ಬೆಂಗಳೂರು: ಡಾ. ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಹೋರಾಟ ನಡೆಸುತ್ತಿರುವ ಹೋರಾಟಗಾರರೊಂದಿಗೆ ಮಾತುಕತೆ ನಡೆಸಲು ಸಿದ್ದ. ಅದಕ್ಕಾಗಿಯೇ ನಾಳೆ ನನ್ನೆಲ್ಲ ಕಾರ್ಯಕ್ರಮ ರದ್ದು ಮಾಡಿ ಮನೆಯಲ್ಲೇ ಇರುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ರೇಸ್ಕೋರ್ಸ್ ರಸ್ತೆಯ ಶಕ್ತಿಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಾಳೆ ಬಂದ್ ಕರೆ ಕೊಟ್ಟ ಕನ್ನಡ ಪರ ಸಂಘಟನೆಗಳನ್ನು ಮಾತುಕತೆಗೆ ಆಗಮಿಸುವಂತೆ ಸಿಎಂ ಆಹ್ವಾನ ನೀಡಿದರು.
ನಾವೂ ಕೂಡಾ ಕನ್ನಡ ಪರ ಇರೋರು, ಕನ್ನಡಿಗರಿಗೆ ಉದ್ಯೋಗ ಸಿಗಲಿ ಅನ್ನೋದು ನಮ್ಮ ಆಶಯವೂ ಆಗಿದೆ. ಸರೋಜಿನಿ ಮಹಿಷಿ ವರದಿಯ ಕೆಲವು ಶಿಫಾರಸುಗಳು ಈಗಾಗಲೇ ಜಾರಿಯಾಗಿವೆ. ಈ ನಿಟ್ಟಿನಲ್ಲಿ ಇನ್ನೂ ಏನು ಆಗಬೇಕು ಅಂತ ಕನ್ನಡ ಪರ ಸಂಘಟನೆಗಳು ಬಂದು ಚರ್ಚೆ ಮಾಡಲಿ, ಇವತ್ತು ಸಂಜೆಯೇ ನನ್ನ ಮನೆಗೆ ಸಂಘಟನೆಗಳ ಪ್ರತಿನಿಧಿಗಳು ಬರಲಿ. ನಾಳೆ ಕೂಡ ಬರಲಿ ಅದಕ್ಕಾಗಿಯೇ ನಾನು ನಾಳಿನ ಎಲ್ಲ ಕಾರ್ಯಕ್ರಮ ರದ್ದು ಮಾಡಿ ಮನೆಯಲ್ಲಿಯೇ ಇರುತ್ತೇನೆ. ಸಂಘಟನೆಗಳ ಮುಖಂಡರು ಬಂದು ನನ್ನ ಜೊತೆ ಮಾತಾಡಲಿ, ಬಂದ್ ಮಾಡುವುದರಿಂದ ಪ್ರಯೋಜನ ಇಲ್ಲ ಎಂದರು.
ಕಾಂಗ್ರೆಸ್ ವಿರುದ್ಧ ಸಿಎಂ ಯಡಿಯೂರಪ್ಪ ಕಿಡಿ: ಹಿಂದೆ ಕಾಂಗ್ರೆಸ್ನವರು ಅಧಿಕಾರದಲ್ಲಿ ಇದ್ರು ತಾನೇ? ಅವರು ಏನು ಮಾಡಿದ್ರು? ಇವಾಗ ವಿರೋಧ ಪಕ್ಷದಲ್ಲಿ ಇರುವ ಕಾರಣಕ್ಕೆ ಬಂದ್ಗೆ ಬೆಂಬಲ ಕೊಡೋದರ ಬದಲು, ಅವರು ಆಡಳಿತ ಪಕ್ಷದಲ್ಲಿದ್ದಾಗ ಏನು ಮಾಡಿದ್ರು ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಕಿಡಿಕಾರಿದರು.