ಬೆಂಗಳೂರು : ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರಾಗಿ ನನ್ನನ್ನು ನೇಮಿಸಿದ್ದಕ್ಕೆ ಅಸಮಾಧಾನವಿಲ್ಲ ಎಂದು ಶಾಸಕ ಮಹೇಶ್ ಕುಮಟಳ್ಳಿ ಸ್ಪಷ್ಟಪಡಿಸಿದ್ದಾರೆ.
ಶಾಸಕರ ಭವನದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ನನ್ನನ್ನು ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ಆದೇಶ ಹೊರಡಿಸಿದ್ದಾರೆ. ನಾಳೆ ಬೆಳಗ್ಗೆ 11.30ಕ್ಕೆ ಅಧಿಕಾರ ಸ್ವೀಕಾರ ಮಾಡುತ್ತೇನೆ. ನಾನು ಯಾವುದೇ ಸ್ಥಾನಮಾನ ಕೊಡಿ ಎಂದು ಒತ್ತಾಯಿಸಿಲ್ಲ. ಸರ್ಕಾರ ಬರಲು ಒಂದು ವರ್ಷ ಏನೆಲ್ಲಾ ರಾಜಕೀಯ ಸನ್ನಿವೇಶಗಳು ಬದಲಾದವು ಎಂಬುದು ಗೊತ್ತಿದೆ. ಜನಪರ ಕೆಲಸ ಮಾಡಲು ಅಧಿಕಾರ ಬೇಕು ಎಂದೇನಿಲ್ಲ.
ಪಕ್ಷ ಸೇರ್ಪಡೆಯಾದ ಬಳಿಕ ಪಕ್ಷದ ತೀರ್ಮಾನಕ್ಕೆ ಬದ್ಧ, ಅಸಮಾಧಾನದ ಪ್ರಶ್ನೆಯೇ ಇಲ್ಲ. ಬಿಜೆಪಿ ವರಿಷ್ಠರು ನೀಡಿದ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ಶಕ್ತಿ ಮೀರಿ ನಿಭಾಯಿಸುತ್ತೇನೆ. ಸ್ಲಂ ಬೋರ್ಡ್ ಜವಾಬ್ದಾರಿಯುತ ಮತ್ತು ಸಂಪುಟ ದರ್ಜೆಯ ಸ್ಥಾನಮಾನವಾಗಿದೆ ಎಂದರು.