ಕೆ.ಆರ್.ಪುರಂ(ಬೆಂಗಳೂರು): ಸಂಚಾರ ಪೂರ್ವ ವಿಭಾಗದ ಡಿಸಿಪಿ ಶಾಂತರಾಜ್ ಮಾರ್ಗದರ್ಶನದಲ್ಲಿ ದೋಷ ಪೂರಿತ ನಂಬರ್ ಪ್ಲೇಟ್ಗಳ ವಿರುದ್ಧ ಕಳೆದ ಎರಡು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ನೂರಾರು ಸಂಖ್ಯೆಯ ದೋಷಪೂರಿತ ನಂಬರ್ ಪ್ಲೇಟ್ ಬಳಕೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಅಭಿಯಾನದಡಿ ಕಾರ್ಯಾಚರಣೆ ಮುಂದುವರಿಸಿರುವ ಕೆ.ಆರ್.ಪುರಂ ಸಂಚಾರ ಪೊಲೀಸರು, ಇಂದು ವಿಶಿಷ್ಟ ರೀತಿಯ ದೋಷಪೂರಿತ ಸಂಖ್ಯಾ ಫಲಕವೊಂದನ್ನು ಪತ್ತೆ ಹಚ್ಚಿ ಮಾಲೀಕನಿಗೆ ದಂಡ ವಿಧಿಸಿದ್ದಾರೆ.
ಕಾರಿನ ನಂಬರ್ ಪ್ಲೇಟ್ನಲ್ಲಿ ಆಂಧ್ರ ಸಿಎಂ ಜಗನ್ ಹೆಸರು ಕಂಡು ಬರುತ್ತಿದ್ದಂತೆ ಎಚ್ಚೆತ್ತ ಕೆ.ಆರ್.ಪುರಂ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದ್ದಾರೆ. ಆ ವೇಳೆ ಕಾರಿನ ಸಂಖ್ಯೆ AP 39 JG 451 ಎಂದಿದ್ದು, '451' ಸಂಖ್ಯೆಯನ್ನ 'YSJ' ರೀತಿಯ ಸಂಕೇತಾಕ್ಷರಗಳನ್ನು ಹೋಲುವ ರೀತಿ ಬಳಸಲಾಗಿದೆ.
ಆದರೆ, ಇದು ಮೋಟಾರು ವಾಹನ ಕಾಯ್ದೆ ಅಧಿನಿಯಮಕ್ಕೆ (The Motor Vehicle Act Rule 50, 51 of MV Act, 1989) ವ್ಯತಿರಿಕ್ತವಾಗಿದೆ. ಆದ್ದರಿಂದ ಕಾರು ಮಾಲೀಕನಿಗೆ ದಂಡ ಹಾಕಿ ನಂಬರ್ ಪ್ಲೇಟ್ ಬದಲಾಯಿಸುವಂತೆ ಹೇಳಿ ಕಳುಹಿಸಲಾಗಿದೆ ಎಂದು ಕೆ.ಆರ್.ಪುರಂ ಸಂಚಾರ ಪೊಲೀಸ್ ಠಾಣಾಧಿಕಾರಿ ಎಂ.ಎ.ಮಹಮ್ಮದ್ ತಿಳಿಸಿದ್ದಾರೆ. ಕಾರಿನ ಮಾಲೀಕ ಆಂಧ್ರ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಅಪ್ಪಟ ಅಭಿಮಾನಿಯಾಗಿದ್ದರಿಂದ, ಕಾರಿನ ನಂಬರ್ ಪ್ಲೇಟ್ನಲ್ಲಿ ಅವರ ಹೆಸರನ್ನು ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ.