್ರೆಸ್ ಸದಸ್ಯರು ಗೈರು ಹಾಜರಾಗಿದ್ದರು. ಸಾಮಾನ್ಯವಾಗಿ ಯಾವುದೇ ಸರ್ಕಾರವಿದ್ದರೂ ಬಜೆಟ್ ಅಧಿವೇಶನ ನಡೆಯುವ ವೇಳೆ ಸಚಿವರು ವಿಧಾನಸೌಧದಲ್ಲಿ ಭೋಜನ ಕೂಟ ಏರ್ಪಡಿಸುವುದು ಸಾಮಾನ್ಯ. ಹಾಗಾಗಿ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿಂದು ಮಧ್ಯಾಹ್ನ ಸಚಿವ ಅಶೋಕ್ ಅವರು, ಭೋಜನ ಕೂಟ ಆಯೋಜಿಸಿದ್ದರು.
ಸದನ ನಡೆಯುತ್ತಿದ್ದ ವೇಳೆ ಅಶೋಕ್ ಅವರು, ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರನ್ನು ಆಹ್ವಾನಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಶಾಸಕರು ಹಾಗೂ ಜೆಡಿಎಸ್ ಶಾಸಕರು ಭೋಜನ ಕೂಟದಲ್ಲಿ ಭಾಗವಹಿಸಿದ್ದರು.
ಆದರೆ ಈ ಭೋಜನ ಕೂಟಕ್ಕೆ ಕಾಂಗ್ರೆಸ್ ಶಾಸಕರು ಗೈರುಹಾಜರಾಗಿದ್ದರು. ಯಾರೂ ಭೋಜನ ಕೂಟಕ್ಕೆ ಹೋಗದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಪಕ್ಷದ ಶಾಸಕರಿಗೆ ಸೂಚನೆ ನೀಡಿದ್ದರಿಂದ ಯಾರೂ ಸಹ ಹಾಜರಾಗಲಿಲ್ಲ. ಆದರೆ, ವಿಧಾನಪರಿಷತ್ ಕಾಂಗ್ರೆಸ್ ಸದಸ್ಯರಿಗೆ ಮಾಹಿತಿ ಸಿಗದ ಕಾರಣ ಕೆಲ ಕಾಂಗ್ರೆಸ್ ಸದಸ್ಯರು ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು.
ಪಂಚರಾಜ್ಯದ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಭೋಜನ ಕೂಟಕ್ಕೆ ಹೋದರೆ ತಪ್ಪು ಮಾಹಿತಿ ಹೋಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸದಸ್ಯರು ಭೋಜನ ಕೂಟಕ್ಕೆ ಗೈರಾಗಿದ್ದಾರೆ ಎಂದು ಹೇಳಲಾಗುತ್ತಿದೆ.