ಬೆಂಗಳೂರು: ರೌಡಿಶೀಟರ್ ಜೈಲಲ್ಲಿದ್ದುಕೊಂಡೇ ತನ್ನ ಸಹ ಕೈದಿ ಇನ್ನೋರ್ವ ರೌಡಿಶೀಟರ್ನ ಪೋಷಕರ ಕೊಲೆಗೆ ಸ್ಕೆಚ್ ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿದೆ. ರೌಡಿಶೀಟರ್ ಪ್ರಮೋದ್ ರಿಯಾಬ್ ಕುಟುಂಬದವರ ಮೇಲೆ ಜೈಲಿನಲ್ಲಿರುವ ಇನ್ನೊಬ್ಬ ರೌಡಿಶೀಟರ್ ತನ್ನ ಸಹಚರರಿಂದ ಕೊಲೆ ಯತ್ನಕ್ಕೆ ಯತ್ನಿಸಿದ್ದು, ಆರೋಪಿಗಳನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.
ಲಗ್ಗೆರೆಯ ಅಭಿಷೇಕ್ ಅಮೂಲ್, ಕುರುಬರಹಳ್ಳಿಯ ಸುನೀಲ್ ದೇಸಾಯಿ ವಿಜಯನಗರದ ಪ್ರವೀಣ್ ಕುಮಾರ್, ರಾಜಾಜಿನಗರದ ನವೀನ್ ಬಂಧಿತ ಆರೋಪಿಗಳು. ಬಂಧಿತರಿಂದ ಎರಡು ಲಾಂಗ್, ಮೂರು ದ್ವಿಚಕ್ರ ವಾಹನ, ಎರಡು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಘಟನೆ ವಿವರ:
ಆರೋಪಿ ಪ್ರಮೋದ್ ರಿಯಾಬ್ ಸುಬ್ರಮಣ್ಯ ನಗರ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದು, ಇತ್ತೀಚೆಗೆ ರಾಬರಿ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಈತ ಜೈಲಿನಲ್ಲಿರುವಾಗ ಮೊಬೈಲ್ ಪೋನ್ ವಿಚಾರಕ್ಕೆ ಮತ್ತೊಬ್ಬ ರೌಡಿ ಜೊತೆಯಲ್ಲಿ ಜಗಳ ಮಾಡಿಕೊಂಡು ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಇದೇ ದ್ವೇಷವಾಗಿ ಗಲಾಟೆ ಮಾಡಿಕೊಂಡಿದ್ದ ರೌಡಿಶೀಟರ್ ಕೂಡ ಪ್ರಮೋದ್ ರಿಯಾಬ್ ಮೇಲೆ ಹಲ್ಲೆ ಮಾಡಿದ್ದಾನೆ. ಪ್ರಮೋದ್ ರಿಯಾಬ್ನನ್ನು ಇಷ್ಟಕ್ಕೆ ಬಿಟ್ಟರೆ ಸರಿ ಹೋಗುವುದಿಲ್ಲವೆಂದು ಆ ರೌಡಿಶೀಟರ್ ಜೈಲಿನಲ್ಲಿದ್ದುಕೊಂಡೆ ಪ್ರಮೋದ್ ರಿಯಾಬ್ ಕುಟುಂಬದವರ ಮನೆ ತಿಳಿದುಕೊಂಡು ಜೈಲಿನಿಂದಲೇ ಹೊರಗೆ ಇರುವ ತನ್ನ ಸಹಚರರನ್ನು ಸಂಪರ್ಕಿಸಿ, ಪ್ರಮೋದ್ ರಿಯಾಬ್ ತಂದೆ-ತಾಯಿ ಮೇಲೆ ಗಲಾಟೆ ಮಾಡಿ ಕೊಲೆಗೆ ಸಂಚು ರೂಪಿಸಿದ್ದ.
ಅಂತೆಯೇ ಆರೋಪಿ ಅಭಿಷೇಕ್ ಅಮೂಲ್ ತನ್ನ 7 ಜನ ಹುಡುಗರನ್ನು ಕರೆದುಕೊಂಡು ಹೋಗಿ ಕೊಲೆ ಯತ್ನ ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಚರಣ್ ಕ್ಯಾಟಿ, ಮಂಜುನಾಥ ಮುಳಬಾಗಿಲು ತಲೆಮೆರೆಸಿಕೊಂಡಿದ್ದಾರೆ. ಇನ್ನು ಓರ್ವ ಬಾಲಕ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.