ಬೆಂಗಳೂರು: ಮಹಾನಗರದಲ್ಲಿ ಬಡ ರೋಗಿಗಳು ಡಯಾಲಿಸಿಸ್ಗಾಗಿ ಅಲೆದಾಡುತ್ತಿರುವುದನ್ನು ಕಡಿಮೆ ಮಾಡಲು ಬೃಹತ್ ಡಯಾಲಿಸಿಸ್ ಕೇಂದ್ರ ಆರಂಭಿಸಲು ಸಿದ್ದತೆ ನಡೆದಿದೆ. ಜಯನಗರದ ಕೆಎಸ್ಆರ್ಟಿಸಿ ಆಸ್ಪತ್ರೆಯಲ್ಲಿ ಖಾಸಗಿ ಚಾರಿಟಿ ಮೂಲಕ ಡಯಾಲಿಸಿಸ್ ಕೇಂದ್ರ ತೆರೆದು ಸಂಪೂರ್ಣ ಉಚಿತವಾಗಿ ಡಯಾಲಿಸಿಸ್ ಸೌಲಭ್ಯ ಕಲ್ಪಿಸುವ ಚಿಂತನೆ ನಡೆದಿದ್ದು, ಬಿಲ್ಲಿಂಗ್ ಕೌಂಟರ್ ಲೆಸ್ ವ್ಯವಸ್ಥೆ ಪರಿಕಲ್ಪನೆ ಹುಟ್ಟುಹಾಕಲು ಸಂಸದ ತೇಜಸ್ವಿ ಸೂರ್ಯ ಮುಂದಾಗಿದ್ದಾರೆ.
ಹೌದು, ಸದ್ಯದಲ್ಲೇ ಜಯನಗರದ ಕೆಎಸ್ಆರ್ಟಿಸಿ ಆಸ್ಪತ್ರೆಯಲ್ಲಿ ರಾಜ್ಯದ ಬೃಹತ್ ಡಯಾಲಿಸಿಸ್ ಘಟಕ ಆರಂಭಗೊಳ್ಳಲಿದೆ. ನಿತ್ಯ 50 ಜನರಿಗೆ ಡಯಾಲಿಸಿಸ್ ಮಾಡಬಹುದಾಗಿದ್ದು, ತಿಂಗಳಿಗೆ 1500 ಡಯಾಲಿಸಿಸ್ ಮಾಡುವ ದೊಡ್ಡ ಘಟಕ ಆರಂಭಿಸಲಾಗುತ್ತದೆ. ಖಾಸಗಿ ಚಾರಿಟಿ ಮೂಲಕ ನಡೆಯಲಿರುವ ಈ ಡಯಾಲಿಸಿಸ್ ಕೇಂದ್ರಕ್ಕೆ ಸಂಸದರ ನಿಧಿಯಿಂದ ಅಗತ್ಯ ಸಹಕಾರ, ನೆರವು ಕಲ್ಪಿಸಲಾಗುತ್ತಿದೆ. ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿನ ದರಕ್ಕೂ ಕಡಿಮೆ ದರವನ್ನು ನಿಗದಿಪಡಿಸಲು ಚಿಂತನೆ ನಡೆಸಲಾಗಿದೆ.
![ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡುತ್ತಿರುವುದು](https://etvbharatimages.akamaized.net/etvbharat/prod-images/kn-bng-03-billing-counterless-dialysis-center-special-story-7208080_10102022155028_1010f_1665397228_195.jpg)
ಸದ್ಯ ಮಹಾನಗರಿ ಬೆಂಗಳೂರಿನಲ್ಲಿ ಅತಿ ಕಡಿಮೆ ಡಯಾಲಿಸಿಸ್ ಶುಲ್ಕವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಡೆಯಲಾಗುತ್ತಿದೆ. ಪ್ರತಿ ಡಯಾಲಿಸಿಸ್ ಗೆ 850 ರೂ. ನಿಗದಿಪಡಿಸಲಾಗಿದೆ. ಆದರೆ, ಅದಕ್ಕೂ ಕಡಿಮೆ ದರಕ್ಕೆ ಜಯನಗರ ಕೆಎಸ್ಆರ್ ಟಿಸಿ ಆಸ್ಪತ್ರೆಯಲ್ಲಿ ನಿಗದಿಪಡಿಸಲು ನಿರ್ಧರಿಸಿದ್ದು, ಪ್ರತಿ ಡಯಾಲಿಸಿಸ್ಗೆ 750 ರೂ. ಹಣ ನಿಗದಿಪಡಿಸಲು ಚಿಂತನೆ ನಡೆಸಲಾಗಿದೆ.
