ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಒಬ್ಬ ದೇವಮಾನವ. ನಾನು ಅವರನ್ನು ರಾಜ ಋಷಿ ಅಂತಲೇ ಕರೆಯುತ್ತೇನೆ ಎಂದು ಸಿಎಂ ಯಡಿಯೂರಪ್ಪ ಕೊಂಡಾಡಿದ್ದಾರೆ.
ಪ್ರಧಾನಿ ಮೋದಿಯವರ 70 ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸೇವಾ ಸಪ್ತಾಹ ಕಾರ್ಯಕ್ರಮದ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಮೊನ್ನೆ ದೆಹಲಿಗೆ ಹೋದಾಗ ಸಮಾಧಾನ ಚಿತ್ತದಿಂದ ನನ್ನೊಂದಿಗೆ ಮಾತಾಡಿದ್ರು. ಸುಮಾರು 40 ನಿಮಷಗಳ ಕಾಲ ಶಾಂತ ಚಿತ್ತರಾಗಿ ಕುಳಿತು ನಮ್ಮ ಮಾತುಗಳನ್ನು ಆಲಿಸಿದರು. ಬೆಂಗಳೂರನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲ ನುರಿತ ವ್ಯಕ್ತಿಗಳ ನೆರವು ಪಡೆಯುವಂತೆ ಹೇಳಿ, ಅವರ ದೂರವಾಣಿ ಸಂಖ್ಯೆಯನ್ನೂ ನೀಡಿದರು ಎಂದು ಸಿಎಂ ತಿಳಿಸಿದರು.
ಇಡೀ ಪ್ರಪಂಚ ಅಚ್ಚರಿ ಪಡುವ ರೀತಿ ಭಾರತ ಮೋದಿ ನೇತೃತ್ವದಲ್ಲಿ ಬೆಳೆಯಲಿದೆ. ಮೋದಿ ಈ ಅವಧಿ ಅಷ್ಟೇ ಅಲ್ಲ, ಮತ್ತೊಂದು ಅವಧಿಗೆ ಪ್ರಧಾನಿ ಆಗಬೇಕು ಎಂಬುದು ನನ್ನ ಮತ್ತು ದೇಶದ ಜನರ ಅಪೇಕ್ಷೆಯಾಗಿದೆ. ಮೊನ್ನೆ ನನ್ನ ಜೊತೆ ಸಾಮಾನ್ಯ ವ್ಯಕ್ತಿಯಂತೆ ಚರ್ಚೆ ಮಾಡಿದ್ರು. ಇದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ. ಗುಜರಾತ್ ಅಭಿವೃದ್ಧಿ ಮಾಡಿದ್ದರ ಬಗ್ಗೆ ಹೇಳಿದ್ರು. ಅದೇ ರೀತಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಪಡಿಸಿ ಎಂದು ಸಲಹೆ ನೀಡಿದರು. ಆ ಮಹಾನ್ ವ್ಯಕ್ತಿಗೆ ದೇವರು ಆರೋಗ್ಯ ಆಯಸ್ಸು ನೀಡಲಿ ಎಂದು ಹಾರೈಸಿದರು.