ಬೆಂಗಳೂರು: ಹಲವು ದೇಶಗಳನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ರಾಜ್ಯಕ್ಕೂ ಕಾಲಿಟ್ಟಿದೆ. ಇವತ್ತು ಕರ್ನಾಟಕದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಅವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಅಮೆರಿಕಾದಿಂದ ಮಾರ್ಚ್ 1ರಂದು ಬೆಂಗಳೂರಿಗೆ ಸಾಫ್ಟ್ವೇರ್ ಇಂಜಿನಿಯರ್ ಆಗಮಿಸಿದ್ದರು. ಬೆಳಗ್ಗೆ 8.30 ಕ್ಕೆ ಅಮೆರಿಕಾದಿಂದ ಬಂದಿದ್ದು, ಅವರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತ ವ್ಯಕ್ತಿಯ ಪತ್ನಿ, ಮಗು ಜೊತೆಗೆ ಡ್ರೈವರ್ ಎಲ್ಲರನ್ನು ಪ್ರತ್ಯೇಕವಾಗಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಸುಮಾರು 40 ವರ್ಷ ಪ್ರಾಯದ ಬೆಂಗಳೂರು ಮೂಲದ ಟೆಕ್ಕಿಗೆ ಸೋಂಕು ತಗುಲಿದ್ದು, ಅವರು ಪ್ರಯಾಣ ಬೆಳೆಸಿದ ವಿಮಾನದಲ್ಲಿ ಇವರ ಪಕ್ಕ ಕುಳಿತ್ತಿದ್ದ ವ್ಯಕ್ತಿಗಳ ಬಗ್ಗೆಯೂ ಗಮನ ಹರಿಸುತ್ತಿದ್ದೇವೆ ಎಂದರು.
ಹೆಲ್ತ್ ಬುಲೆಟಿನ್ ವಿವರ ನೀಡಿದ ಸಚಿವರು:
ಇಂದು ಹೊಸದಾಗಿ 92 ಜನರನ್ನು ಅವಲೋಕನೆಗಾಗಿ ಇರಿಸಿದ್ದು, ಇಲ್ಲಿಯವರೆಗೆ ನಿಗಾ ಇರಿಸಲ್ಪಟ್ಟವರ ಸಂಖ್ಯೆ 982ಕ್ಕೆ ತಲುಪಿದೆ. 28 ದಿನಗಳ ಅವಲೋಕನಾ ಸಮಯವನ್ನು ಇಂದು 8 ಜನ ಮುಗಿಸಿದ್ದು ಇಲ್ಲಿಯವರೆಗೆ 266 ಜನ ಮುಗಿಸಿದ್ದಾರೆ. ಇಂದು ಮನೆಯಲ್ಲಿಯೇ 83 ಜನರನ್ನು ಪ್ರತ್ಯೇಕವಾಗಿ ಇರಿಸಿದ್ದು, ಇಲ್ಲಿಯವರೆಗೆ ಮನೆಯಲ್ಲೇ ಪ್ರತ್ಯೇಕವಾಗಿರಿಸಿದವರ ಸಂಖ್ಯೆ 700ಕ್ಕೆ ತಲುಪಿದೆ. 9 ಜನರನ್ನು ಇಂದು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿದ್ದು, ಈವರೆಗೆ 12 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿದಂತಾಗಿದೆ. ಇಂದು 16 ಜನರ ಮಾದರಿಯನ್ನು ಪರೀಕ್ಷೆಗೆ ಸಂಗ್ರಹಿಸಿದ್ದು ಈವರೆಗೆ 432 ಜನರ ಮಾದರಿ ಪರೀಕ್ಷೆ ಮಾಡಿದಂತಾಗಿದೆ. ಇಂದು 7 ಕೊರೊನಾ ನೆಗಟಿವ್ ವರದಿ ಬಂದಿದ್ದು, ಇಲ್ಲಿಯವರೆಗೆ 364 ವರದಿ ನೆಗೆಟಿವ್ ಬಂದಿದೆ. ಇಂದು ಮಾತ್ರ ಒಂದು ವರದಿ ದೃಢಪಟ್ಟಿದೆ ಎಂದು ವೈದ್ಯಕೀಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಹೈ ಅಲರ್ಟ್:
ರಾಜ್ಯದಲ್ಲಿ ಕೊರೊನಾ ದೃಢಪಟ್ಟ ಹಿನ್ನೆಲೆ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದ್ದು, ಕೇಂದ್ರ ಆರೋಗ್ಯ ಇಲಾಖೆ ಜೊತೆ ಚರ್ಚೆ ನಡೆಸಿದೆ. ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ಹಾಗೂ ಆತನಿಂದ ವೈರಾಣು ಹರಡದಂತೆ ಎಚ್ಚರಿಕೆ ವಹಿಸಿವುದು, ಆ ವ್ಯಕ್ತಿ ಓಡಾಡಿದ್ದ ಕಡೆಯೆಲ್ಲಾ ಪರಿಶೀಲನೆ ನಡೆಸಿ ಸೋಂಕು ಹರಡದಂತೆ ಕ್ರಮ ಕೈಗೊಳ್ಳುವ ಕುರಿತು ಸಮಾಲೋಚನೆ ನಡೆಸಿದೆ. ಪ್ರತಿಹಂತದ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಿದೆ.