ಬೆಂಗಳೂರು: ಲೋಕಸಭಾ ಚುನಾವಣೆ ರಂಗು ದಿನೇ ದಿನೇ ಏರುತ್ತಿದೆ. ನಗರದಲ್ಲೂ ಸಹ ಚುನಾವಣೆಯ ಕಾವು ಜೋರಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಜಂಟಿ ಬೃಹತ್ ಪರಿವರ್ತನಾ ಸಮಾವೇಶ ನೆಲಮಂಗಲದ ಬಿಐಸಿಇ ಮೈದಾನದಲ್ಲಿ ಇಂದು ಸಂಜೆ ನಡೆಯಲ್ಲಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡ ನೇತೃತ್ವದದಲ್ಲಿ ಬೃಹತ್ ಪರಿವರ್ತನಾ ಸಮಾವೇಶ ಆಯೋಜನೆ ಮಾಡಲಾಗಿದೆ. ಎರಡು ಪಕ್ಷಗಳ ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಸುತ್ತಮುತ್ತಲಿನ 70 ವಿಧಾನಸಭಾ ಕ್ಷೇತ್ರದಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲ್ಲಿದ್ದಾರೆ. ಸಾರ್ವಜನಿಕ ಆನೂಕೂಲಕ್ಕಾಗಿ 1 ಲಕ್ಷಕ್ಕೂ ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬಿಸಿಲು ಹೆಚ್ಚಿರುವ ಕಾರಣಕ್ಕೆ ಸಂಜೆಯ 5 ನಂತರ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ . ದಿನೇಶ್ ಗುಂಡೂರಾವ್, ದೇವೇಗೌಡರ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಭಾಷಣ ಮಾಡಲಿದ್ದಾರೆ. ರಾಹುಲ್ ಗಾಂಧಿ ಬರುವ ಮುನ್ನ ಎರಡು ಪಕ್ಷದ ಮುಖಂಡರು ಭಾಷಣ ಮಾಡಲ್ಲಿದ್ದಾರೆಂದು ಕಾರ್ಯಕ್ರಮ ಉಸ್ತುವಾರಿ ಹೊತ್ತಿರುವ ಶಾಸಕ ಸೋಮಶೇಖರ್ ಮಾಹಿತಿ ನೀಡಿದರು.

ಮುರಿದು ಬಿದ್ದ ಸ್ವಾಗತ ಕಾಮಾನು:
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ಬೃಹತ್ ಪರಿವರ್ತನಾ ಸಮಾವೇಶದಲ್ಲಿ ವೇದಿಕೆಯ ಪ್ರವೇಶ ದ್ವಾರದಲ್ಲಿ ಹಾಕಲಾಗಿದ್ದ ಬೃಹತ್ ಬ್ಯಾನರ್ ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ.
ಕಾರ್ಯಕ್ರಮ ನಡೆಯುವ ಮುನ್ನವೇ ಬ್ಯಾನರ್ ಮುರಿದು ಬಿದ್ದಿದ್ದರಿಂದ ಮತ್ತೆ ಅದರಲ್ಲೂ ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ.