ಬೆಂಗಳೂರು: ಪೊಲೀಸ್ ವಶದಲ್ಲಿರುವಾಗಲೇ ಆರೋಪಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲು ನಗರ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗ್ತಿದೆ.
ವಿದ್ಯಾರಣ್ಯಪುರದಲ್ಲಿರುವ ಆರೋಪಿ ಸಿದ್ದಲಿಂಗಸ್ವಾಮಿ ಮನೆಗೆ ಹನುಮಂತನಗರ ಪೊಲೀಸರು ಮಹಜರಿಗೆ ಕರೆದುಕೊಂಡು ಬಂದಾಗ ಮನೆಯ ಕಿಚನ್ ಮೂಲಕ ತೆರಳಿ 2ನೇ ಮಹಡಿಯಿಂದ ಕೆಳಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ತನಿಖೆಯನ್ನು ಸಿಐಡಿಗೆ ನೀಡಲು ನಗರ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಿಶ್ವೇಶ್ವರಯ್ಯ ಲೇಔಟ್ನಲ್ಲಿ ಸೈಟ್ಗಳನ್ನು ಮರು ಹಂಚಿಕೆ ಮಾಡಿಕೊಡುವುದಾಗಿ ನಾಗರಾಜ್ ಎಂಬುವರನ್ನು ನಂಬಿಸಿ ನಕಲಿ ದಾಖಲೆ ಸೃಷ್ಟಿಸಿಕೊಂಡು 13 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪದಡಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ಇತ್ತೀಚೆಗಷ್ಟೇ ಆರೋಪಿ ಸಿದ್ದಲಿಂಗಸ್ವಾಮಿಯನ್ನು ಬಂಧಿಸಿದ್ದರು.
ದಾಖಲಾತಿಗೆ ಸಂಬಂಧಿಸಿದ ಕೆಲ ಕಾಗದ ಪತ್ರಗಳು ಹಾಗೂ ವಸ್ತುಗಳು ಮನೆಯಲ್ಲಿ ಇಟ್ಟಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದ ಎನ್ನಲಾಗ್ತಿದೆ. ಈ ಸಂಬಂಧ ಆರೋಪಿಯನ್ನು ಹನುಮಂತ ನಗರ ಪೊಲೀಸರು ನಿನ್ನೆ ಮಧ್ಯಾಹ್ನ ವಿದ್ಯಾರಣ್ಯಪುರದಲ್ಲಿರುವ ಆತನ ಮನೆಗೆ ಮಹಜರಿಗೆ ಕರೆದುಕೊಂಡು ಹೋಗಿದ್ದಾರೆ. ಮನೆಯಲ್ಲಿ ಹೆಂಡತಿ-ಮಗಳನ್ನು ನೋಡಿ ಮುಜುಗರಕ್ಕೆ ಒಳಗಾಗಿದ್ದಾನೆ. ನೀರು ಕುಡಿಯುವುದಾಗಿ ಹೇಳಿ ಪೊಲೀಸರಿಂದ ಬಿಡಿಸಿಕೊಂಡು ಅಡುಗೆ ಮನೆಯ ಮುಖಾಂತರ ತೆರಳಿ 2ನೇ ಮಹಡಿಯಿಂದ ಕೆಳಬಿದ್ದಿದ್ದಾನೆ. ತೀವ್ರ ಗಾಯಗೊಂಡ ಆರೋಪಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಓದಿ: ಮಹಜರಿಗೆ ಕರೆದುಕೊಂಡು ಹೋದಾಗ ಪತ್ನಿ-ಮಗಳ ಕಂಡು ಮುಜುಗರ: ಕಟ್ಟಡದಿಂದ ಹಾರಿ ಆರೋಪಿ ಆತ್ಮಹತ್ಯೆ!