ಬೆಂಗಳೂರು : ಬಿಬಿಎಂಪಿಗೆ ನೂತನ ಆಡಳಿತಾಧಿಕಾರಿಯ ನೇಮಕ ಆಗುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ವಿರೋಧದ ನಡುವೆಯೂ ಇಂದು ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಗೌರವ ಗುಪ್ತಾರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ಬಿಬಿಎಂಪಿಯ ಚುನಾಯಿತ ಸದಸ್ಯರ ಐದು ವರ್ಷದ ಕಾಲಾವಧಿ ಮುಕ್ತಾಯ ವಾಗಿರುವ ಹಿನ್ನೆಲೆ ಆದಷ್ಟು ಶೀಘ್ರ ಚುನಾವಣೆ ನಡೆಸುವಂತೆ ಕಾಂಗ್ರೆಸ್ ಒತ್ತಡ ಹೇರಿತ್ತು. ಆದರೆ, ಕ್ಷೇತ್ರ ಪುನರ್ವಿಂಗಡಣೆ, ಇನ್ನಷ್ಟು ವಾರ್ಡ್ಗಳ, ವಿಭಜನೆ, ವಾರ್ಡ್ಗಳ ಮೀಸಲಾತಿ ಹಂಚಿಕೆ ಸೇರಿದಂತೆ ಹಲವು ಕಾರ್ಯಗಳು ನಡೆಯಬೇಕಿದ್ದು ತ್ವರಿತವಾಗಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿತ್ತು. ಆದರೆ, ಆಡಳಿತದಲ್ಲಿ ಹಸ್ತಕ್ಷೇಪ ನಡೆಸಲು ಈ ತಂತ್ರಗಾರಿಕೆಗೆ ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಕೂಡ ಆರೋಪಿಸಿತ್ತು.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕವನ್ನು ವಿರೋಧಿಸಿದ್ದರು. ಆದಾಗ್ಯೂ ಸರ್ಕಾರ ಇಂಥದ್ದೊಂದು ಕ್ರಮ ಕೈಗೊಂಡರೂದಕ್ಕೆ ಕಾಂಗ್ರೆಸ್ ಕಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇನ್ನೊಂದೆರಡು ದಿನಗಳಲ್ಲಿ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಮಹಾನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕೂಡ ಕಾಂಗ್ರೆಸ್ ಮುಂದಾಗಿದೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ನಾಳೆ ಅಥವಾ ನಾಡಿದ್ದು ಬೆಂಗಳೂರು ನಗರ ವ್ಯಾಪ್ತಿಯ ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಸದಸ್ಯರಾಗಿದ್ದವರು, ಮುಖಂಡರನ್ನು ಕರೆಸಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸರ್ಕಾರದ ವಿರುದ್ಧ ಹೋರಾಟದ ಸರ್ವಾನುಮತದ ನಿರ್ಣಯ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಐದು ವರ್ಷ ಕಾಲಾವಧಿ ಮುಗಿಸಿದ ಬಿಬಿಎಂಪಿಗೆ ಚುನಾವಣೆ ನಡೆಸಬೇಕಿತ್ತು. ರಾಜ್ಯ ಚುನಾವಣಾ ಆಯೋಗವೂ ಸಿದ್ಧತೆ ನಡೆಸಿತ್ತು. ಆದರೆ, ಕೋವಿಡ್ ನೆಪವೊಡ್ಡಿ ಹಾಗೂ ಇತರೆ ಕಾರಣಗಳನ್ನು ಮುಂದಿಟ್ಟು ಚುನಾವಣೆ ಮುಂದೂಡಿಕೆಗೆ ಸರ್ಕಾರದ ಪ್ರಯತ್ನ ನಡೆಸಿದೆ. ಹೀಗಾಗಿಯೇ ಆಡಳಿತಾಧಿಕಾರಿಯನ್ನ ನೇಮಿಸಿ ಆದೇಶ ಹೊರಡಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ರಾಜ್ಯ ಸರ್ಕಾರ ತಮ್ಮ ಯಾವೊಂದು ಸಲಹೆಯನ್ನು ಸ್ವೀಕರಿಸುತ್ತಿಲ್ಲ ಎಂದು ಆಕ್ರೋಶಗೊಂಡಿರುವ ಕಾಂಗ್ರೆಸ್ ಬೃಹತ್ ಪ್ರತಿಭಟನಾ ವೇದಿಕೆಯ ರಚನೆಗೆ ಮುಂದಾಗಿದೆ.