ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಯಮ್ಮ ಲಕ್ಷ್ಮೀನಾರಾಯಣ ಇಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ತತ್ವ ಸಿದ್ಧಾಂತ ನಂಬಿ ಪಕ್ಷಕ್ಕೆ ಸೇರಿದ ಜಯಮ್ಮಗೆ ಬಿಜೆಪಿ ಧ್ವಜ ನೀಡಿ ಎಂಟಿಬಿ ನಾಗರಾಜ್ ಸ್ವಾಗತಿಸಿದರು.
ದೊಡ್ಡಬಳ್ಳಾಪುರ ತಾಲೂಕು ಸಾಸಲು ಕ್ಷೇತ್ರದಿಂದ ಜಯಮ್ಮ ಲಕ್ಷ್ಮೀನಾರಾಯಣ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ಧರು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದು, ಮೊದಲ ಅವಧಿಯಲ್ಲಿ ವಿ ಪ್ರಸಾದ್ ಎರಡು ವರ್ಷ ಅಧ್ಯಕ್ಷರಾಗಿದ್ದು, ನಂತರ ಎರಡು ವರ್ಷಗಳು ಜಯಮ್ಮ ಲಕ್ಷ್ಮೀನಾರಾಯಣ ಅಧ್ಯಕ್ಷರಾಗಿದ್ರು, ಐದು ವರ್ಷಗಳ ಪಂಚಾಯತ್ ಅವಧಿ ಇನ್ನೈದು ತಿಂಗಳಲ್ಲಿ ಪೂರ್ಣವಾಗಲಿದ್ದು ಈ ಸಮಯದಲ್ಲಿ ಜಯಮ್ಮ ರವರಿಗೆ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷದ ಮುಖಂಡರಾದ ಕೃಷ್ಣ ಬೈರೇಗೌಡ ಮತ್ತು ಟಿ. ವೆಂಕಟರಮಣಯ್ಯ ಸೂಚಿಸಿದ್ದರು.
ಮುಖಂಡರ ಮಾತಿಗೆ ಒಪ್ಪದ ಜಯಮ್ಮ ರಾಜೀನಾಮೆ ಕೊಡಲು ನಿರಾಕರಿಸಿದ್ದರು. ಕಾಂಗ್ರೆಸ್ ಪಕ್ಷದ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಿದರು. ಈ ಸಮಯದಲ್ಲಿ ಮಾಜಿ ಸಚಿವ ಕೃಷ್ಣ ಬೈರೇಗೌಡ ಮತ್ತು ದೊಡ್ಡಬಳ್ಳಾಪುರ ಶಾಸಕ ಟಿ ವೆಂಕಟರಮಣಯ್ಯ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದರು. ಅಕ್ಟೋಬರ್ 27 ಕ್ಕೆ ಅವಿಶ್ವಾಸ ಸೂಚನೆ ಸಭೆ ನಿಗದಿ ಮಾಡಲಾಗಿತ್ತು. ಆದರೆ, ಅವಿಶ್ವಾಸ ನಿರ್ಣಯಕ್ಕೂ ಮುನ್ನವೇ ಅಕ್ಟೋಬರ್ 23ರಂದೇ ಜಯಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇಂದು ಎಂಟಿಬಿ ನಾಗರಾಜ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.