ಬೆಂಗಳೂರು: ಈಗಲ್ ಟನ್ ರೆಸಾರ್ಟ್ನಲ್ಲಿ ಬಡಿದಾಡಿಕೊಂಡು ಇದೀಗ ಸಂಧಾನಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿರುವ ಶಾಸಕ ಆನಂದ್ ಸಿಂಗ್ ಹಾಗೂ ಗಣೇಶ್ ಖುದ್ದು ಹಾಜರಾದಲ್ಲಿ ಮಾತ್ರ ಮುಂದಿನ ಪ್ರಕ್ರಿಯೆ ಜರುಗಿಸುತ್ತೇವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಧಾನ ಮಾಡಿಕೊಳ್ಳುತ್ತೇವೆ. ಹೀಗಾಗಿ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸಿ ಎಂದು ಕೋರಿ ಶಾಸಕ ಗಣೇಶ್ ಸಲ್ಲಿಸರುವ ಅರ್ಜಿಯನ್ನು ನ್ಯಾ. ಬಿ.ಎ ಪಾಟೀಲ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಇಬ್ಬರೂ ಶಾಸಕರ ಪರ ವಕೀಲರು ಪ್ರತ್ಯೇಕವಾಗಿ ಸಂಧಾನಕ್ಕೆ ಒಪ್ಪಿರುವ ಪ್ರಮಾಣಪತ್ರಗಳನ್ನು ಪೀಠಕ್ಕೆ ಸಲ್ಲಿಸಿದರು.
ಪ್ರಮಾಣಪತ್ರ ಪರಿಶೀಲಿಸಿದ ಪೀಠ ಕಕ್ಷೀದಾರರು ಹಾಜರಿದ್ದಾರೆಯೇ ಎಂದು ಪ್ರಶ್ನಿಸಿತು. ಗಣೇಶ್ ಪರ ವಕೀಲರು ಉತ್ತರಿಸಿ, ದೂರುದಾರರೇ ಪ್ರಮಾಣಪತ್ರ ಸಲ್ಲಿಸಿದ್ದಾರೆ, ಮುಂದಿನ ಪ್ರಕ್ರಿಯೆ ಜರುಗಿಸಬಹುದು. ಪ್ರಕರಣದ ಕಕ್ಷೀದಾರರು ಇಬ್ಬರೂ ಶಾಸಕರಾಗಿದ್ದು, ಪ್ರೀತಿಗೆ ಹೊಡೆದಾಡಿಕೊಂಡಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಈ ಕಾಲದಲ್ಲಿ ಯಾರನ್ನೂ ನಂಬುವಂತಿಲ್ಲ. ದೂರುದಾರರು ಹಾಗೂ ಆರೋಪಿತರು ಹಾಜರಾದಲ್ಲಿ ಮಾತ್ರ ಸಂಧಾನ ಕೋರಿಕೆಯನ್ನು ವಿಚಾರಣೆಗೆ ಒಳಪಡಿಸಬಹುದು. ಹಾಗೆಯೇ ಇಬ್ಬರೂ ಕಕ್ಷೀದಾರರು ಸಂಧಾನ ಮಾಡಿಕೊಳ್ಳುವ ಕುರಿತು ಜಂಟಿಯಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.