ಬೆಂಗಳೂರು: ಕೊರೊನಾ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 8, 9 ಮತ್ತು 10ನೇ ತರಗತಿಗಳಿಗಾಗಿ ‘ಸೇತುಬಂಧ’ (ಬ್ರಿಡ್ಜ್ ಕೋರ್ಸ್) ಕಾರ್ಯಕ್ರಮಗಳ ವಿಡಿಯೋ ತರಗತಿಗಳನ್ನು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಈ ಸಂಬಂಧ ಎಲ್ಲಾ ಅಗತ್ಯ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇಲಾಖೆಯ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ-ಡಿಎಸ್ಇಆರ್ಟಿಯಲ್ಲಿ ಸೇತುಬಂಧ ಕಾರ್ಯಕ್ರಮದ ರೂಪುರೇಷೆ ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದ ಸಚಿವರು, ಇಲಾಖೆ ಸಿದ್ಧಪಡಿಸಿದ ವಿಡಿಯೋ ತರಗತಿಗಳನ್ನು ವೀಕ್ಷಿಸಿದರು. ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕಲಿಕೆಯನ್ನು ನಿರಂತರವಾಗಿರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಇಂದಿನ ಸಂದರ್ಭಕ್ಕೆ ಪರಿಣಾಮಕಾರಿಯಾದ ಪರ್ಯಾಯ ಕ್ರಮಗಳಿಗೆ ಚಾಲನೆ ನೀಡಿದೆ.
ಒಂದು ತರಗತಿಯಿಂದ ಮತ್ತೊಂದು ತರಗತಿಗೆ ತೇರ್ಗಡೆ ಹೊಂದುವ ಮಕ್ಕಳಿಗೆ ಹಿಂದಿನ ತರಗತಿಗಳ ಕಲಿಕೆಯನ್ನು ನೆನಪಿಸಿ ಮುಂದಿನ ತರಗತಿಗಳಿಗೆ ಸಿದ್ಧಗೊಳಿಸುವ ‘ಸೇತುಬಂಧ’ ಮಕ್ಕಳ ಕಲಿಕೆಯನ್ನು ಸಮಗ್ರವಾಗಿಸುವ ನಿಟ್ಟಿನಲ್ಲಿ ಒಂದು ಪರಿಪೂರ್ಣ ಕಾರ್ಯಕ್ರಮ ಎಂದು ಅವರು ತಿಳಿಸಿದರು. ಕೆಲವೇ ದಿನಗಳಲ್ಲಿ 8ರಿಂದ 10ನೇ ತರಗತಿಯ ಸೇತುಬಂಧ ವಿಡಿಯೋ ತರಗತಿಗಳು ಚಂದನ ವಾಹಿನಿಯಲ್ಲಿ ಆರಂಭಗೊಳ್ಳಲಿವೆ. ಆ ನಂತರ ಇಂಗ್ಲಿಷ್ ಮಾಧ್ಯಮಗಳಲ್ಲೂ ಈ ತರಗತಿಗಳ ಪಾಠಗಳನ್ನು ಪ್ರಾರಂಭಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಶಿಕ್ಷಣ ಇಲಾಖೆಯಿಂದಲೇ ಒಂದು ಪ್ರತ್ಯೇಕ ಚಾನೆಲ್ ಪ್ರಾರಂಭಕ್ಕೂ ಪ್ರಯತ್ನಗಳು ನಡೆದಿವೆ. ಹಾಗೆಯೇ ರಾಜ್ಯದ ಆಯ್ದ ಸ್ಥಳಗಳಲ್ಲಿ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹೊಸ ಸ್ಟುಡಿಯೋಗಳ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವುಗಳು ಸಹ ಪ್ರಾರಂಭವಾಗಲಿವೆ ಎಂದು ಸಚಿವರು ತಿಳಿಸಿದರು.