ಬೆಂಗಳೂರು: ಅಧಿಕಾರಿಗಳ ಗ್ಯಾಲರಿಯ ಕುರ್ಚಿಗಳು ಖಾಲಿಯಾಗಿದ್ದನ್ನು ನೋಡಿ ಕಾರ್ಪೊರೇಟರ್ ಗುಣಶೇಖರ್ ಆಕ್ಷೇಪ ವ್ಯಕ್ತಪಡಿಸಿ, ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಐದು ಸಾವಿರ ದಂಡ ವಿಧಿಸುವಂತೆ ಗುಣಶೇಖರ್ ಆಗ್ರಹಿಸಿದರು.
ಆಯುಕ್ತ ಮಂಜುನಾಥ್ ಪ್ರಸಾದ್ ಇದಕ್ಕೆ ಉತ್ತರಿಸಿ, ಸಭೆಗಳಿಗೆ ಬರುವುದು ಅಧಿಕಾರಿಗಳ ಕರ್ತವ್ಯ. ಸಮಸ್ಯೆಗಳ ಬಗ್ಗೆ ಟಿಪ್ಪಣಿ ಮಾಡಿ ಬಗೆಹರಿಸಬೇಕಾಗುತ್ತದೆ. ಸಭೆಗೆ ಬರುವಂತೆ ಅಧಿಕಾರಿಗಳಿಗೆ ಸೂಚಿಸಿ, ನೊಟೀಸ್ ಕೊಡಲಾಗಿದೆ. ಆದರೂ ಇಬ್ಬರು ಅಧಿಕಾರಿಗಳು ಅನುಮತಿ ಪಡೆದು ಗೈರಾಗಿದ್ದರೆ, ಉಳಿದವರ ಮಾಹಿತಿ ಇಲ್ಲ. ಯೋಜನೆ ವಿಶೇಷ ಆಯುಕ್ತರು ಚುನಾವಣಾ ನಿಮಿತ್ತ ಹೋಗಿದ್ದಾರೆ. ರಂದೀಪ್ ಅವರು ಅನುಮತಿ ಪಡೆದು ಬೇರೆ ಕೆಲಸಕ್ಕೆ ಹೋಗಿದ್ದಾರೆ. ಉಳಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶೋಕಾಸ್ ನೊಟೀಸ್ ನೀಡಲಾಗುವುದು. ಅವರ ಉತ್ತರ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದರು.
ಇಂದಿರಾ ಕ್ಯಾಂಟೀನ್ ಮುಚ್ಚಬಾರದು :
ಇದೇ ವೇಳೆ ಇಂದಿರಾ ಕ್ಯಾಂಟೀನ್ ವಿಚಾರವೂ ಪಾಲಿಕೆ ಸಭೆಯಲ್ಲಿ ಪ್ರಸ್ತಾಪವಾಯಿತು. ಇಂದಿರಾ ಕ್ಯಾಂಟೀನ್ ಮುಚ್ಚುವ ತೀರ್ಮಾನಕ್ಕೆ ರಾಜ್ಯ ಸರ್ಕಾರ ಮುಂದಾಗ್ತಿದೆ ಅಂತ ಕಾಂಗ್ರೆಸ್ ಸದಸ್ಯರು ಆರೋಪಿಸಿದರು. ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ಮುಚ್ಚಬಾರದು ಅಂತ ಮೇಯರ್ ಬಳಿ ಮನವಿ ಮಾಡಿದರು. ಕ್ಯಾಂಟೀನ್ಗೆ ರಾಜ್ಯ ಸರ್ಕಾರ ಹಣ ನೀಡದಿದ್ದರೆ ಪಾಲಿಕೆಯೇ ಅದನ್ನ ಭರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪದ್ಮನಾಭ ರೆಡ್ಡಿ, ಇಂದಿರಾ ಕ್ಯಾಂಟೀನ್ ಮುಚ್ಚುವ ತೀರ್ಮಾನ ರಾಜ್ಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಬಡವರ ಹೆಸರಲ್ಲಿ ಊಟದ ತಪ್ಪು ಬಿಲ್ ಪಾವತಿಸಿ, ಗೋಲ್ಮಾಲ್ ಆಗ್ತಿದೆ ಅಂತ ಸಿಎಂಗೆ ದೂರು ಹೋಗಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸಿದೆ ಎಂದರು.