ಬೆಂಗಳೂರು: ನೆರೆ ಪ್ರದೇಶದಲ್ಲಿ ಸಂತ್ರಸ್ತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಯಾರ ಬಾಯಿಗೂ ಆಹಾರವಾಗದಂತೆ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳಿಗೆ ತಾಕೀತು ಮಾಡಿದರು.
ಸಂಪುಟ ಸಭೆಯಲ್ಲಿ ನೆರೆ ಪರಿಹಾರ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿ, ಈ ವೇಳೆ ಕೆಲ ಸಲಹೆ ಸೂಚನೆಗಳನ್ನು ನೀಡಿದರು. ಸಂತ್ರಸ್ತರಿಗೆ ಆಹಾರ, ಬಟ್ಟೆ ಸರಿಯಾಗಿ ಸಿಗುವಂತೆ ಕ್ರಮವಹಿಸಿ. ಮನೆ ಕಳೆದುಕೊಂಡವರ ಪಟ್ಟಿ ತ್ವರಿತವಾಗಿ ಸಿದ್ಧಪಡಿಸಿ. ಅವರಿಗೆ ಪರಿಹಾರ ತಲುಪಿಸುವ ಕೆಲಸವನ್ನು ಶೀಘ್ರವೇ ಮಾಡಿ. 10 ಸಾವಿರ ರೂ. ಪರಿಹಾರ ಎಲ್ಲರಿಗೂ ಸಿಗಬೇಕು. ಮನೆ ಕಳೆದು ಕೊಂಡವರಿಗೆ ಪರ್ಯಾಯ ವ್ಯವಸ್ಥೆ ಮಾಡಿ. ಆಯಾ ಕ್ಷೇತ್ರದ ಜವಾಬ್ದಾರಿ ಆಯಾ ಶಾಸಕರು, ಸಚಿವರೇ ಹೊಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಖಡಕ್ ಎಚ್ಚರಿಕೆ ನೀಡಿದರು ಎನ್ನಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸುವ ಬಗ್ಗೆ ಚರ್ಚೆ ನಡೆಯಿತು. ನೆರೆ ಪೀಡಿತ ಜಿಲ್ಲಾಧಿಕಾರಿಗಳಿಂದ ಸಂಪೂರ್ಣ ವರದಿ ತರಿಸುವಂತೆ ಸಿಎಂ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ಅಂದಾಜು 15 ಸಾವಿರ ಕೋಟಿ ರೂ. ನಷ್ಟದ ಮಾಹಿತಿ ಇದೆ. ಡಿಸಿಗಳ ವರದಿ ಬಳಿಕ ನಷ್ಟದ ಬಗ್ಗೆ ಅಂತಿಮ ಚಿತ್ರಣ ಸಿಗಲಿದೆ. ಡಿಸಿಗಳ ವರದಿ ಆಧಾರದಲ್ಲಿ ಎಷ್ಟು ಪರಿಹಾರ ಕೇಳಬೇಕು ಅಂತ ತೀರ್ಮಾನ ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.
ಉಪಚುನಾವಣೆ ಚರ್ಚೆ:
ಸಂಪುಟ ಸಭೆಯಲ್ಲಿ ಉಪಚುನಾವಣೆ ಬಗ್ಗೆಯೂ ಚರ್ಚೆ ನಡೆಯಿತು. ಸಂಘಟಿತ ಪ್ರಚಾರ ಮಾಡುವಂತೆ ಸಚಿವರಿಗೆ ಸಿಎಂ ಸೂಚನೆ ನೀಡಿದರು.
ಉಪಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ. ಶಿರಾ, ಆರ್.ಆರ್. ನಗರ ಎರಡು ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು. ನೆರೆ ಕೆಲಸದತ್ತ ಗಮನ ಹರಿಸುವುದರ ಜೊತೆಗೆ ಪ್ರಚಾರದಲ್ಲೂ ಭಾಗವಹಿಸಿ. ಉಪಚುನಾವಣೆ ಫಲಿತಾಂಶ ಸರ್ಕಾರದ ಅಭಿವೃದ್ಧಿ ಕೆಲಸಕ್ಕೆ ಕೈಗನ್ನಡಿ ಆಗುತ್ತದೆ. ಇದನ್ನು ಎಲ್ಲರು ನೆನಪಿನಲ್ಲಿ ಇಟ್ಟುಕೊಳ್ಳಿ. ವಿವಾದಕ್ಕೆ ಆಸ್ಪದ ಕೊಡದೆ ಪ್ರಚಾರ ಮಾಡಿ. ಕ್ಷೇತ್ರದ ಉಸ್ತುವಾರಿ ಕೊಟ್ಟ ಎಲ್ಲಾ ಸಚಿವರು ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದು ಚುನಾವಣೆ ಪ್ರಚಾರದ ಬಗ್ಗೆ ಮಾರ್ಗದರ್ಶನ ನೀಡಿದರು.