ETV Bharat / state

ಮೀಸಲಾತಿ ವಿಚಾರದಲ್ಲಿ ಬೊಮ್ಮಾಯಿ ಸರ್ಕಾರದಿಂದ ಜನರಿಗೆ ವಂಚನೆ: ಡಿ.ಕೆ.ಶಿವಕುಮಾರ್

author img

By

Published : Mar 26, 2023, 12:28 PM IST

ಮೀಸಲಾತಿ ವಿಚಾರದಲ್ಲಿ ಬೊಮ್ಮಾಯಿ ಸರ್ಕಾರ ಜನರನ್ನು ವಂಚಿಸುತ್ತಿದೆ. ವಿವಿಧ ಸಮುದಾಯಗಳನ್ನು ಒಡೆದು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಆರೋಪಿಸಿದ್ದಾರೆ.

bommai-govt-cheating-the-people-in-reservation-issue-says-dk-shivakumar
ಮೀಸಲಾತಿ ವಿಚಾರದಲ್ಲಿ 420 ಬೊಮ್ಮಾಯಿ ಸರ್ಕಾರದಿಂದ ಜನರಿಗೆ ವಂಚನೆ: ಡಿಕೆಶಿ

ಬೆಂಗಳೂರು : ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲರಿಗೂ ಮೋಸ ಮಾಡುವುದು ಬಿಜೆಪಿಯ ತಂತ್ರಗಾರಿಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ. ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಡಗು ಸೋಲಿನ ಸುಳಿಗೆ ಸಿಲುಕುವುದನ್ನು ಅರಿತ ಬಿಜೆಪಿ ಸರ್ಕಾರ ಈಗ ರಾಜ್ಯದ ಬಹುತೇಕ ಸಮುದಾಯಗಳಿಗೆ ಮೀಸಲಾತಿ ಹೆಸರಲ್ಲಿ ದ್ರೋಹ, ವಂಚನೆ, ಮೋಸ ಮಾಡುವ ರಣನೀತಿ ರೂಪಿಸಿದೆ.

75 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದಿಗೂ ರಾಜ್ಯ ಸರ್ಕಾರ 90 ದಿನಗಳ ಅವಧಿಯಲ್ಲಿ ಮೀಸಲಾತಿ ವರ್ಗೀಕರಣವನ್ನು ಮೂರು ಬಾರಿ ಬದಲಾವಣೆ ಮಾಡಿರಲಿಲ್ಲ. ಆ ಮೂಲಕ ಬಿಜೆಪಿ ಸರ್ಕಾರ ಎಲ್ಲರನ್ನು ವಂಚಿಸಿ, ಎಲ್ಲರನ್ನು ಒಡೆದು, ಎಲ್ಲ ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದೆ.

ಈ ರೀತಿ ಮಾಡಿದಾಗ ಮೀಸಲಾತಿ ಬೇಡಿಕೆ ವಿಚಾರವಾಗಿ ಕೂಗು ಹೆಚ್ಚಾಗಿ ಜನರು ಈ ಸರ್ಕಾರದ ಲೂಟಿ, ಹಗರಣಗಳನ್ನು ಮರೆಸುವಂತೆ ಮಾಡುತ್ತದೆ. ಆ ಮೂಲಕ ಸರ್ಕಾರ 40% ಕಮಿಷನ್ ಸರ್ಕಾರ ಎಂಬ ಕಳಂಕದಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈ ಎಲ್ಲದರಿಂದಾಗಿ ಬಿಜೆಪಿ ಪಕ್ಷ ಈಗ ‘BETRAYAL JANATA PARTY’ ಅಂದರೆ ದ್ರೋಹ ಬಗೆಯುವ ಜನತಾ ಪಕ್ಷವಾಗಿದೆ ಎಂದಿದ್ದಾರೆ. ಡಿಕೆಶಿ ಹೇಳಿದ ಸತ್ಯಾಂಶಗಳು..

1. ಕಳೆದ 90 ದಿನಗಳಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ವರ್ಗೀಕರಣವನ್ನು ಮೂರು ಬಾರಿ ಬದಲಿಸಿದೆ. ಇದು ವಿವಿಧ ಸಮುದಾಗಳಿಗೆ ಬಿಜೆಪಿ ಸರ್ಕಾರ ಚುನಾವಣಾ ಸಮಯದಲ್ಲಿ ಮಾಡುತ್ತಿರುವ ಅಪ್ರಮಾಣಿಕತೆ ಹಾಗೂ ವಂಚನೆಗೆ ಸಾಕ್ಷಿಯಾಗಿದೆ. ಸಮಾಜದಲ್ಲಿ ಸಮುದಾಯಗಳ ನಡುವೆ ಜನರು ಪರಸ್ಪರ ಕಚ್ಚಾಡುವಂತೆ ಮಾಡಿ, ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ವಿಚಾರವಾಗಿ ನಾಗಮೋಹನ್ ದಾಸ್ ಸಮಿತಿಯು ವರದಿ ನೀಡಿ ನಾಲ್ಕು ವರ್ಷವಾದರೂ ಇದನ್ನು ಜಾರಿಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಲಿಲ್ಲ. ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಈ ವಿಚಾರವಾಗಿ ಆಗ್ರಹ ಮಾಡುವವರೆಗೂ ಈ ವಿಚಾರವಾಗಿ ಸರ್ಕಾರ ನಿದ್ರೆಗೆ ಜಾರಿತ್ತು.

ಡಿಸೆಂಬರ್ 26, 2022ರಂದು ಬೊಮ್ಮಾಯಿ ಅವರ ಸರ್ಕಾರ ಬಲವಂತವಾಗಿ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಏರಿಸಿ ಕಾನೂನು ಜಾರಿಗೊಳಿಸಿತು. ಇದರೊಂದಿಗೆ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56ಕ್ಕೆ ವಿಸ್ತರಣೆಯಾಯಿತು. ಈ ಕಾನೂನು ಮಾನ್ಯತೆ ಪಡೆಯಬೇಕಾದರೆ ಇದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸಬೇಕು. ಅಥವಾ ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಮಿತಿಯನ್ನು ಶೇ.50ರಿಂದ ವಿಸ್ತರಣೆ ಮಾಡಬೇಕು. ಇದ್ಯಾವುದನ್ನು ಮಾಡಿಲ್ಲ. ಮತ್ತೊಂದೆಡೆ ಈ ಮೀಸಲಾತಿ ಏರಿಕೆಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.

ಡಿಸೆಂಬರ್ 29, 2022ರಂದು ಬೊಮ್ಮಾಯಿ ಅವರ ಸರ್ಕಾರ ಮತ್ತೊಮ್ಮೆ ಮೀಸಲಾತಿ ವರ್ಗೀಕರಣ ಬದಲಿಸಿ, 3A ವರ್ಗದಲ್ಲಿದ್ದ ಒಕ್ಕಲಿಗರು ಹಾಗೂ ಇತರ ಸಮುದಾಯಗಳನ್ನು 2C ಎಂಬ ಹೊಸ ವರ್ಗೀಕರಣಕ್ಕೆ ಸೇರಿಸಿ, 3B ವರ್ಗೀಕರಣದಲ್ಲಿದ್ದ ಲಿಂಗಾಯತರು ಹಾಗೂ ಇತರ ಸಮುದಾಯಗಳನ್ನು 2D ಎಂಬ ಹೊಸ ವರ್ಗೀಕರಣಕ್ಕೆ ಸೇರಿಸಿತ್ತು. ಸರ್ಕಾರದ ಈ ಮೀಸಲಾತಿ ಮರುವರ್ಗೀಕರಣವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.

ಮಾರ್ಚ್ 24, 2023 ರಂದು ಬಿಜೆಪಿ ಸರ್ಕಾರ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ತನ್ನ ಕೊನೆಯ ಸಚಿವ ಸಂಪುಟದಲ್ಲಿ ಮಗದೊಮ್ಮೆ ಮೀಸಲಾತಿ ವರ್ಗೀಕರಣ ಬದಲಿಸಿದೆ. ಆ ಮೂಲಕ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ಟೀಕಿಸಿದ್ದಾರೆ.

