ಬೆಂಗಳೂರು: ಲಾಕ್ಡೌನ್ ವೇಳೆ ಸರ್ಕಾರಿ ವಾಹನದಲ್ಲಿ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದ ಆರೋಪಿಗಳಿಂದ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಿಶೋರ್ ಕುಮಾರ್ ಹಾಗೂ ಕಾನ್ಸ್ಪೇಬಲ್ ಜನಾರ್ಧನ್ ವಿರುದ್ಧ ಎಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಪೊಲೀಸರು ಇನ್ನೂ ಕೆಲವೇ ದಿನಗಳಲ್ಲಿ ವಿಚಾರಣೆ ನಡೆಸಲಿದ್ದೇವೆ. ಸದ್ಯ ಡಿಜಿಪಿ ಪ್ರವೀಣ್ ಸೂದ್ ಅವರಿಂದ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೇಬಲ್ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ಬಂದಿದೆ. ಎಸಿಪಿ ವಾಸು ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ ಬಂದಿಲ್ಲ. ಆದೇಶ ಬಂದರೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವುದಾಗಿ ಎಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಾಕ್ಡೌನ್ ನಡುವೆಯು ಕಳೆದ ಏಪ್ರಿಲ್ 11 ರಂದು ವಾಣಿಜ್ಯ ಇಲಾಖೆಯ ಜೀಪ್ನಲ್ಲಿ ಮದ್ಯದ ಬಾಕ್ಸ್ ಸರಬರಾಜು ಮಾಡುತ್ತಿದ್ದ ಹಿನ್ನೆಲೆಯಲ್ಲಿ ವಿಶೇಷ್ ಹಾಗೂ ಗೋಪಿ ಇಬ್ಬರನ್ನು ಬಂಧಿಸಿ ಆರೋಪಿಗಳಿಂದ ಎಸಿಪಿ ವಾಸು ತಂಡವು 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದಡಿ ವಾಸು ಅವರನ್ನು ಸಸ್ಪೆಂಡ್ ಮಾಡಲಾಗಿತ್ತು.
ಇನ್ನೊಂದೆಡೆ ಆರೋಪಿ ಕುಟುಂಬಸ್ಥರು ಹಣ ಕೊಡಲಿಲ್ಲ ಎಂದರೆ ಎಫ್ಐಆರ್ ದಾಖಲು ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆ ಡಿಜಿಗೆ ದೂರು ನೀಡಲಾಗಿತ್ತು. ದೂರಿನನ್ವಯ ವಿಚಾರಣೆ ನಡೆಸುವಂತೆ ಎಸಿಬಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಡಿಜಿ ಸೂಚನೆಯಂತೆ ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕೇಸ್ ದಾಖಲಾಗಿದೆ.