ಬೆಂಗಳೂರು : ರಾಜ್ಯಪಾಲರು ಉಭಯ ಸದನ ಉದ್ದೇಶಿಸಿ ಮಾಡಿದ ಭಾಷಣದ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಪ್ರತಿಪಕ್ಷದ ಧರಣಿ, ಗದ್ದಲದ ನಡುವೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉತ್ತರ ನೀಡಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಸಂತಾಪ ಸೂಚನೆ ಮುಕ್ತಾಯವಾಗುತ್ತಿದ್ದಂತೆಯೇ ಮಹತ್ವದ ಸಾರ್ವಜನಿಕ ವಿಷಯದ ಮೇಲೆ ಚರ್ಚೆಗೆ ಅವಕಾಶ ಕೋರಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು. ಯತ್ನಾಳ್ ಹೇಳಿಕೆ ಕುರಿತು ಚರ್ಚೆಗೆ ಸಿದ್ದರಾಮಯ್ಯ ಪಟ್ಟು ಹಿಡಿದರು. ಶಾಸಕ ಬಸನಗೌಡ ಪಾಟೀಲ್ ಅವರು ದೊರೆಸ್ವಾಮಿ ಒಬ್ಬರಿಗೆ ಅವಮಾನ ಮಾಡಿಲ್ಲ. ಯತ್ನಾಳ್ ಹೇಳಿಕೆಯಿಂದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತೋರಲಾಗಿದೆ. ಇದಕ್ಕೆ ಸಚಿವರಾದ ಸಿ.ಟಿ. ರವಿ, ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನೊಟೀಸ್ ಕೊಡಿ, ಹೊರಗಿನ ವಿಚಾರಗಳು ಸದನದಲ್ಲಿ ಚರ್ಚೆ ಬೇಡ ಎಂದು ಹೇಳಿ ಚರ್ಚೆಗೆ ಅವಕಾಶ ನೀಡಬಾರದೆಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು. ಸ್ಪೀಕರ್ ತಮ್ಮ ವಿಶೇಷಾಧಿಕಾರ ಬಳಸಿ ಚರ್ಚೆಗೆ ಅವಕಾಶ ಕೊಡಲಿ ಎಂದು ಸಿದ್ದರಾಮಯ್ಯ ಪಟ್ಟುಹಿಡಿದರು.
ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಇದರ ಮಧ್ಯೆಯೇ ಸಿದ್ದರಾಮಯ್ಯ ಮಾತು ಮುಂದುವರಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಅದರ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಪಟ್ಟುಹಿಡಿದರು. ಆಗ ಮಧ್ಯಪ್ರವೇಶಿಸಿದ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನನ್ನನ್ನು ಸದನದಲ್ಲಿ ಎದ್ದು ನಿಲ್ಲುವಂತೆ ಮಾಡಬೇಡಿ. ಗಂಭೀರವಾದ ವಿಚಾರದ ಬಗ್ಗೆ ಪ್ರಸ್ತಾಪಿಸಲು ಸಿದ್ದರಾಮಯ್ಯ ಕೇಳಿದ್ದಾರೆ. ಆದರೆ, ಅಜೆಂಡಾದಲ್ಲಿ ಅದು ಇಲ್ಲ. ಈಗ ಸರ್ಕಾರದ ಉತ್ತರದ ಬಳಿಕ ಈ ಬಗ್ಗೆ ಗಮನಿಸುತ್ತೇನೆ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯಾಗಿ ಸಿಎಂ ಉತ್ತರ ಕೊಟ್ಟಮೇಲೆ ವಿಷಯ ಪ್ರಸ್ತಾಪಿಸಬಹುದು ಎಂದು ಹೇಳಿದರು.
ಸ್ಪೀಕರ್ ಹೇಳಿದ ಈ ಮಾತಿಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಆಕ್ಷೇಪಿಸಿ, ಸದನದ ನೀತಿ ನಿಯಮ ಪಾಲಿಸಲಿ, ನೊಟೀಸ್ ಕೊಡದೆ ಹೇಗೆ ಚರ್ಚೆಗೆ ಅವಕಾಶ ಕೊಡೋಕೆ ಸಾಧ್ಯ?. ಸ್ಪೀಕರ್ ಅವರು ಅವಕಾಶ ನೀಡಬಾರದೆಂದು ಮನವಿ ಮಾಡಿದರು. ಹಿಂದೆ ಇಂತಹ ಹಲವಾರು ಪ್ರಸಂಗಗಳಾಗಿವೆ. ಇಂತಹ ದೊಡ್ಡಮನುಷ್ಯರು ಹೀಗೆ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಸದನದಲ್ಲಿ ವಿಶೇಷ ನಿಯಮಾವಳಿ ರೂಪಿಸಲಾಗಿದೆ.
ವಿಧಾನಸಭಾಧ್ಯಕ್ಷರು ತಮಗೆ ದತ್ತವಾಗಿರುವ ವಿಶೇಷಾಧಿಕಾರ ಬಳಸಿ ಚರ್ಚೆಗೆ ಅವಕಾಶಕೊಡಬಹುದು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. ಆಗ ಸಚಿವ ಮಾಧುಸ್ವಾಮಿ, ಯಾರು ದೊಡ್ಡಮನುಷ್ಯರು ಯಾರು ಅಲ್ಲ ಎಂಬುದನ್ನು ರಾಜ್ಯದ ಜನ ನಿರ್ಧರಿಸುತ್ತಾರೆ. ಸರ್ಕಾರಕ್ಕೆ ನೊಟೀಸ್ ನೀಡದೆ ಏಕಾಏಕಿ ಮನಸ್ಸಿಗೆ ಬಂದ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲು ಸಾಧ್ಯವಿಲ್ಲ ಎಂದರು. ಸ್ಪೀಕರ್ ಅವರಿಗೆ ವಿವೇಚನಾಧಿಕಾರವಿದೆ. ನೀವು ಇದಕ್ಕೆ ಅವಕಾಶ ಮಾಡಿಕೊಡಬೇಕು. ಸ್ಪೀಕರ್ ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಸಂವಿಧಾನ ಉಳಿಸಿ ಘೋಷಣೆ ಹಾಗೂ ಸಂವಿಧಾನ ಪುಸ್ತಕ ಪ್ರದರ್ಶಿಸಿದ ಧರಣಿ ನಿರತ ಕಾಂಗ್ರೆಸ್ ಜೆಡಿಎಸ್ ಶಾಸಕರು. ದೊರೆಸ್ವಾಮಿಯವರಿಗೆ ಜಯವಾಗಲಿ, ಭಾರತ್ ಮಾತಾಕಿ ಜೈ ಘೋಷಣೆ ಮೊಳಗಿಸಿದರು. ಇದೇನಾ ಬಿಜೆಪಿ ಸಂಸ್ಕೃತಿ ಅಂತ ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್, ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಪ್ರತಿಪಕ್ಷಗಳ ಸದಸ್ಯರ ತೀವ್ರ ವಿರೋಧ, ಗದ್ದಲ, ಕೂಗಾಟದ ನಡುವೆಯೇ ರಾಜ್ಯಪಾಲರ ಭಾಷಣಕ್ಕೆ ವಂದನೆ ಸೂಚಿಸುವ ನಿರ್ಣಯದ ಮೇಲಿನ ಚರ್ಚೆ ಮುಕ್ತಾಯವಾಗಿದೆ ಎಂದು ಘೋಷಿಸಿದರು.