ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಹುದ್ದೆಯಿಂದ ತಮ್ಮನ್ನ ವರ್ಗಾವಣೆಗೊಳಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಕಾನೂನು ಸಮರ ಸಾರಿದ್ದ ಮಾಜಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಸಿಎಟಿನಲ್ಲಿ ಹಾಕಿದ್ದ ಅರ್ಜಿ ಹಿಂದಕ್ಕೆ ಪಡೆದಿರುವ ಕಾರಣ ನಿಗೂಢವಾಗಿದೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ಟೆಲಿಫೋನ್ ಕದ್ದಾಲಿಕೆ ಮಾಡಲಾಗಿದೆ.ಇದರಲ್ಲಿ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್ ಅವರ ಕೈವಾಡ ಇದೆಯೇ?ಎಂದು ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ. ಬೆಂಗಳೂರು ನಗರ ಕಮಿಷನರ್ ಆಗಿದ್ದ ತಮ್ಮನ್ನ ವಿನಾಕಾರಣ ವರ್ಗಾವಣೆಗೊಳಿಸಿರೋದನ್ನ ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದರು. ಆದರೆ, ಈಗ ಕಾನೂನು ಹೋರಾಟದಿಂದ ಹಿಂದಕ್ಕೆ ಹೆಜ್ಜೆ ಇಟ್ಟಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಟೆಲಿಪೋನ್ ಕದ್ದಾಲಿಕೆ ಆರೋಪ ಪ್ರಕರಣದ ತನಿಖೆ ಮುಂದುವರೆದೆರೆ ತಾವು ಎಲ್ಲಿ ತನಿಖೆ ಎದುರಿಸಬೇಕಾಗುತ್ತದೆಯೋ ಎಂಬ ಆತಂಕ ಅವರನ್ನ ಕಾಡಿದೆಯಾ ಗೊತ್ತಿಲ್ಲ. ಜತೆಗೆ ಈದೇ ಟೈಮಿನಲ್ಲಿ ಸರ್ಕಾರದ ವಿರೋಧ ಕಟ್ಟಿಕೊಳ್ಳುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಸಿಎಟಿನಲ್ಲಿ ಸಲ್ಲಿಸಿದ್ದ ಅರ್ಜಿ ವಾಪಸ್ ಪಡೆದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಸರ್ಕಾರದ ಒಬ್ಬ ಉನ್ನತ ಅಧಿಕಾರಿಯಾಗಿ ಸರ್ಕಾರದ ವಿರುದ್ದವೇ ಕಾನೂನು ಹೋರಾಟ ನಡೆಸಿದರೆ, ಭವಿಷ್ಯದಲ್ಲಿ ತಮಗೆ ಸಹಕಾರ ಸಿಗದೆ ಇರಬಹುದು. ಅಧಿಕಾರಶಾಹಿಗೆ ತಪ್ಪು ಸಂದೇಶವನ್ನು ನೀಡಿದಂತಾಗುತ್ತದೆ ಎಂಬ ಗೊಂದಲ ಸಹ ಅಲೋಕ್ ಕುಮಾರ್ ಅರ್ಜಿ ಹಿಂದಕ್ಕೆ ಪಡೆಯಲು ಕಾರಣ ಎನ್ನಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂರಾಲ್ಕು ದಿನಗಳಲ್ಲಿ ಕಮಿಷನರ್ ಆಗಿದ್ದ ಅಲೋಕ್ ಕುಮಾರ್ ವರ್ಗಾವಣೆಯಾಗಿತ್ತು. ಪೊಲೀಸ್ ಕಮಿಷನರ್ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದ ಮತ್ತೊಬ್ಬ ಹಿರಿಯ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಪೊಲೀಸ್ ಕಮಿಷನರ್ ಆಗಿ ಮುಖ್ಯಮಂತ್ರಿಗಳು ನೇಮಿಸಿದ್ದಕ್ಕೆ ಅಲೋಕ್ ಕುಮಾರ್ ಅಸಮಾಧಾನಗೊಂಡಿದ್ರು. ಅಲೋಕ್ ಕುಮಾರ್ ಪೊಲೀಸ್ ಕಮಿಷನರ್ ಆಗಿದ್ದ ಅವಧಿಯಲ್ಲಿ ಟೆಲಿಫೋನ್ ಕದ್ದಾಲಿಕೆ ಪ್ರಕರಣ ನಡೆದಿರುವುದರಿಂದ ಅವರ ಪಾತ್ರವೂ ಪ್ರಕರಣದಲ್ಲಿ ಇರಬಹುದೇ ಅನ್ನೋ ಅನುಮಾನವನ್ನ ರಾಜಕಾರಣಿಗಳು ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದರು.