ಬೆಂಗಳೂರು : ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ ಎದುರು ಬಿಎಂಟಿಸಿ ಬಸ್, ಬೈಕ್ ಹಾಗೂ ಆಟೋ ನಡುವೆ ಸರಣಿ ಅಪಘಾತ ಸಂಭವಿಸಿದೆ. ಇದರಿಂದಾಗಿ ಆಟೋದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಧ್ಯಾಹ್ನ ಕುಮಾರಪಾರ್ಕ್ ರಸ್ತೆಯಲ್ಲಿರುವ ಸಿಎಂ ಗೃಹ ಕಚೇರಿ ಕೃಷ್ಣಾ ಎದುರು ಅಧಿಕಾರಿಗಳ ವಾಹನ ಸಿಎಂ ಕಚೇರಿ ಆವರಣದಿಂದ ಹೊರ ಹೋಗಲು ಸಂಚಾರಿ ಪೊಲೀಸರು ರಸ್ತೆ ಸಂಚಾರ ನಿಲ್ಲಿಸಿದ್ದರು. ಈ ವೇಳೆ ಹೆಬ್ಬಾಳ ಕಡೆಯಿಂದ ಬಂದ ಬಸ್ ಸಿಎಂ ಕಚೇರಿ ಎದುರು ನಿಂತಿತ್ತು. ಪಕ್ಕದಲ್ಲಿ ದ್ವಿಚಕ್ರ ವಾಹನ ಕೂಡ ಬಂದಿತ್ತು. ಆದರೆ, ಬಸ್ ನ ಹಿಂದೆ ಬಂದ ಆಟೋ ಚಾಲಕ ಆಟೋ ನಿಲ್ಲಿಸದೆ ಕಿರಿದಾದ ಜಾಗದಲ್ಲೇ ಆಟೋ ನುಗ್ಗಿಸಲು ಯತ್ನಿಸಿದ್ದ. ಇದರಿಂದಾಗಿ ಆಟೋ ಮುಂದಿದ್ದ ಬೈಕ್ ಹಾಗೂ ಬಿಎಂಟಿಸಿ ಬಸ್ ಗೂ ಢಿಕ್ಕಿ ಹೊಡೆದಿದೆ. ಬಳಿಕ ಆಟೋ ರಸ್ತೆ ಪಕ್ಕ ವಾಲಿಕೊಂಡು ಬಿದ್ದಿದೆ.
ಕೂಡಲೇ ಸ್ಥಳದಲ್ಲಿದ್ದ ಪತ್ರಕರ್ತರು, ಪೊಲೀಸರು ಧಾವಿಸಿ ಆಟೋದಲ್ಲಿದ್ದ ಚಾಲಕ ಮತ್ತು ಪ್ರಯಾಣಿಕರನ್ನು ರಕ್ಷಿಸಿದರು. ಅದೃಷ್ಟವಶಾತ್ ಆಟೋ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಸಂಚಾರಿ ಪೊಲೀಸರು 108 ಆ್ಯಂಬುಲೆನ್ಸ್ ಗೆ ಕರೆ ಮಾಡಿದರಾದ್ರೂ 50 ನಿಮಿಷ ಕಳೆದ್ರೂ ಅದು ಬರಲಿಲ್ಲ. ಹಾಗಾಗಿ ಪೊಲೀಸರೇ ಗಾಯಾಳುಗಳನ್ನು ಮತ್ತೊಂದು ಆಟೋದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಅಪಘಾತದ ಹಿನ್ನೆಲೆ ಬಿಎಂಟಿಸಿ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ಬಸ್ ನಲ್ಲಿ ಕಳಿಸಿಕೊಡಲಾಯಿತು. ನಂತರ ಆಟೋವನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.