ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸದಾಶಿವನಗರ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಬೆಂಗಳೂರಿನ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದಿಂದ ಹೊರಟ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋಮವಾರ ಬೆಳಗ್ಗೆಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಸಮಾಲೋಚಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಬರುವ ಜುಲೈ 3ರಿಂದ 10ದಿನ ರಾಜ್ಯ ಸರ್ಕಾರದ ನೂತನ ಬಜೆಟ್ ಅಧಿವೇಶನ ನಡೆಯಲಿದೆ. ಅಲ್ಲಿ ಕಾಂಗ್ರೆಸ್ ಪಕ್ಷದ ಐದು ಭಾಗ್ಯಗಳಿಗೆ ಹಣ ಮೀಸಲಿಡುವ ಜೊತೆಗೆ ಇತರೆ ಭರವಸೆಗಳ ಈಡೇರಿಕೆಗೂ ಪ್ರಯತ್ನ ನಡೆಸುವ ಸವಾಲು ಸರ್ಕಾರದ ಮುಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಡಿ.ಕೆ. ಶಿವಕುಮಾರ್ ಮುಂಬರುವ ದಿನಗಳಲ್ಲಿ ಪ್ರತಿಪಕ್ಷಗಳನ್ನು ಎದುರಿಸುವ ಜೊತೆಗೆ ರಾಜ್ಯದಲ್ಲಿ ಆರ್ಥಿಕ ಕ್ರೋಢೀಕರಣ ಮಾಡುವ ವಿಚಾರವಾಗಿಯೂ ಚರ್ಚಿಸಿದ್ದಾರೆ.
ಬಿಬಿಎಂಪಿ ಚುನಾವಣೆ ಗೆಲ್ಲಲು ಸಲಹೆ: ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷದ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಇಂದಿನ ಈ ಭೇಟಿ ಸಂದರ್ಭ ಡಿಕೆಶಿ ಜೊತೆ ಮುಂದಿನ ದಿನಗಳಲ್ಲಿ ನಡೆಯುವ ಬಿಬಿಎಂಪಿ ಚುನಾವಣೆ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗುವಂತೆ ಸಲಹೆ ನೀಡಿದ್ದಾರೆ. ಬೆಂಗಳೂರು ನಗರ ಸಚಿವರಾಗಿರುವ ಹಿನ್ನೆಲೆ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಅತ್ಯಂತ ಪ್ರಮುಖವಾದುದಾಗಿದೆ. ಸದ್ಯ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಅಲೆಯಲ್ಲೇ ಬಿಬಿಎಂಪಿ ಚುನಾವಣೆ ಸಹ ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪರ ಜನ ಇದ್ದಾರೆ ಎನ್ನುವುದನ್ನು ತೋರಿಸಿಕೊಡಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ 2ನೇ ಆಡಳಿತ ಸುಧಾರಣಾ ಆಯೋಗದ ವರದಿ ಸಲ್ಲಿಕೆ
ಮುಂಬರುವ ದಿನಗಳಲ್ಲಿ ನಡೆಯುವ ಬಿಬಿಎಂಪಿ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಾವು ಗೆಲ್ಲಲೇಬೇಕು. ಇದರ ಜೊತೆ ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕಿದೆ. ಸಾಧ್ಯವಾದಷ್ಟು ಪಕ್ಷವನ್ನು ಲೋಕಸಭೆಗೆ ಅಣಿಗೊಳಿಸಿ. ಕಾರ್ಯಕರ್ತರನ್ನು ಹುರಿದುಂಬಿಸಿ. ವಿವಿಧ ಕಾರ್ಯ ಹಮ್ಮಿಕೊಂಡು ರಾಜ್ಯ ಸುತ್ತಿ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮುಂದಿನ ಚುನಾವಣೆಯನ್ನೂ ಗೆಲ್ಲುವಂತಾಗಿಸಿ. ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ ಎಂದು ನಿರಾಳರಾಗಬೇಡಿ. ಇದು ಕಾಂಗ್ರೆಸ್ ಪಾಲಿಗೆ ಪರೀಕ್ಷೆಯ ಕಾಲ. ನೀವೆಲ್ಲರ ಸಂಘಟನಾತ್ಮಕ ಪ್ರಯತ್ನ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: ದೇವೇಗೌಡರು ಮಧುಗಿರಿಗೆ ಬಂದು ಎದೆ ಬಡಿದುಕೊಂಡರೂ ನನ್ನನ್ನು ಸೋಲಿಸಲಾಗಲಿಲ್ಲ: ಸಚಿವ ರಾಜಣ್ಣ
ಶಾಸಕರ ಭೇಟಿ: ಮಹಾರಾಷ್ಟ್ರ ಮಾಜಿ ಸಿಎಂ ವಿಲಾಸರಾವ್ ದೇಶಮುಖ್ ಅವರ ಪುತ್ರ, ಶಾಸಕ ಧೀರಜ್ ದೇಶಮುಖ್ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ, ಸಮಾಲೋಚನೆ ನಡೆಸಿದರು.
ಇದನ್ನೂ ಓದಿ: Basavaraja Bommai: ಲೋಕಸಭೆ ಚುನಾವಣೆಗೆ ಶಾಸಕರಿಗೆ ಗುರಿ ನೀಡುವ ಕುರಿತು ಚರ್ಚೆ- ಬಸವರಾಜ ಬೊಮ್ಮಾಯಿ