ಬೆಂಗಳೂರು: ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆಡೆ ಬಂಧಿತ ಆರೋಪಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಎಫ್ಐಆರ್ಗಳ ಸಂಖ್ಯೆಯಲ್ಲೂ ಕೂಡ ಜಾಸ್ತಿಯಾಗಿದೆ. ಇಲ್ಲಿಯವರೆಗೆ 65 ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಗಲಭೆ ನಡೆದಾಗ ಬಹುತೇಕ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟಾಗಿತ್ತು. ಹೀಗಾಗಿ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಒಂದೊಂದು ಎಫ್ಐಆರ್ ದಾಖಲಿಸಿ ಆರೋಪಿಗಳು ಜೈಲಿನಲ್ಲಿಯೇ ಫಿಕ್ಸ್ ಆಗಬೇಕು. ಮುಂದೆ ಯಾರೂ ಈ ರೀತಿ ತಪ್ಪು ಮಾಡಬಾರದು ಎಂದು ಘಟನೆಯಿಂದ ತೊಂದರೆಗೊಳಗಾದವರ ಮನೆಗೆ ಪೊಲೀಸರು ತೆರಳಿ ದೂರು ನೀಡುವಂತೆ ಸೂಚಿಸಿ, ಪರಿಶೀಲನೆ ನಡೆಸಿದ್ದಾರೆ.
ಸದ್ಯ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಬರೋಬ್ಬರಿ 49 ಎಫ್ಐಆರ್ ದಾಖಲಾದರೆ, ಕೆ.ಜಿ ಹಳ್ಳಿ ಪೊಲೀಸ್ ಠಾಣೆ ಯಲ್ಲಿ 16 ಎಫ್ ಐ ಆರ್ ದಾಖಲಾಗಿವೆ. ಒಟ್ಟು ಇದುವರೆಗೂ ಗಲಭೆಗೆ ಸಂಬಂಧ ಪಟ್ಟಂತೆ 65 ಎಫ್ಐಆರ್ ದಾಖಲಾಗಿದೆ. ಸದ್ಯ ಇನ್ನೂ ಹೆಚ್ಚಿನ ಕೇಸ್ಗಳು ದಾಖಲಾಗುವ ಸಾಧ್ಯತೆ ಇದ್ದು, ಪೊಲೀಸರು ಎಫ್ಐಆರ್ ಆಧಾರದ ಮೇಲೆ ತನಿಖೆ ಶುರು ಮಾಡಿದ್ದಾರೆ.
ಒಂದೊಂದು ಎಫ್ಐಆರ್ ನಲ್ಲಿ ಒಂದೊಂದು ಐಪಿಸಿ ಸೆಕ್ಷನ್ ಹಾಕಲಾಗಿದೆ. ಮತ್ತೊಂದೆಡೆ ಅಮಾಯಕರು ಬಂಧನವಾಗಬಾರದೆಂದು ಪೊಲೀಸರು ಆರೋಪಿಗಳ ಮೊಬೈಲ್, ಟವರ್ ಲೊಕೇಷನ್ ನೋಡಿಕೊಂಡು ಆರೋಪಿಗಳು ಘಟನೆ ನಡೆದ ದಿನ ಎಲ್ಲಿದ್ದರು ಅನ್ನೋದರ ಬಗ್ಗೆ ತನಿಖೆ ನಡೆಸಿ ತದ ನಂತರ ಬಂಧಿಸುತ್ತಿದ್ದಾರೆ.
ಇನ್ನು ಬಂಧಿತ ಆರೋಪಿಗಳ ಪೈಕಿ ಬಹುತೇಕರು ಎಸ್ ಡಿ ಪಿ ಐ ಸಂಘಟನೆಯವರಾಗಿದ್ದಾರೆ. ನಿನ್ನೆ ರಾತ್ರಿ ಬಂಧಿತನಾದ ಆರೋಪಿ ವಾಜಿದ್ ಕೂಡ ಎಸ್ ಡಿಪಿಐ ಸಂಘಟನೆ ಜೊತೆ ಇದ್ದ ಮಾಹಿತಿ ಬಹಿರಂಗವಾಗಿದೆ. ಸದ್ಯ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಗಬಾರದು ಅನ್ನೋ ದೃಷ್ಟಿಯಿಂದ ಪೊಲೀಸರು ಸಾಕ್ಷಿ ಕಲೆ ಹಾಕ್ತಿದ್ದಾರೆ.