2. ಪಂಚಮಸಾಲಿ ಲಿಂಗಾಯತ ಸಮುದಾಯ ತಮ್ಮ ಮೀಸಲಾತಿ ಪ್ರಮಾಣವನ್ನು ಶೇ.15ಕ್ಕೆ ಏರಿಕೆ ಮಾಡಬೇಕು ಎಂದು ಆಗ್ರಹಿಸುತ್ತಿತ್ತು. ಆದರೆ ಬೊಮ್ಮಾಯಿ ಅವರ ಸರ್ಕಾರ ಕೇವಲ ಶೇ.2ರಷ್ಟು ಮಾತ್ರ ಏರಿಕೆ ಮಾಡಿದೆ. ಇದಕ್ಕೆ ಈ ಸಮುದಾಯದ ನಾಯಕರು ಹಾಗೂ ಸ್ವಾಮೀಜಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಇನ್ನು ಒಕ್ಕಲಿಗ ಸಮುದಾಯವು ಶೇ.12ರಷ್ಟು ಮೀಸಲಾತಿಗೆ ಆಗ್ರಹ ಮಾಡಿತ್ತು. ಆದರೆ ಬೊಮ್ಮಾಯಿ ಸರ್ಕಾರ ಕೊಟ್ಟಿದ್ದು ಕೇವಲ ಶೇ.2ರಷ್ಟು ಮಾತ್ರ. ಇನ್ನು ದಶಕಗಳಷ್ಟು ಹಳೆಯದಾದ ಮುಸಲ್ಮಾನರ ಶೇ.4ರಷ್ಟು ಮೀಸಲಾತಿಯನ್ನು ಸಂಪೂರ್ಣವಾಗಿ ಕಸಿಯಲಾಗಿದೆ. ಇದರಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ದೊಡ್ಡ ಪ್ರಮಾಣದ ಅನ್ಯಾಯವಾಗಿದೆ.

ಇನ್ನು ಮಾರ್ಚ್ 14, 2023ರಂದು ಮೋದಿ ಸರ್ಕಾರ ಸಂಸತ್ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯಗಳ ಮೀಸಲಾತಿ ಹೆಚ್ಚಳದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಬಿಜೆಪಿ ಮಾಡಿರುವ ಮಹಾದ್ರೋಹಕ್ಕೆ ದಲಿತ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಆ ಮೂಲಕ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಸಮುದಾಯಗಳ ಮೀಸಲಾತಿ ಪ್ರಸ್ತಾವನೆ ತಿರಸ್ಕಾರದಿಂದ ನಿರಾಸೆಗೊಂಡಿವೆ. ಇದು ಬೊಮ್ಮಾಯಿ ಅವರ ಸರ್ಕಾರ ಸಮುದಾಯಗಳ ನಡುವೆ ಕಿಚ್ಚು ಹಚ್ಚುವ ಪ್ರಯತ್ನವಾಗಿದೆ ಎಂದಿದ್ದಾರೆ.

3. ಬೊಮ್ಮಾಯಿ ಸರ್ಕಾರ ಪದೇ ಪದೆ ಮೀಸಲಾತಿ ವರ್ಗೀಕರಣ ಮಾಡಿದರೂ ಇದ್ಯಾವುದೂ ಸಾಂವಿಧಾನಿಕ ಮಾನ್ಯತೆ ಪಡೆದಿಲ್ಲ. ಆ ಮೂಲಕ ಈ ಮೀಸಲಾತಿಗಳು ಊರ್ಜಿತವಾಗುವುದಿಲ್ಲ. ಹೀಗಾಗಿ ಬೊಮ್ಮಾಯಿ ಅವರ ಸರ್ಕಾರ ಈ ವಿಚಾರದಲ್ಲಿ ಜನರಿಗೆ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿದೆ. ಸದ್ಯ ಸುಪ್ರೀ ಕೋರ್ಟ್ ಇಂದಿರಾ ಶೆಣೈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಮಿತಿಯನ್ನು ಶೇ.50ಕ್ಕೆ ನಿಗದಿಗೊಳಿಸಿದೆ. ಆದರೆ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56ಕ್ಕೆ ಏರಿಕೆಯಾಗಿದೆ. ಈ ಶೇ.56ರಷ್ಟು ಮೀಸಲಾತಿಯನ್ನು ಸರ್ಕಾರ ಹೇಗೆ ಜಾರಿಗೆ ತರಲಿದೆ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸದೇ ತನ್ನ ಅಂತಿಮ ವರದಿ ನೀಡಿದೆ. ಬಿಜೆಪಿ ಸರ್ಕಾರ ಬೇಕಂತಲೇ ಸಮೀಕ್ಷೆ ನಡೆಸದೇ ವರದಿ ಸಿದ್ಧಪಡಿಸಿಕೊಂಡಿದೆ. ಆಮೂಲಕ ಮೀಸಲಾತಿ ವಿಚಾರ ಇತ್ಯರ್ಥವಾಗದಿರಲಿ ಎಂದು ತೀರ್ಮಾನಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಸಮುದಾಯಗಳು ಮೀಸಲಾತಿಯ ಲಾಭ ಪಡೆಯುವುದಾದರೂ ಹೇಗೆ?.

