ಬೆಂಗಳೂರು: ಕೊರೊನಾ ಆಘಾತದ ನಡುವೆ ದೇಶದ ಪ್ರಗತಿ ಸಂಪೂರ್ಣ ಕುಂಠಿತವಾಗಿದ್ದು, ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಂಘಟಿತ, ಅಸಂಘಟಿತ ವಲಯ, ವಲಸೆ ಕಾರ್ಮಿಕರು, ಕೃಷಿಕ್ಷೇತ್ರ ಸಮಸ್ಯೆಗೆ ಒಳಗಾಗಿದೆ. ಮುಂಚಿತವಾಗಿ ತಿಳಿಸಿ ಲಾಕ್ ಡೌನ್ ಘೋಷಣೆ ಆಗಿದ್ದರೆ, ವಲಸೆ ಕಾರ್ಮಿಕರು, ಗರ್ಭಿಣಿಯರು, ಮಕ್ಕಳು, ರೈಲ್ವೆ ಹಳಿಯ ಮೇಲೆ ದಣಿದು ಮಲಗಿದವರ ಜೀವ ಹೋಗುತ್ತಿರಲಿಲ್ಲ. ಅನ್ನ, ನೀರಿಲ್ಲದೇ ಕೊಟ್ಯಂತರ ಜನ ಕಷ್ಟಕ್ಕೆಒಳಗಾಗುತ್ತಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
248 ರೈಲುಗಳು ನಿತ್ಯ ಓಡಿದ್ದು, 3 ಲಕ್ಷ ಪ್ರಯಾಣಿಕರಿಗೆ ಬಳಕೆಯಾಗಿದೆ. ಕೊರೊನಾ ವೈರಸ್ ಕಡಿಮೆ ಇದ್ದಾಗ ಲಾಕ್ ಡೌನ್ ಘೋಷಿಸಿ, ಈಗ ಹೆಚ್ಚಾದಾಗ ನಿರಾಳಗೊಳಿಸಿದ್ದು ಸರಿಯಲ್ಲ. ಎಲ್ಲೋ ತೆರಳುವ ರೈಲು ಇನ್ನೆಲ್ಲೋ ಬಂದಿದೆ. 30 ಗಂಟೆ ಸಂಚಾರದ ರೈಲು 75 ಗಂಟೆ ಸಂಚರಿಸಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ ಬಳಿಕ ಟ್ರೈನ್ ಬಿಟ್ರು. 13 ಸಾವಿರ ಪ್ಯಾಸೆಂಜರ್ ಟ್ರೈನ್ ದೇಶದಲ್ಲಿ ಓಡಾಟ ಮಾಡ್ತಿದ್ದವು. 2.30 ಕೋಟಿ ಜನ ದಿನ ಓಡಾಟ ಮಾಡ್ತಿದ್ರು. 5-6 ಕೋಟಿ ಜನ ವಲಸಿಗ ಕಾರ್ಮಿಕರು ಇದ್ರು. ಪ್ಯಾಸೆಂಜರ್ ಟ್ರೈನ್ನಲ್ಲಿ ನಾಲ್ಕು ದಿನದಲ್ಲಿ ಕಳುಹಿಸಿ ಕೊಡಬಹುದಿತ್ತು. ಕೈಗಾರಿಕೆ, ಎಂಎಸ್ಎಂಇ, ಉತ್ಪಾದನೆ, ಕೃಷಿ ಕ್ಷೇತ್ರಕ್ಕೆ ಸಮಸ್ಯೆ ಆಗಿದೆ ಎಂದರು.
ದೇಶದ ಆರ್ಥಿಕತೆ ಕುಸಿದಿದೆ. ಜಿಡಿಪಿ ದರ ಕುಸಿತವಾಗಿದೆ. ಶೇ.1.75 ಗೆ ಬಂದಿತ್ತು. ಕೊರೊನಾ ಬಂದ ನಂತರ ಋಣಾತ್ಮಕ ಬೆಳವಣಿಗೆ ಹೊಂದಿದೆ. ಕೊರೊನಾ ಹೆಚ್ಚಾಗುತ್ತಿದ್ದರೂ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಕರೆಯಿಸಿ ದೊಡ್ಡ ಕಾರ್ಯಕ್ರಮ ಮಾಡಿದರು. ಆಮೇಲೆ ಲಾಕ್ ಡೌನ್ ಘೋಷಣೆಯಾಯಿತು. ಕೇಂದ್ರ ಸರ್ಕಾರ ಮಾತಿಗೆ ಸೀಮಿತವಾಗಿದೆ. ಕೆಲಸ ಮಾಡುವ ಇಚ್ಛಾಶಕ್ತಿ ಹೊಂದಿಲ್ಲ. ಇವರು ಆಡುವ ಮಾತಿಗೆ ಬೆಲೆ ಕೊಡಲ್ಲ. ಜನರ ಬಗ್ಗೆ ಕಾಳಜಿಯಿಲ್ಲ. ಇನ್ನೂ ನಾವು ಸುಮ್ಮನಿದ್ದೆವೆ, ಮುಂದೆಯೂ ಸುಮ್ಮನಿರುತ್ತೇವೆ ಎಂದರು.
