ನವದೆಹಲಿ/ಬೆಂಗಳೂರು : ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರನ್ನು ನವದೆಹಲಿಯ ಕಚೇರಿಯಲ್ಲಿ ಪಂಜಾಬ್ನ ಸಚಿವ ಮನ್ಪ್ರೀತ್ ಸಿಂಗ್ ಬಾದಲ್ ಭೇಟಿಯಾಗಿ, ಉದ್ದೇಶಿತ ಔಷಧ ಪಾರ್ಕ್ನ ಪಂಜಾಬ್ ರಾಜ್ಯದ ಭಟಿಂಡಾನಲ್ಲಿ ಸ್ಥಾಪಿಸಲು ಪ್ರಸ್ತಾಪ ಪರಿಗಣಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.
ಭಟಿಂಡಾದಲ್ಲಿ ಸ್ಥಳ, ಉತ್ತಮ ಸಂಪರ್ಕ, ನೀರು ಮತ್ತು ಜಮೀನಿನ ಲಭ್ಯತೆಯನ್ನು ಹೊಂದಿದ್ದು, ರಾಜ್ಯದಲ್ಲಿ ಈಗಾಗಲೇ ಕೆಲವು ದೊಡ್ಡ ಯುಎಸ್ಎಫ್ಡಿಎ ಅನುಮೋದಿತ ಔಷಧೀಯ ಕಂಪನಿಗಳು ಮತ್ತು ಔಷಧ ಸಂಸ್ಥೆಗಳಾದ ಎನ್ಐಪಿಇಆರ್, ಐಐಎಸ್ಆರ್, ಏಮ್ಸ್ ಮೊದಲಾದ ಸಂಸ್ಥೆಗಳು ಅಸ್ತಿತ್ವ ಹೊಂದಿವೆ. ಹಾಗಾಗಿ ಅಲ್ಲಿಯೇ ಔಷಧ ಪಾರ್ಕ್ ಸ್ಥಾಪಿಸಿ ಎಂದು ಮನವಿ ಮಾಡಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ಸದಾನಂದಗೌಡ, ಮೂರು ಸಗಟು ಔಷಧ ಪಾರ್ಕ್ ಮತ್ತು ನಾಲ್ಕು ವೈದ್ಯಕೀಯ ಉಪಕರಣಗಳ ಪಾರ್ಕ್ ಸ್ಥಾಪನೆಗೆ ವಸ್ತುನಿಷ್ಠವಾಗಿ ಸ್ಥಳ ಆಯ್ಕೆ ಮಾಡಲು ಮಾರ್ಗಸೂಚಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಔಷಧಿ ಇಲಾಖೆ ತೊಡಗಿದೆ ಎನ್ನುತ್ತಾ ಮನವಿ ಪರಿಶೀಲಿಸುವ ಭರವಸೆ ನೀಡಿ ಪಾರ್ಕ್ ಅಭಿವೃದ್ಧಿಗೆ ಬೆಂಬಲ ಸೂಚಿಸಿ ಆಸಕ್ತಿ ತೋರಿಸಿದ್ದಕ್ಕಾಗಿ ಬಾದಲ್ ಅವರಿಗೆ ಧನ್ಯವಾದ ಅರ್ಪಿಸಿದರು.
ಎಪಿಐಗಳು/ಕೆಎಸ್ಎಂ ಮತ್ತು ವೈದ್ಯಕೀಯ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸಚಿವ ಸಂಪುಟ 2020ರ ಮಾರ್ಚ್ 12ರಂದು ಮೂರು ಬೃಹತ್ ಔಷಧ ಮತ್ತು ನಾಲ್ಕು ವೈದ್ಯಕೀಯ ಉಪಕರಣಗಳ ಪಾರ್ಕ್ಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಗೆ ಅನುಮೋದನೆ ನೀಡಿದೆ. ಇದಕ್ಕಾಗಿ ಭಾರತ ಸರ್ಕಾರ ರಾಜ್ಯಗಳಿಗೆ ಪ್ರತೀ ಸಗಟು ಔಷಧ ಪಾರ್ಕ್ಗೆ ಗರಿಷ್ಠ 1000 ಕೋಟಿ ರೂ.ಮತ್ತು ವೈದ್ಯಕೀಯ ಸಲಕರಣೆ ಪಾರ್ಕ್ಗೆ 100 ಕೋಟಿ ರೂ. ಅನುದಾನ ನೀಡಲಿದೆ.
ಇದರ ಜೊತೆಗೆ ದೇಶಾದ್ಯಂತ ಪ್ರಮುಖ ನಿರ್ಣಾಯಕ ಅಗತ್ಯ ಸಾಮಗ್ರಿ/ಔಷಧ ಮಾಧ್ಯಮಿಕಗಳು ಮತ್ತು ಎಪಿಐಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ದೇಶೀಯವಾಗಿ ಉತ್ಪಾದಿಸುವುದನ್ನು ಉತ್ತೇಜಿಸಲು ಭಾರತ ಸರ್ಕಾರ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆ ಪ್ರಕಟಿಸಿದೆ ಎಂದರು. ಈ ಯೋಜನೆಗಳ ಒಟ್ಟು ಆರ್ಥಿಕ ಹೊರೆ 13,760 ಕೋಟಿ ರೂಪಾಯಿಗಳಾಗಿವೆ.
ಸಗಟು ಔಷಧ ಪಾರ್ಕ್ ಉತ್ತೇಜನ ಯೋಜನೆಯಿಂದ 46,400 ಕೋಟಿ ರೂ. ಹಂತ ಹಂತದ ಉತ್ಪಾದನೆಯಾಗಲಿದ್ರೆ, ವೈದ್ಯಕೀಯ ಉಪಕರಣ ಪಾರ್ಕ್ನಲ್ಲಿ 68,437 ಕೋಟಿ ರೂ. ಉತ್ಪಾದನೆಗೆ ಕಾರಣವಾಗಲಿದೆ. ಈ ಯೋಜನೆಗಳಿಂದ ಗಣನೀಯವಾಗಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಮಾಹಿತಿ ನೀಡಿದರು.