ಬೆಂಗಳೂರು: ವಿವಿಧ ಪ್ರಕರಣಗಳಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರೋಪಿಗಳಾಗಿ ಸಾಲು ಸಾಲು ರಾಜಕಾರಣಿಗಳು ವಿಚಾರಣೆಗೆ ನಿನ್ನೆ ಹಾಜರಾಗಿದ್ದರು.
ಬೇರೆ ಬೇರೆ ಪ್ರಕರಣಗಳಲ್ಲಿ ಅರೋಪಿಗಳಾಗಿ ಕೋರ್ಟ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವೆ ಉಮಾಶ್ರೀ, ಹಾಲಿ ಶಾಸಕರಾದ ಮುನಿರತ್ನ, ವಿಜಯಾನಂದ ಕಾಶಪ್ಪನವರ್, ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಸೇರಿ ಒಟ್ಟು 6 ಮಂದಿ ರಾಜಕಾರಣಿಗಳು ಕೋರ್ಟ್ಗೆ ಹಾಜರಾಗಿದ್ದರು. ಡಿ.ಕೆ.ಶಿವಕುಮಾರ್ ಸಿಟಿ ಸಿವಿಲ್ ಆವರಣದ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಐಟಿ ದಾಳಿ ಕುರಿತು ಐಟಿ ಇಲಾಖೆ ದಾಖಲಿಸಿದ್ದ ದಾಖಲೆಯಿಲ್ಲದೆ ಸಿಕ್ಕ 8.59 ಕೋಟಿ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾದರು.
ಮುನಿರತ್ನ ಅವರು ಜಾಲಹಳ್ಳಿಯಲ್ಲಿ ಅಕ್ರಮವಾಗಿ ವೋಟರ್ ಐಡಿ ಸಂಗ್ರಹ ಆರೋಪದಡಿ ನ್ಯಾಯಾಧೀಶರ ಮುಂದೆ ಹಾಜರಾದರು. ಜಾಲಹಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜರಾಜೇಶ್ವರಿ ನಗರ ಮತದಾರರ ವೋಟರ್ ಐಡಿಗಳ ಅಕ್ರಮ ಸಂಗ್ರಹ ಆರೋಪವನ್ನು ಮುನಿರತ್ನ ಎದುರಿಸುತ್ತಿದ್ದಾರೆ. ಜೊತೆಗೆ ಬಿಬಿಎಂಪಿ ಕಾಮಗಾರಿ ನಕಲಿ ಬಿಲ್ ಕೇಸ್ ವಿಚಾರಣೆ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಿದರು. ವಿಜಯಾನಂದ ಕಾಶಪ್ಪನವರ್ ಸ್ಕೈ ಬಾರ್ನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಗಲಾಟೆ ಮಾಡಿದ ಆರೋಪದಡಿ ಅರೋಪಿಯಾಗಿ ಹಾಜರಾದರು.
ಸಾರ್ವಜನಿಕ ಸಭೆಯಲ್ಲಿ ಹಾಲಪ್ಪ ಅತ್ಯಾಚಾರಿ ಅಂತಾ ಭಾಷಣ ಮಾಡಿದ ಆರೋಪದಡಿ ಮಾಜಿ ಸಚಿವೆ ಉಮಾಶ್ರಿ ಆರೋಪಿಯಾಗಿ ಕೋರ್ಟ್ಗೆ ಹಾಜರಾದರು. ತುಮಕೂರಿನಲ್ಲಿ ಭಾಷಣ ಮಾಡುವ ಭರದಲ್ಲಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಹರತಾಳು ಹಾಲಪ್ಪ ಉಮಾಶ್ರೀ ಹೇಳಿಕೆಯ ಸಂಬಂಧ ಸಾಕ್ಷಿ ದಾಖಲಿಸಲು ಹಾಜರಾದರು. ನ್ಯಾಯಾಲಯ ಕಳೆದ ಎರಡು ಬಾರಿ ಸಾಕ್ಷಿ ಹೇಳಿಕೆಗೆ ಸಮನ್ಸ್ ನೀಡಿದರೂ ಗೈರಾಗಿದ್ದರು. ನಿನ್ನೆ ಹೇಳಿಕೆ ದಾಖಲಿಸಿದ್ದರೆ ಕೇಸ್ ಕ್ಲೋಸ್ ಮಾಡುವುದಾಗಿ ನ್ಯಾಯಾಲಯ ತಿಳಿಸಿದ್ದರಿಂದ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಬಂದರು. ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯ ಜೂ. 22ಕ್ಕೆ ತೀರ್ಪು ಕಾಯ್ದಿರಿಸಿದೆ.