ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜರ್ನಿ ಪೇ ಚರ್ಚಾ ಮೂಲಕ ಮಾತುಕತೆ ನಡೆಸಿ ರಾಜ್ಯದ ಸಮಸ್ಯೆಗಳ ಬಗ್ಗೆ ವಿವರಿಸಿ ಕೇಂದ್ರದ ನೆರವಿಗೆ ಮೊರೆ ಇಟ್ಟಿದ್ದಾರೆ.
ಜಿಕೆವಿಕೆಯಿಂದ ಯಲಹಂಕ ವಾಯುನೆಲೆವರೆಗೂ ಪ್ರಧಾನಿ ನರೇಂದ್ರ ಮೋದಿ ಕಾರಿನಲ್ಲಿ ಸಿಎಂ ಬಿಎಸ್ವೈ ಪ್ರಯಾಣ ಮಾಡಿದ್ದು, ಈ ವೇಳೆ ಮೋದಿ ಜೊತೆ ಪ್ರಮುಖ ಮೂರು ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. 10 ನಿಮಿಷಗಳ ಕಾಲ ಕಾರಿನಲ್ಲಿ ಮೋದಿ ಜೊತೆ ಮಾತುಕತೆ ನಡೆಸಿದ ಬಿಎಸ್ವೈ, ಮಹದಾಯಿ ವಿವಾದ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ, ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣ ಮಾಡಲು ಹಣ ಬಿಡುಗಡೆ ಮಾಡುವ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಎಸ್ವೈ ಜೊತೆಗಿನ ಮಾತುಕತೆ ವೇಳೆ ಅಷ್ಟೊಂದು ಸಮರ್ಪಕವಾಗಿ ಪ್ರತಿಕ್ರಿಯೆ ನೀಡದ ಮೋದಿ ದೆಹಲಿಗೆ ಬನ್ನಿ ಎಲ್ಲವನ್ನೂ ಮಾತನಾಡೋಣ ಅಂತ ಅಷ್ಟೇ ಹೇಳಿ ಸಿಎಂ ಜೊತೆಗಿನ ಜರ್ನಿ ಪೇ ಚರ್ಚಾಗೆ ವಿರಾಮ ಹಾಡಿದ್ದಾರೆ. ಪಿಎಂ ನಿರಾಸಕ್ತಿಗೆ ಬೇಸರಗೊಂಡ ಸಿಎಂ, ಸಮರ್ಪಕವಾಗಿ ಪ್ರತಿಕ್ರಿಯೆ ನೀಡಲಿಲ್ಲ ಅಂತ ಬೇಸರದಲ್ಲಿಯೇ ಪ್ರಧಾನಿ ಮೋದಿಯವರನ್ನು ಬೀಳ್ಕೊಟ್ಟು ವಾಪಸ್ಸಾದರು ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದುಬಂದಿದೆ.