ದೇವನಹಳ್ಳಿ/ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರಸುದಾರರಿಲ್ಲದ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ನಡೆಯಿತು.
ಏರ್ಪೋರ್ಟ್ನ ಅರೈವಲ್ಸ್ ಗೇಟ್ ಬಳಿಯ ಲಗೇಜ್ ಸಾಗಿಸುವ ಟ್ರಾಲಿ ಮೇಲೆ ಬ್ಯಾಗ್ವೊಂದು ಯಾರೂ ವಾರಸುದಾರರಿಲ್ಲದೆ ಏಕಾಂಗಿಯಾಗಿ ಪತ್ತೆಯಾಗಿತ್ತು. ಇದನ್ನ ಗಮನಿಸಿದ ಏರ್ಪೋರ್ಟ್ ಭದ್ರತಾ ಸಿಬ್ಬಂದಿ, ಸಾಕಷ್ಟು ಸಮಯ ಕಾದರೂ ಬ್ಯಾಗ್ ತೆಗೆದುಕೊಳ್ಳಲು ಯಾರೂ ಬರಲಿಲ್ಲ. ಹೀಗಾಗಿ ಏಕಾಂಕಿಯಾಗಿದ್ದ ಬ್ಯಾಗ್ ಕಂಡ ಏರ್ಪೋರ್ಟ್ ಭದ್ರತಾ ಸಿಬ್ಬಂದಿ ಸಾಕಷ್ಟು ಅನುಮಾನ ಪಡುವಂತಾಯಿತು.
ತದನಂತರ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಯಂತ್ರದ ಮೂಲಕ ಭದ್ರತಾ ಸಿಬ್ಬಂದಿ ಅನುಮಾನಾಸ್ಪದ ಬ್ಯಾಗನ್ನು ಪರಿಶೀಲನೆ ನಡೆಸಿದರು. ಕೊನೆಗೆ ಯಾವುದೇ ಅನುಮಾನಸ್ಪದ ರೀತಿಯ ಸ್ಫೋಟಕ ವಸ್ತುಗಳಿಲ್ಲವೆಂದು ಅರಿವಿಗೆ ಬಂದ ನಂತರ ಟ್ರಾಲಿ ಸಮೇತ ಬ್ಯಾಗನ್ನು ಭದ್ರತಾ ಸಿಬ್ಬಂದಿ ಕೊಂಡೊಯ್ದರು. ಸದ್ಯ ಬ್ಯಾಗನ್ನು ಏರ್ಪೋರ್ಟ್ ಟರ್ಮಿನಲ್ ಮ್ಯಾನೇಜರ್ ಕಚೇರಿಗೆ ಕೊಡಲಾಗಿದೆ.
ಏರ್ಪೋರ್ಟ್ನಲ್ಲಿ ಕೆಲ ಪ್ರಯಾಣಿಕರು ಆತುರದಲ್ಲಿ ಬ್ಯಾಗ್ ಬಿಟ್ಟು ಹೋಗುವ ಈ ರೀತಿಯ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ. ಆದ್ರೆ ಅದನ್ನು ನಿರ್ಲಕ್ಷ್ಯ ವಹಿಸುವಂತಿಲ್ಲ. ಏರ್ಪೋರ್ಟ್ನಲ್ಲಿ ಭದ್ರತೆಯ ಹಿತದೃಷ್ಟಿಯಿಂದ ಪರಿಶೀಲನೆ ನಡೆಸಲಾಗುತ್ತದೆ.