ಈ ಹಣವನ್ನೂ ಕೂಡ ರೋಗಿಗಳಿಂದ ಪಡೆಯುವ ಬದಲು ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಗಳ ಸಿಎಸ್ಆರ್ ಫಂಡ್ ಮೂಲಕ ಭರಿಸುವ ಚಿಂತನೆ ನಡೆಸಿದ್ದು, ವಿಪ್ರೋ, ಇನ್ ಫೋಸಿಸ್, ಟಿಸಿಎಸ್ ನಂತಹ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ವಾರ್ಷಿಕ ಡಯಾಲಿಸಿಸ್ ಕೇಂದ್ರ ನಿರ್ವಹಣಗೆ ಬೇಕಾದ ಹಣವನ್ನು ಸಿಎಸ್ಆರ್ ನಿಧಿಯಿಂದ ಒದಗಿಸಿಕೊಂಡು ರೋಗಿಗಳಿಗೆ ಉಚಿತ ಸೇವೆ ನೀಡಬೇಕು ಎನ್ನುವ ಉದ್ದೇಶವನ್ನು ಹೊಂದಲಾಗಿದೆ.
![ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ](https://etvbharatimages.akamaized.net/etvbharat/prod-images/kn-bng-03-billing-counterless-dialysis-center-special-story-7208080_10102022155028_1010f_1665397228_728.jpg)
ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಡಯಾಲಿಸಿಸ್ ಮಾಡಿಸಿಕೊಳ್ಳಲು ಜನರು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಬಡವರಿಗೇ ಈ ಖಾಯಿಲೆ ಬರುತ್ತದೆಯಲ್ಲಾ ಎನ್ನುವ ನೋವು ಕಾಡುತ್ತಿದೆ. ಹಾಗಾಗಿ ಬಡ ರೋಗಿಗಳ ಅನುಕೂಲಕ್ಕಾಗಿಯೇ ಜಯನಗರದಲ್ಲಿ ಬೃಹತ್ ಡಯಾಲಿಸಿಸ್ ಕೇಂದ್ರ ಆರಂಭಿಸಲಾಗುತ್ತಿದೆ.
ಬಿಲ್ಲಿಂಗ್ ಕೌಂಟರ್ ಇಲ್ಲದೇ ಡಯಾಲಿಸಿಸ್ ಕೇಂದ್ರ ಆರಂಭಿಸಲು ಚಿಂತನೆ ಮಾಡಿದ್ದೇವೆ. ಬಡ ರೋಗಿಗಳ ನೋಂದಣಿ ಮಾಡಿಕೊಂಡು ಡಯಾಲಿಸಿಸ್ ಮಾಡಿ ಕಳಿಸಬೇಕು. ಅವರ ಯಾವುದೇ ರೀತಿಯ ಶುಲ್ಕವನ್ನು ಇಲ್ಲಿ ಕಟ್ಟುವಂತೆ ಇರಬಾರದು. ಅದಕ್ಕಾಗಿಯೇ ಇಲ್ಲಿ ಬಿಲ್ಲಿಂಗ್ ಕೌಂಟರ್ ಇಲ್ಲದ ರೀತಿ ವ್ಯವಸ್ಥೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಎರಡು ರೀತಿಯಲ್ಲಿ ನಾವು ಉಚಿತ ಡಯಾಲಿಸಿಸ್ ಸೇವೆ ಕಲ್ಪಿಸಲು ಯೋಜನೆ ಹಾಕಿಕೊಂಡಿದ್ದೇವೆ. ಮೊದಲನೆಯದಾಗಿ ದೊಡ್ಡ ದೊಡ್ಡ ಕಂಪನಿಗಳಿಂದ ಸಿಎಸ್ಆರ್ ಫಂಡ್ ಪಡೆದುಕೊಂಡು ಆ ಹಣದಲ್ಲೇ ಡಯಾಲಿಸಿಸ್ ಘಟಕ ನಿರ್ವಹಣೆ ಮಾಡಬೇಕು ಅಥವಾ ನಮ್ಮ ಕಾರ್ಯಕರ್ತರನ್ನು ಬಳಸಿಕೊಂಡು ಉಚಿತವಾಗಿ ಡಯಾಲಿಸಿಸ್ ಕೇಂದ್ರವನ್ನು ನಡೆಸಬೇಕು ಎಂದುಕೊಂಡಿದ್ದೇವೆ.
![ಆಂಬುಲೆನ್ಸ್ ಸೇವೆ ಪರಿಶೀಲಿಸುತ್ತಿರುವುದು](https://etvbharatimages.akamaized.net/etvbharat/prod-images/kn-bng-03-billing-counterless-dialysis-center-special-story-7208080_10102022155028_1010f_1665397228_262.jpg)
ಹುಟ್ಟುಹಬ್ಬ ಆಚರಿಸಿಕೊಳ್ಳುವ ನಮ್ಮ ಕಾರ್ಯಕರ್ತರಿಂದ ಅಂದು ಒಬ್ಬ ರೋಗಿಯ ಒಂದು ಡಯಾಲಿಸಿಸ್ ಗೆ ದೇಣಿಗೆ ಸ್ವೀಕಾರ ಮಾಡುವ ಚಿಂತನೆ ಮಾಡಿದ್ದೇವೆ. ಈ ಬಗ್ಗೆ ಕರೆ ನೀಡಲು ನಿರ್ಧರಿಸಿದ್ದೇವೆ. ಅದ್ದೂರಿಯಾಗಿ ಹುಟ್ಟುಹಬ್ಬ ಮಾಡಿಕೊಳ್ಳುವ ಕಾರ್ಯಕರ್ತರು ಹುಟ್ಟುಹಬ್ಬದ ಸಂಭ್ರಮದಲ್ಲಿ ಒಬ್ಬ ರೋಗಿಯ ಒಂದು ಡಯಾಲಿಸಿಸ್ ಶುಲ್ಕ ಕೊಡುಗೆಯಾಗಿ ನೀಡಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಿ ಎಂದು ಕರೆ ನೀಡುತ್ತೇವೆ.
ನಾವು ತಿಂಗಳಿಗೆ 1500 ಜನರಿಗೆ ಡಯಾಲಿಸಿಸ್ ಮಾಡಲಿದ್ದು, ಅಷ್ಟು ಜನರಿಗೆ ಬೇಕಾದ ಹಣವನ್ನು ನಮ್ಮ ಕಾರ್ಯಕರ್ತರ ಮೂಲಕ ಸಂಗ್ರಹ ಮಾಡಬೇಕು ಎಂದುಕೊಂಡಿದ್ದೇವೆ. ಇದರಿಂದ ಬಡ ರೋಗಿಗಳಿಗೆ ಉಚಿತ ಸೇವೆ ನೀಡಿದಂತಾಗುವ ಜೊತೆಗೆ ನಾವು ನಮ್ಮ ಸಂಘಟನೆಯನ್ನು ಬಲಪಡಿಸಿ ಕಾರ್ಯಕರ್ತರು ನಿರಂತರವಾಗಿ ನಮ್ಮ ಸಂಪರ್ಕದಲ್ಲಿರುವಂತೆ ಮಾಡಿಕೊಂಡಂತಾಗಲಿದೆ ಎಂದರು.
ಡಯಾಲಿಸಿಸ್ ಘಟಕ ಆರಂಭ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನಕ್ಕೆ ಡಯಾಲಿಸಿಸ್ ಘಟಕ ಆರಂಭಿಸಬೇಕು ಎನ್ನುವ ಚಿಂತನೆ ಇತ್ತು ಆದರೆ ಕಾರಣಾಂತರಗಳಿಂದ ಆಗಲಿಲ್ಲ. ಆದರೂ ಸದ್ಯದಲ್ಲೇ ರಾಜ್ಯದ ಬೃಹತ್ ಡಯಾಲಿಸಿಸ್ ಘಟಕ ಸದ್ಯದಲ್ಲೇ ಆರಂಭಗೊಳ್ಳಲಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಬಿಲ್ಲಿಂಗ್ ಕೌಂಟರ್ ಲೆಸ್ ಡಯಾಲಿಸಿಸ್ ಘಟಕ ನಿರ್ಮಾಣ ನಮ್ಮ ಗುರಿಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡುದಾರರೆಲ್ಲರಿಗೂ ಇಲ್ಲಿ ಉಚಿತವಾಗಿ ಡಯಾಲಿಸಿಸ್ ಮಾಡಲಾಗುತ್ತದೆ. ಸಿರಿವಂತರಿಗೆ ಇಲ್ಲಿ ಅವಕಾಶ ಇರುವುದಿಲ್ಲ ಎಂದು ತೇಜಸ್ವಿ ಸೂರ್ಯ ಮಾಹಿತಿ ನೀಡಿದರು.
ಉಚಿತವಾಗಿ ಡಯಾಲಿಸಿಸ್ ವ್ಯವಸ್ಥೆ: ಇನ್ನು ಆಸ್ಪತ್ರೆ ಖಾಸಗೀಕರಣ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ತಳ್ಳಿಹಾಕಿರುವ ಸಂಸದ ತೇಜಸ್ವಿ ಸೂರ್ಯ, ಕೋವಿಡ್ ಸಮಯದಲ್ಲಿ ಈ ಆಸ್ಪತ್ರೆಯನ್ನು ಮರು ಆರಂಭ ಮಾಡಲು ಸಂಸದರ ನಿಧಿಯಿಂದ ನೆರವು ನೀಡಿದ್ದೆ, ಈಗಲೂ ಉಚಿತವಾಗಿ ಡಯಾಲಿಸಿಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಚಾರಿಟಿ ಮೂಲಕ ಸೇವೆ ನೀಡಲಾಗುತ್ತದೆ. ಇದರಲ್ಲಿ ಖಾಸಗೀಕರಣದ ಪ್ರಶ್ನೆ ಬರುವುದಿಲ್ಲ ಎಂದರು.
ಓದಿ: ಬೊಮ್ಮಾಯಿ ಸಾಧನೆ ಕುರಿತ ಹಾಡುಗಳ ಧ್ವನಿಸುರುಳಿ ಬಿಡುಗಡೆ.. ನಟಿ ತಾರಾ ಅನುರಾಧಾ