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಆಯೋಗವು ಡಿ.22ರ 2022ರಂದು ತನ್ನ ಮಧ್ಯಂತರ ವರದಿ ನೀಡಿತ್ತು. ಈ ಮಧ್ಯಂತರ ವರದಿ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಇದೇ ರೀತಿ ಮಹಾರಾಷ್ಟ್ರದ ಹಿಂದುಳಿದ ವರ್ಗಗಳ ಆಯೋಗ ನೀಡಿದ ಮಧ್ಯಂತರ ವರದಿ ಆಧಾರದ ಮೇಲೆ ಮರಾಠಿಗರಿಗೆ ಮೀಸಲಾತಿ ನೀಡಿದಾಗ ಸುಪ್ರೀಂ ಕೋರ್ಟ್ ಅದಕ್ಕೆ ತಡೆ ಹಿಡಿದಿತ್ತು. ಈ ವಿಚಾರ ಗೊತ್ತಿದ್ದರೂ ಮೀಸಲಾತಿ ವರ್ಗೀಕರಣ, ಮರು ವರ್ಗೀಕರಣ ಮಾಡಿ ರಾಜ್ಯಸರ್ಕಾರ ಸಮುದಾಯಗಳ ಜನರ ದಾರಿ ತಪ್ಪಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಲು ಹಾಗೂ ಮೀಸಲು ಮಿತಿಯನ್ನು ಶೇ.50ರಿಂದ ವಿಸ್ತರಣೆ ಮಾಡಲು ಮೋದಿ ಸರ್ಕಾರ ನಿರಾಕರಿಸಿದೆ. ಇನ್ನು ರಾಜ್ಯದ ಮೀಸಲಾತಿ ಹೆಚ್ಚಳದ ಕಾನೂನನ್ನು ಸಂವಿಧಾನದ 9ನೇ ಶೆಡ್ಯುಲ್ ಗೆ ಸೇರಿಸಲು ನಿರಾಕರಿಸಿದೆ. ಈ ಪರಿಸ್ಥಿತಿಯಲ್ಲಿ ಈ ಸಮುದಾಯಗಳು ಸರ್ಕಾರದ ಮೀಸಲಾತಿ ಹೆಚ್ಚಳದ ತೀರ್ಮಾನದಿಂದ ಹೇಗೆ ಪ್ರಯೋಜನ ಪಡೆಯಲಿವೆ ಎಂದು ಹೇಳಿದ್ದಾರೆ.

ಬೊಮ್ಮಾಯಿ ಅವರ ಸರ್ಕಾರ ಮುಸಲ್ಮಾನ ಅಲ್ಪಸಂಖ್ಯಾತರ ಮೀಸಲಾತಿಯನ್ನು ಆರ್ಥಿಕ ದುರ್ಬಲ ವರ್ಗಕ್ಕೆ (EWS) ನೀಡಲಾಗುವ ಮೀಸಲಾತಿಗೆ ವರ್ಗಾಯಿಸಿರುವುದು ಅಸಂವಿಧಾನಿಕವಾಗಿದೆ. ಈ ವರ್ಗೀಕರಣದಲ್ಲಿ ಆರ್ಥಿಕ ಸ್ಥಿತಿಗತಿ ಮೇಲೆ ಮೀಸಲಾತಿ ನಿಗದಿಯಾಗುತ್ತದೆಯೇ ಹೊರತು, ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಸಿಗುವುದಿಲ್ಲ. ಈ ವರ್ಗೀಕರಣಕ್ಕೆ ಮುಸಲ್ಮಾನರನ್ನು ವರ್ಗಾವಣೆ ಮಾಡದಿದ್ದರೂ ಈ ಸಮುದಾಯದ ಆರ್ಥಿಕವಾಗಿ ಹಿಂದುಳಿದವರು ಈ ವರ್ಗದಲ್ಲಿ ಮೀಸಲಾತಿ ಪಡೆಯಲಿದ್ದಾರೆ. ಆದರೂ ಬೊಮ್ಮಾಯಿ ಅವರು ಈ ಸಮುದಾಯವನ್ನು ಆರ್ಥಿಕ ಹಿಂದುಳಿದ ವರ್ಗದ ಕೋಟಾಗೆ ಸೇರಿಸುವ ನಾಟಕ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ನೀಡುವಂತೆ ಮುಸ್ಲಿಂ ಧರ್ಮಗುರುಗಳಿಂದ ಸಿದ್ದರಾಮಯ್ಯಗೆ ಮನವಿ

ಬೆಂಗಳೂರು : ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲರಿಗೂ ಮೋಸ ಮಾಡುವುದು ಬಿಜೆಪಿಯ ತಂತ್ರಗಾರಿಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ. ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಡಗು ಸೋಲಿನ ಸುಳಿಗೆ ಸಿಲುಕುವುದನ್ನು ಅರಿತ ಬಿಜೆಪಿ ಸರ್ಕಾರ ಈಗ ರಾಜ್ಯದ ಬಹುತೇಕ ಸಮುದಾಯಗಳಿಗೆ ಮೀಸಲಾತಿ ಹೆಸರಲ್ಲಿ ದ್ರೋಹ, ವಂಚನೆ, ಮೋಸ ಮಾಡುವ ರಣನೀತಿ ರೂಪಿಸಿದೆ.

75 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದಿಗೂ ರಾಜ್ಯ ಸರ್ಕಾರ 90 ದಿನಗಳ ಅವಧಿಯಲ್ಲಿ ಮೀಸಲಾತಿ ವರ್ಗೀಕರಣವನ್ನು ಮೂರು ಬಾರಿ ಬದಲಾವಣೆ ಮಾಡಿರಲಿಲ್ಲ. ಆ ಮೂಲಕ ಬಿಜೆಪಿ ಸರ್ಕಾರ ಎಲ್ಲರನ್ನು ವಂಚಿಸಿ, ಎಲ್ಲರನ್ನು ಒಡೆದು, ಎಲ್ಲ ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದೆ.

ಈ ರೀತಿ ಮಾಡಿದಾಗ ಮೀಸಲಾತಿ ಬೇಡಿಕೆ ವಿಚಾರವಾಗಿ ಕೂಗು ಹೆಚ್ಚಾಗಿ ಜನರು ಈ ಸರ್ಕಾರದ ಲೂಟಿ, ಹಗರಣಗಳನ್ನು ಮರೆಸುವಂತೆ ಮಾಡುತ್ತದೆ. ಆ ಮೂಲಕ ಸರ್ಕಾರ 40% ಕಮಿಷನ್ ಸರ್ಕಾರ ಎಂಬ ಕಳಂಕದಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈ ಎಲ್ಲದರಿಂದಾಗಿ ಬಿಜೆಪಿ ಪಕ್ಷ ಈಗ ‘BETRAYAL JANATA PARTY’ ಅಂದರೆ ದ್ರೋಹ ಬಗೆಯುವ ಜನತಾ ಪಕ್ಷವಾಗಿದೆ ಎಂದಿದ್ದಾರೆ. ಡಿಕೆಶಿ ಹೇಳಿದ ಸತ್ಯಾಂಶಗಳು..

1. ಕಳೆದ 90 ದಿನಗಳಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ವರ್ಗೀಕರಣವನ್ನು ಮೂರು ಬಾರಿ ಬದಲಿಸಿದೆ. ಇದು ವಿವಿಧ ಸಮುದಾಗಳಿಗೆ ಬಿಜೆಪಿ ಸರ್ಕಾರ ಚುನಾವಣಾ ಸಮಯದಲ್ಲಿ ಮಾಡುತ್ತಿರುವ ಅಪ್ರಮಾಣಿಕತೆ ಹಾಗೂ ವಂಚನೆಗೆ ಸಾಕ್ಷಿಯಾಗಿದೆ. ಸಮಾಜದಲ್ಲಿ ಸಮುದಾಯಗಳ ನಡುವೆ ಜನರು ಪರಸ್ಪರ ಕಚ್ಚಾಡುವಂತೆ ಮಾಡಿ, ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ವಿಚಾರವಾಗಿ ನಾಗಮೋಹನ್ ದಾಸ್ ಸಮಿತಿಯು ವರದಿ ನೀಡಿ ನಾಲ್ಕು ವರ್ಷವಾದರೂ ಇದನ್ನು ಜಾರಿಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಲಿಲ್ಲ. ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಈ ವಿಚಾರವಾಗಿ ಆಗ್ರಹ ಮಾಡುವವರೆಗೂ ಈ ವಿಚಾರವಾಗಿ ಸರ್ಕಾರ ನಿದ್ರೆಗೆ ಜಾರಿತ್ತು.

ಡಿಸೆಂಬರ್ 26, 2022ರಂದು ಬೊಮ್ಮಾಯಿ ಅವರ ಸರ್ಕಾರ ಬಲವಂತವಾಗಿ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಏರಿಸಿ ಕಾನೂನು ಜಾರಿಗೊಳಿಸಿತು. ಇದರೊಂದಿಗೆ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56ಕ್ಕೆ ವಿಸ್ತರಣೆಯಾಯಿತು. ಈ ಕಾನೂನು ಮಾನ್ಯತೆ ಪಡೆಯಬೇಕಾದರೆ ಇದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸಬೇಕು. ಅಥವಾ ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಮಿತಿಯನ್ನು ಶೇ.50ರಿಂದ ವಿಸ್ತರಣೆ ಮಾಡಬೇಕು. ಇದ್ಯಾವುದನ್ನು ಮಾಡಿಲ್ಲ. ಮತ್ತೊಂದೆಡೆ ಈ ಮೀಸಲಾತಿ ಏರಿಕೆಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.

ಡಿಸೆಂಬರ್ 29, 2022ರಂದು ಬೊಮ್ಮಾಯಿ ಅವರ ಸರ್ಕಾರ ಮತ್ತೊಮ್ಮೆ ಮೀಸಲಾತಿ ವರ್ಗೀಕರಣ ಬದಲಿಸಿ, 3A ವರ್ಗದಲ್ಲಿದ್ದ ಒಕ್ಕಲಿಗರು ಹಾಗೂ ಇತರ ಸಮುದಾಯಗಳನ್ನು 2C ಎಂಬ ಹೊಸ ವರ್ಗೀಕರಣಕ್ಕೆ ಸೇರಿಸಿ, 3B ವರ್ಗೀಕರಣದಲ್ಲಿದ್ದ ಲಿಂಗಾಯತರು ಹಾಗೂ ಇತರ ಸಮುದಾಯಗಳನ್ನು 2D ಎಂಬ ಹೊಸ ವರ್ಗೀಕರಣಕ್ಕೆ ಸೇರಿಸಿತ್ತು. ಸರ್ಕಾರದ ಈ ಮೀಸಲಾತಿ ಮರುವರ್ಗೀಕರಣವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.

ಮಾರ್ಚ್ 24, 2023 ರಂದು ಬಿಜೆಪಿ ಸರ್ಕಾರ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ತನ್ನ ಕೊನೆಯ ಸಚಿವ ಸಂಪುಟದಲ್ಲಿ ಮಗದೊಮ್ಮೆ ಮೀಸಲಾತಿ ವರ್ಗೀಕರಣ ಬದಲಿಸಿದೆ. ಆ ಮೂಲಕ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ಟೀಕಿಸಿದ್ದಾರೆ.

2. ಪಂಚಮಸಾಲಿ ಲಿಂಗಾಯತ ಸಮುದಾಯ ತಮ್ಮ ಮೀಸಲಾತಿ ಪ್ರಮಾಣವನ್ನು ಶೇ.15ಕ್ಕೆ ಏರಿಕೆ ಮಾಡಬೇಕು ಎಂದು ಆಗ್ರಹಿಸುತ್ತಿತ್ತು. ಆದರೆ ಬೊಮ್ಮಾಯಿ ಅವರ ಸರ್ಕಾರ ಕೇವಲ ಶೇ.2ರಷ್ಟು ಮಾತ್ರ ಏರಿಕೆ ಮಾಡಿದೆ. ಇದಕ್ಕೆ ಈ ಸಮುದಾಯದ ನಾಯಕರು ಹಾಗೂ ಸ್ವಾಮೀಜಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಇನ್ನು ಒಕ್ಕಲಿಗ ಸಮುದಾಯವು ಶೇ.12ರಷ್ಟು ಮೀಸಲಾತಿಗೆ ಆಗ್ರಹ ಮಾಡಿತ್ತು. ಆದರೆ ಬೊಮ್ಮಾಯಿ ಸರ್ಕಾರ ಕೊಟ್ಟಿದ್ದು ಕೇವಲ ಶೇ.2ರಷ್ಟು ಮಾತ್ರ. ಇನ್ನು ದಶಕಗಳಷ್ಟು ಹಳೆಯದಾದ ಮುಸಲ್ಮಾನರ ಶೇ.4ರಷ್ಟು ಮೀಸಲಾತಿಯನ್ನು ಸಂಪೂರ್ಣವಾಗಿ ಕಸಿಯಲಾಗಿದೆ. ಇದರಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ದೊಡ್ಡ ಪ್ರಮಾಣದ ಅನ್ಯಾಯವಾಗಿದೆ.

ಇನ್ನು ಮಾರ್ಚ್ 14, 2023ರಂದು ಮೋದಿ ಸರ್ಕಾರ ಸಂಸತ್ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯಗಳ ಮೀಸಲಾತಿ ಹೆಚ್ಚಳದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಬಿಜೆಪಿ ಮಾಡಿರುವ ಮಹಾದ್ರೋಹಕ್ಕೆ ದಲಿತ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಆ ಮೂಲಕ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಸಮುದಾಯಗಳ ಮೀಸಲಾತಿ ಪ್ರಸ್ತಾವನೆ ತಿರಸ್ಕಾರದಿಂದ ನಿರಾಸೆಗೊಂಡಿವೆ. ಇದು ಬೊಮ್ಮಾಯಿ ಅವರ ಸರ್ಕಾರ ಸಮುದಾಯಗಳ ನಡುವೆ ಕಿಚ್ಚು ಹಚ್ಚುವ ಪ್ರಯತ್ನವಾಗಿದೆ ಎಂದಿದ್ದಾರೆ.

3. ಬೊಮ್ಮಾಯಿ ಸರ್ಕಾರ ಪದೇ ಪದೆ ಮೀಸಲಾತಿ ವರ್ಗೀಕರಣ ಮಾಡಿದರೂ ಇದ್ಯಾವುದೂ ಸಾಂವಿಧಾನಿಕ ಮಾನ್ಯತೆ ಪಡೆದಿಲ್ಲ. ಆ ಮೂಲಕ ಈ ಮೀಸಲಾತಿಗಳು ಊರ್ಜಿತವಾಗುವುದಿಲ್ಲ. ಹೀಗಾಗಿ ಬೊಮ್ಮಾಯಿ ಅವರ ಸರ್ಕಾರ ಈ ವಿಚಾರದಲ್ಲಿ ಜನರಿಗೆ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿದೆ. ಸದ್ಯ ಸುಪ್ರೀ ಕೋರ್ಟ್ ಇಂದಿರಾ ಶೆಣೈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಮಿತಿಯನ್ನು ಶೇ.50ಕ್ಕೆ ನಿಗದಿಗೊಳಿಸಿದೆ. ಆದರೆ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56ಕ್ಕೆ ಏರಿಕೆಯಾಗಿದೆ. ಈ ಶೇ.56ರಷ್ಟು ಮೀಸಲಾತಿಯನ್ನು ಸರ್ಕಾರ ಹೇಗೆ ಜಾರಿಗೆ ತರಲಿದೆ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸದೇ ತನ್ನ ಅಂತಿಮ ವರದಿ ನೀಡಿದೆ. ಬಿಜೆಪಿ ಸರ್ಕಾರ ಬೇಕಂತಲೇ ಸಮೀಕ್ಷೆ ನಡೆಸದೇ ವರದಿ ಸಿದ್ಧಪಡಿಸಿಕೊಂಡಿದೆ. ಆಮೂಲಕ ಮೀಸಲಾತಿ ವಿಚಾರ ಇತ್ಯರ್ಥವಾಗದಿರಲಿ ಎಂದು ತೀರ್ಮಾನಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಸಮುದಾಯಗಳು ಮೀಸಲಾತಿಯ ಲಾಭ ಪಡೆಯುವುದಾದರೂ ಹೇಗೆ?.

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಆಯೋಗವು ಡಿ.22ರ 2022ರಂದು ತನ್ನ ಮಧ್ಯಂತರ ವರದಿ ನೀಡಿತ್ತು. ಈ ಮಧ್ಯಂತರ ವರದಿ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಇದೇ ರೀತಿ ಮಹಾರಾಷ್ಟ್ರದ ಹಿಂದುಳಿದ ವರ್ಗಗಳ ಆಯೋಗ ನೀಡಿದ ಮಧ್ಯಂತರ ವರದಿ ಆಧಾರದ ಮೇಲೆ ಮರಾಠಿಗರಿಗೆ ಮೀಸಲಾತಿ ನೀಡಿದಾಗ ಸುಪ್ರೀಂ ಕೋರ್ಟ್ ಅದಕ್ಕೆ ತಡೆ ಹಿಡಿದಿತ್ತು. ಈ ವಿಚಾರ ಗೊತ್ತಿದ್ದರೂ ಮೀಸಲಾತಿ ವರ್ಗೀಕರಣ, ಮರು ವರ್ಗೀಕರಣ ಮಾಡಿ ರಾಜ್ಯಸರ್ಕಾರ ಸಮುದಾಯಗಳ ಜನರ ದಾರಿ ತಪ್ಪಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಲು ಹಾಗೂ ಮೀಸಲು ಮಿತಿಯನ್ನು ಶೇ.50ರಿಂದ ವಿಸ್ತರಣೆ ಮಾಡಲು ಮೋದಿ ಸರ್ಕಾರ ನಿರಾಕರಿಸಿದೆ. ಇನ್ನು ರಾಜ್ಯದ ಮೀಸಲಾತಿ ಹೆಚ್ಚಳದ ಕಾನೂನನ್ನು ಸಂವಿಧಾನದ 9ನೇ ಶೆಡ್ಯುಲ್ ಗೆ ಸೇರಿಸಲು ನಿರಾಕರಿಸಿದೆ. ಈ ಪರಿಸ್ಥಿತಿಯಲ್ಲಿ ಈ ಸಮುದಾಯಗಳು ಸರ್ಕಾರದ ಮೀಸಲಾತಿ ಹೆಚ್ಚಳದ ತೀರ್ಮಾನದಿಂದ ಹೇಗೆ ಪ್ರಯೋಜನ ಪಡೆಯಲಿವೆ ಎಂದು ಹೇಳಿದ್ದಾರೆ.

ಬೊಮ್ಮಾಯಿ ಅವರ ಸರ್ಕಾರ ಮುಸಲ್ಮಾನ ಅಲ್ಪಸಂಖ್ಯಾತರ ಮೀಸಲಾತಿಯನ್ನು ಆರ್ಥಿಕ ದುರ್ಬಲ ವರ್ಗಕ್ಕೆ (EWS) ನೀಡಲಾಗುವ ಮೀಸಲಾತಿಗೆ ವರ್ಗಾಯಿಸಿರುವುದು ಅಸಂವಿಧಾನಿಕವಾಗಿದೆ. ಈ ವರ್ಗೀಕರಣದಲ್ಲಿ ಆರ್ಥಿಕ ಸ್ಥಿತಿಗತಿ ಮೇಲೆ ಮೀಸಲಾತಿ ನಿಗದಿಯಾಗುತ್ತದೆಯೇ ಹೊರತು, ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಸಿಗುವುದಿಲ್ಲ. ಈ ವರ್ಗೀಕರಣಕ್ಕೆ ಮುಸಲ್ಮಾನರನ್ನು ವರ್ಗಾವಣೆ ಮಾಡದಿದ್ದರೂ ಈ ಸಮುದಾಯದ ಆರ್ಥಿಕವಾಗಿ ಹಿಂದುಳಿದವರು ಈ ವರ್ಗದಲ್ಲಿ ಮೀಸಲಾತಿ ಪಡೆಯಲಿದ್ದಾರೆ. ಆದರೂ ಬೊಮ್ಮಾಯಿ ಅವರು ಈ ಸಮುದಾಯವನ್ನು ಆರ್ಥಿಕ ಹಿಂದುಳಿದ ವರ್ಗದ ಕೋಟಾಗೆ ಸೇರಿಸುವ ನಾಟಕ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ನೀಡುವಂತೆ ಮುಸ್ಲಿಂ ಧರ್ಮಗುರುಗಳಿಂದ ಸಿದ್ದರಾಮಯ್ಯಗೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.