ದೊಡ್ಡಬಳ್ಳಾಪುರ : ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾವಳಿ ವೇಳೆ ಜಗಳ ಶುರುವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಚಾಕುವಿನಿಂದ ಇಬ್ಬರು ಯುವಕರ ಹೊಟ್ಟೆ, ಗುಪ್ತಾಂಗಕ್ಕೆ ಇರಿಯಲಾಗಿದೆ. ಪರಿಣಾಮ ತೀವ್ರ ಗಾಯಗಳಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ದೊಡ್ಡಬೆಳವಂಗಲದ ಭರತ್ (23) ಹಾಗು ಪ್ರತೀಕ್ (17) ಎಂದು ಗುರುತಿಸಲಾಗಿದೆ.
ನಡೆದಿದ್ದೇನು?: ಇಂದು ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ಮೈದಾನದಲ್ಲಿ ವಾಹನ ಪಾರ್ಕಿಂಗ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಹಾಗೂ ಹುಲಿಕುಂಟೆ ಗ್ರಾಮದ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಅಷ್ಟಕ್ಕೆ ಸುಮ್ಮನಾಗದ ಯುವಕರು ಬಸ್ ನಿಲ್ದಾಣಕ್ಕೆ ಬಂದು ಹೊಡೆದಾಟಕ್ಕಿಳಿದಿದ್ದಾರೆ. ಈ ವೇಳೆ ಭರತ್ ಹಾಗೂ ಪ್ರತೀಕ್ಗೆ ಎದುರಾಳಿ ಗುಂಪಿನ ಯುವಕರು ಗುಪ್ತಾಂಗ ಹಾಗೂ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಬಲವಾಗಿ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕರನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಯುವಕರು ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಉದ್ರಿಕ್ತ ಯುವಕರ ಗುಂಪಿನತ್ತ ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿನ್ನದ ಫ್ಯಾಕ್ಟರಿಯಲ್ಲಿ 1.56 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಉದ್ಯೋಗಿಗಳು: ನಾಲ್ವರ ಬಂಧನ
ತಾಯಿಯ ಕಣ್ಣೀರು: ಕ್ರಿಕೆಟ್ ಸೇರಿದಂತೆ ವಿವಿಧ ಪಂದ್ಯಾವಳಿ ಆಯೋಜಿಸಿ ಜನರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಇದೇ ಟೂರ್ನಿಯಿಂದಾಗಿ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. ಮೃತ ಯುವಕನ ತಾಯಿಯೊಬ್ಬರು "ನಮಗೆ ಯಾವುದೇ ಪಕ್ಷ ಬೇಡ, ನನಗೆ ನನ್ನ ಮಗನನ್ನು ಕೊಡಿ" ಎಂದು ಕಣ್ಣೀರು ಹಾಕುತ್ತಿದ್ದರು.
ಇದನ್ನೂ ಓದಿ: ಉಡುಪಿಯಲ್ಲಿ ಅಮಾನವೀಯ ಘಟನೆ: ರಸ್ತೆಯಲ್ಲಿ ಮೃತದೇಹ ಎಸೆದು ಹೋದ ಹಣ್ಣಿನ ವ್ಯಾಪಾರಿಗಳ ವಿಡಿಯೋ ವೈರಲ್
ಸ್ಥಳೀಯರಾದ ಚಂದ್ರೇಗೌಡ ಮಾತನಾಡಿ, "ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಬಂದು ವಿಚಾರಿಸಿದರು. ನಂತರ ನಾವು ವಿವರ ನೀಡಿದೆವು. ಅವರು ಅಲ್ಲಿಂದ ಹೊರಟು ಹೋದರು. ಆಮೇಲೆ ಹುಡುಗರು ನಮಗೆ ಮೆಸೇಜ್ ಮಾಡಿದರು. ಬೇಕರಿ ಹತ್ತಿರ 15 ಜನ ಚಾಕು ಹಿಡಿದುಕೊಂಡು ನಿಂತಿದ್ದಾರೆ ಅಂತ ಹೇಳಿದರು. ನಾವು ಪೊಲೀಸರಿಗೆ ವಿಷಯ ಮುಟ್ಟಿಸೋಣ ಎನ್ನುವಷ್ಟರಲ್ಲಿ ಘಟನೆ ನಡೆದಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಆರ್ಡರ್ ಸಪ್ಲೈ ತಡವಾಗಿದ್ದಕ್ಕೆ ಬಾರ್ ಸಿಬ್ಬಂದಿಯ ಹತ್ಯೆ: ಇಬ್ಬರು ಸೆರೆ