ದೊಡ್ಡಬಳ್ಳಾಪುರ (ಬೆಂ.ಗ್ರಾ): ಇತ್ತೀಚೆಗೆ ಅಯೋಧ್ಯೆಯ ವಿವಾದದ ಬಗ್ಗೆ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪನ್ನು ರದ್ದು ಮಾಡಿ ಪ್ರಾಚೀನ ಬೌದ್ಧ ಸ್ಮಾರಕವೆಂದು ಘೋಷಣೆ ಮಾಡಿ ಸೂಕ್ತ ರಕ್ಷಣೆ ಕೊಡುವಂತೆ ಕೋರಿ ದಲಿತ ಸಂಘಟನೆಗಳ ಸದಸ್ಯರು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಶತಮಾನಗಳ ವಿವಾದವಾಗಿದ್ದ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿಯ ಕುರಿತು ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಅದರೆ ನಿಜವಾದ ಇತಿಹಾಸವೇ ಬೇರೆಯಾಗಿದೆ. 2600 ವರ್ಷಗಳ ಹಿಂದೆ ಅಯೋಧ್ಯೆಯನ್ನು ಸಾಕೇತ ಎಂದು ಕರೆಯುತ್ತಿದ್ದರು. ಈ ಸ್ಥಳ ರಾಜ ಪಸೇನನ ಆಳ್ವಿಕೆಗೆ ಒಳಪಟ್ಟಿತ್ತು. ಆ ರಾಜ್ಯದ ಶ್ರೀಮಂತನ ಮಗಳಾದ ವಿಸಾಕ ಎಂಬ ಬೌದ್ಧ ಉಪಾಸಕಿ ಸುಮಾರು 6 ಕೋಟಿ ವೆಚ್ಚದಲ್ಲಿ ಬೌದ್ಧವಿಹಾರವನ್ನ ನಿರ್ಮಿಸಿದ್ದರು. ಅದು ರಾಜ್ಯದ ಪೂರ್ವಭಾಗದಲ್ಲಿ ಇದ್ದುದರಿಂದ ಅದನ್ನು ಪಾಳಿಬಾಷೆಯಲ್ಲಿ ಪುಬ್ಬಾರಾಮ ವಿಹಾರ ಎಂದು ಕರೆಯುತ್ತಿದ್ದರು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಾಜು ಸಣ್ಣಕ್ಕಿ ತಿಳಿಸಿದರು.
ಇದಕ್ಕೆ ಪೂರಕವಾಗಿ ಯುನೆಸ್ಕೋ ವತಿಯಿಂದ ನಡೆಸಿದ ಪ್ರಾಚ್ಯವಸ್ತು ಸಂಶೋಧನೆಯಲ್ಲಿ ಬಾಬರಿ ಮಸೀದಿ ಸ್ಥಳದಲ್ಲಿ ಹಿಂದು-ಮುಸ್ಲಿಂ ಧರ್ಮದ ಧಾರ್ಮಿಕ ಚಿಹ್ನೆಗಳು, ನಂತರ ಬೌದ್ಧ ಧರ್ಮದ ಶಿಲ್ಪಕಲೆಗಳು ಪತ್ತೆಯಾಗಿವೆ ಎಂದು ಪತ್ರಿಕೆಯೊಂದು ತನ್ನ ವರದಿಯಲ್ಲಿ ಪ್ರಕಟಿಸಿದೆ. ಇತ್ತೀಚೆಗೆ ಬಾಬರಿ ಮಸೀದಿ ಅಡಿಯಲ್ಲಿ ಕಾಮಗಾರಿ ಮಾಡುವಾಗ ಹಲವಾರು ಬೌದ್ಧ ಸ್ಥೂಪಗಳು, ಬದ್ಧನ ಮೂರ್ತಿಗಳು ಸೇರಿದಂತೆ ಬೌದ್ಧ ದರ್ಮದ ನೂರಾರು ಚಿಹ್ನೆಗಳು ದೊರೆತಿವೆ. ಜಗತ್ತಿಗೆ ಭಾರತ ಬುದ್ಧನ ಮೂಲಕ ಪರಿಚಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬುದ್ಧನ ಪಂಚಶೀಲಗಳು, ಮದ್ಯಮ ಮಾರ್ಗ ಜಗತ್ತಿಗೆ ಜ್ಙಾನದ ಬೆಳಕು ನೀಡಿದ್ದು, ನಮ್ಮ ಸಂವಿಧಾನದಲ್ಲೂ ಸಹ ಬೌದ್ಧ ಧರ್ಮದ ಲಾಂಛನಗಳನ್ನು ರಾಷ್ಟ್ರೀಯ ಚಿಹ್ನೆಗಳಾಗಿ ಸೇರಿಸಲಾಗಿದೆ. ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಈ ವಿಹಾರವನ್ನು ಪ್ರಾಚೀನ ಬೌದ್ಧ ಸ್ಮಾರಕ ಎಂದು ಘೋಷಣೆ ಮಾಡಿ ಸೂಕ್ತ ರಕ್ಷಣೆ ನೀಡಬೇಕೆಂದು ಎಂದು ದಲಿತ ಸಂಘಟನೆಗಳ ಸದಸ್ಯರು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.