ಬೆಂಗಳೂರು: ಈಶ್ವರಪ್ಪ ಹೇಳಿಕೆಯಲ್ಲಿ ಯಾವುದೇ ರೀತಿಯ ಕಾನೂನು ವಿರೋಧಿ ಅಂಶವಿಲ್ಲ, ಕಾಂಗ್ರೆಸ್ ಧರಣಿ ಕೇವಲ ರಾಜಕೀಯ ಉದ್ದೇಶದ್ದಾಗಿದೆ. ಲಾಜಿಕಲ್ ಎಂಡ್ ಮಾಡುತ್ತೇನೆ ಎಂದು ಕಾಂಗ್ರೆಸ್ ಹೊರಟಿದೆ. ಆದರೆ, ಅಲ್ಲಿ ಇರುವುದು ಡೆಡ್ ಎಂಡ್ ಎಂದು ಕಾಂಗ್ರೆಸ್ ಅಹೋರಾತ್ರಿ ಧರಣಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಅವರ ಧೋರಣೆ ಅರ್ಥವಾಗುತ್ತಿಲ್ಲ, ಸಾಕಷ್ಟು ಬಾರಿ ಅಹೋರಾತ್ರಿ ಧರಣಿ ನೋಡಿದ್ದೇವೆ, ಜನಪರ ವಿಚಾರ, ರೈತ ವಿಚಾರ, ರಾಜ್ಯದ ಹಿತದೃಷ್ಟಿಯಿಂದ ಧರಣಿಗಳು ಆಗಿರೋದನ್ನ ನೋಡಿದ್ದೆವು.
ಆದರೆ, ಈಗ ಯಾವುದೋ ಒಂದು ಸ್ಟೇಟ್ಮೆಂಟ್ ಇಟ್ಟಿಕೊಂಡು ಧರಣಿ ಮಾಡುತ್ತಿದ್ದಾರೆ. ಅದು ಈಶ್ವರಪ್ಪ ಅವರ ಮಾತನ್ನ ತಪ್ಪಾಗಿ ಅರ್ಥೈಸಿಕೊಂಡು ಧರಣಿ ಮಾಡುತ್ತಿದ್ದಾರೆ. ಈಶ್ವರಪ್ಪ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ, ಕಾನೂನು ವಿರೋಧವಾದ ಅಂಶವಿಲ್ಲ, ಅವರಿಗೆ ಯಾವುದೇ ಬೇರೆ ವಿಷಯ ಇಲ್ಲದೇ ಇರುವುದರಿಂದ ಈ ಧರಣಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ವಿರೋಧ ಪಕ್ಷ ಸಂಪೂರ್ಣವಾಗಿ ಜವಾಬ್ದಾರಿ ಮರೆತಿದೆ, ಇದರಿಂದ ಅವರಿಗೆ ರಾಜಕೀಯವಾಗಿ ಹೆಚ್ಚಿನೂ ಕ್ರೆಡಿಬಿಲಿಟಿ ಸಿಗಲ್ಲ, ಸಧ್ಯ ಉದ್ಬವಿಸಿರುವ, ಹಿಜಾಬ್ ಗೊಂದಲ ಬಗೆಹರಿಸಬೇಕು ಅಂತ ಸರ್ಕಾರ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರ ಬರುತ್ತಿದೆ ಇದನ್ನ ಬಗೆಹರಿಸಬೇಕು ಅಂತ ನಾವು ಇದ್ದೇವೆ, ಇದಕ್ಕೆ ಸಹಕಾರಿಯಾಗಿ ಕೆಲಸ ಮಾಡಬೇಕು. ವಿಧಾನಸಭೆಯಿಂದ ನಾವು ಒಟ್ಟಾಗಿ ಒಂದು ಸಂದೇಶ ಕೊಡಬಹುದಿತ್ತು. ಸದನದಲ್ಲಿ ಒಟ್ಟಾಗಿ ಆ ಸಂದೇಶ ಕೊಡುವ ಕೆಲಸ ಮಾಡಬೇಕಿತ್ತು. ಆದರೆ, ಇವರು ಈಶ್ವರಪ್ಪ ಒಂದು ಸ್ಟೇಟ್ಮೆಂಟ್ ಇಟ್ಟುಕೊಂಡು ಧರಣಿ ಮಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ರಾಜಕೀಯವಾಗಿ ಬಹಳ ತಳ ಮಟ್ಟಿಗೆ ಹೋಗುತ್ತಿದೆ. ಇಂದಿನ ಬೆಳವಣಿಗೆ ಇದು ಒಳ್ಳೆಯ ಉದಾಹರಣೆ ಅಲ್ಲ. ಕಾಂಗ್ರೆಸ್ ಪಕ್ಷ ಚಿಂತನೆ ಮಾಡಬೇಕು ಅವರಿಗೆ ರಾಜಕಾರಣವೇ ಮುಖ್ಯವಾಗಿದೆ. ನಾನು ಅವರ ಜೊತೆ ಮಾತನಾಡಿದ್ದೇನೆ ಇದನ್ನ ಬೆಳಸೋದು ಬೇಡ ಎಂದು ಹೇಳಿದ್ದೇನೆ. ಆದರೆ ಅವರು ಲಾಜಿಕಲ್ ಎಂಡ್ ಮಾಡುತ್ತೇವೆ ಅಂದಿದ್ದಾರೆ. ನಾನು ಕೂಡ ಅವರಿಗೆ ದೇರ್ ಈಸ್ ನೋ ಲಾಜಿಕಲ್ ಎಂಡ್ ಎಂದಿದ್ದೇನೆ. ದೇರ್ ಈಸ್ ಒನ್ಲಿ ಡೆಡ್ ಎಂಡ್ ಇರೋದು ಎಂದರು.
ಇದನ್ನೂ ಓದಿ : ಸಚಿವ ಈಶ್ವರಪ್ಪ ರಾಜೀನಾಮೆಗೆ ಪಟ್ಟು: ಸದನದಲ್ಲಿ ಕೈ ಶಾಸಕರ ಅಹೋರಾತ್ರಿ ಧರಣಿ ಆರಂಭ