ಜನರನ್ನು, ವಲಸೆ ಕಾರ್ಮಿಕರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಆಗಿರುವ ಎಲ್ಲ ಸಮಸ್ಯೆಗಳನ್ನು ಸರ್ಕಾರ ಜವಾಬ್ದಾರಿ ವಹಿಸಿಕೊಳ್ಳಬೇಕು. ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು. ಎಲ್ಲ ರೀತಿಯಲ್ಲೂ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಎಲ್ಲವನ್ನೂ ಖಾಸಗಿಯವರಿಗೆ ವಹಿಸಿ ದೇಶದ ಪ್ರಗತಿ ಕುಂಠಿತವಾಗುವಂತೆ ಮಾಡಿದ್ದಾರೆ ಎಂದು ಖರ್ಗೆ ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸಹಕಾರ
ಕಾಂಗ್ರೆಸ್ ಪಕ್ಷ ಸಾಕಷ್ಟು ಸಹಕಾರ ನೀಡಿದೆ. ಇನ್ನೂ ನೀಡಲಿದೆ. ಆದರೆ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಘೋಷಿಸಿದೆ. ಆದರೆ ನಿಜವಾಗಿ ನರೇಗಾ ಇನ್ನಿತರ ಒಂದೆರಡು ಯೋಜನೆಯಡಿ 1 ಲಕ್ಷ ಕೋಟಿ ರೂ.ನಷ್ಟು ಮಾತ್ರ ಬಿಡುಗಡೆ ಮಾಡಿದೆ. ಜಿಡಿಪಿಯ ಶೇ.10, 20 ರಷ್ಟು ಹಣ ಬಿಡುಗಡೆ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಶೇ.1 ರಷ್ಟುಕೂಡ ಬಿಡುಗಡೆ ಮಾಡಿಲ್ಲ. ಮಹಾರಾಷ್ಟ್ರದಲ್ಲಿ 150 ರೈಲು ಘೋಷಿಸಿ ಬಹಳ ಕಡಿಮೆ ಹಣ ನೀಡಿದ್ದಾರೆ. ಅನೇಕ ರಾಜ್ಯಗಳು ಹಣಕೊಡುತ್ತೇವೆ ಎಂದರೂ ರೈಲನ್ನು ನೀಡಿಲ್ಲ. ರಾಜ್ಯದಲ್ಲೂ ಇದೇ ಸಮಸ್ಯೆ ಆಗಿದೆ ಎಂದು ಖರ್ಗೆ ಹೇಳಿದರು.
ಎಐಸಿಸಿ ಇಂದ ಕೆಲ ವಿಚಾರಗಳ ಪ್ರಸ್ತಾಪ ಮಾಡಲು ಆದೇಶ ಇದೆ. ಕೋವಿಡ್ 19 ಹಿನ್ನೆಲೆ ಮಾಧ್ಯಮಗಳ ಮುಂದೆ ಮಾತನಾಡುವುದು ಬೇಡ ಅಂದುಕೊಂಡಿದ್ದೆ. ಅದ್ರೆ ಹೈಕಮಾಂಡ್ ಸೂಚನೆ ಮೇರೆಗೆ ಇಂದು ನಿಮ್ಮ ದರ್ಶನ ಮಾಡಿದ್ದೇನೆ. ಕೋವಿಡ್ 19 ಇಂದ ಇಡೀ ದೇಶ ಅಲ್ಲೋಲ ಕಲ್ಲೋಲವಾಗಿದೆ. ಕೂಲಿ ಕಾರ್ಮಿಕರು ತಮ್ಮ ಸಮುದಾಯ ವೃತ್ತಿ ಆದರಿಸಿದವರು ಬಹಳ ತೊಂದರೆಯಲ್ಲಿ ಇದ್ದಾರೆ. ಸಣ್ಣ ಕೈಗಾರಿಕೆಗಳು ಮತ್ತು ಅಸಂಘಟಿತ ಕಾರ್ಮಿಕರಿಗೆ ಬಾರಿ ತೊಂದರೆ ಆಗಿದೆ. ವಲಸಿಗ ಕಾರ್ಮಿಕರು ದೇಶದಲ್ಲಿ 8 ಕೋಟಿ ಜನ ಸಮಸ್ಯೆ ಯಲ್ಲಿ ಸಿಕ್ಕಿದ್ದಾರೆ. ಅವರ ಜೀವನ ಅಸ್ತವ್ಯಸ್ತ ಆಗಿದೆ. ರೈತರು ಮತ್ತು ರೈತ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.